ಜಗತ್ಸಿಂಗ್ಪುರ್: ಪ್ರೀತಿಸಿ ಕೈಕೊಟ್ಟ ಒಡಿಶಾದ ತಿರ್ತೊಲ್ ಶಾಸಕ ಬಿಜಯ್ ಶಂಕರ್ ದಾಸ್ಗೆ ಒಡಿಶಾ ಹೈಕೋರ್ಟ್ ಶಾಕ್ ನೀಡಿದೆ. ಶಾಸಕನ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ಪ್ರಿಯತಮೆ ಸೋಮಾಲಿಕಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಷ್ಕರಿಸಿದೆ.
ನ್ಯಾಯಮೂರ್ತಿ ಎಸ್ಕೆ ಪನಿಗ್ರಹಿ ನೇತೃತ್ವದ ಏಕಸದಸ್ಯ ಪೀಠವು ಸೋಮಲಿಕಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ದೂರು ನೀಡಿದರೂ ಶಾಸಕ ಬಿಜಯ್ ಶಂಕರ್ ದಾಸ್ ವಿರುದ್ಧ ಯಾವುದೇ ಪ್ರಕರಣವನ್ನು ಪೊಲೀಸರು ದಾಖಲಿಸುತ್ತಿಲ್ಲ. ಈ ವಿಚಾರವನ್ನು ಜಗತ್ಸಿಂಗ್ಪುರ್ ಪೊಲೀಸ್ ವರಿಷ್ಠಾಧಿಕಾರಿ ಅವರ ಗಮನಕ್ಕೂ ತರಲಾಗಿದೆ. ಆದರೆ, ಅವರು ಕೂಡ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಒಡಿಶಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದೀಗ ತೀರ್ಪು ನೀಡಿರುವ ಹೈಕೋರ್ಟ್ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶದ ಪ್ರತಿಯೊಂದಿಗೆ ಹೊಸ ದೂರಿನ ಜೊತೆಗೆ ಜಗತ್ಸಿಂಗ್ಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಸೊಮಾಲಿಕಾ ಅವರಿಗೆ ಕೋರ್ಟ್ ಸೂಚಿಸಿದೆ. ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸ್ ಠಾಣೆಗೂ ನ್ಯಾಯಾಲಯ ತಿಳಿಸಿದೆ.
ಕೋರ್ಟ್ ತೀರ್ಪಿನ ಬೆನ್ನಲ್ಲೇ ಸೊಮಾಲಿಕಾ, ಜಗತ್ಸಿಂಗ್ಪುರ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸೊಮಾಲಿಕಾ, ಬಹಳ ಸಮಯದಿಂದ ನನ್ನ ಪ್ರಕರಣವನ್ನು ದಾಖಲಿಸರಲ್ಲಿಲ್ಲ. ಹಾಗಾಗಿ ಹೈಕೋರ್ಟ್ ಮಧ್ಯಪ್ರವೇಶ ಮಾಡುವಂತೆ ಕೋರಿದ್ದೆ. ಹೈಕೋರ್ಟ್ನ ಆದೇಶದೊಂದಿಗೆ, ಜಗತ್ಸಿಂಗ್ಪುರ ಠಾಣಾ ಪೊಲೀಸರು ನನ್ನ ಪ್ರಕರಣವನ್ನು ದಾಖಲಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿಂದೆ ಪ್ರಕರಣದ ದಾಖಲಾತಿಗಾಗಿ ಎಸ್ಪಿ ಅವರನ್ನು ಸಂಪರ್ಕಿಸಿದ್ದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಹೈಕೋರ್ಟ್ನ ಬಾಗಿಲು ತಟ್ಟಬೇಕಾಯಿತು ಎಂದಿದ್ದಾರೆ.
ಏನಿದು ಪ್ರಕರಣ?
ಪ್ರೇಮ ವಿವಾಹ ಮಾಡಿಕೊಳ್ಳಲು ಮೇ 17ರಂದು ಬಿಜಯ್ ಮತ್ತು ಸೋಮಾಲಿಕಾ ಜಗತ್ಸಿಂಗ್ಪುರದಲ್ಲಿರುವ ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ದಿನಾಂಕ ನಿಗದಿಯಾದ ಪ್ರಕಾರ ಜೂನ್ 17ರಂದು ಕೋರ್ಟ್ ಮುಂದೆ ಇಬ್ಬರು ಹಾಜರಾಗಬೇಕಿತ್ತು. ಸರಿಯಾದ ಸಮಯಕ್ಕೆ ಸೋಮಾಲಿಕಾ ಹಾಜರಾದರೆ, ಬಿಜಯ್ ಮಾತ್ರ ಬರಲೇ ಇಲ್ಲ. ರಿಜಿಸ್ಟ್ರಾರ್ ಕಚೇರಿ ಬಳಿ ಬರುವಂತೆ ನಾನು ಮತ್ತು ನನ್ನ ಪಾಲಕರು ಬಿಜಯ್ ಅವರನ್ನು ಸಂಪರ್ಕಿಸಿ ತಿಳಿಸಿದ್ದೆವು. ಆದರೆ, ಆತ ಬರಲೇ ಇಲ್ಲ. ಮತ್ತೊಬ್ಬಳ ಜತೆ ಸಂಬಂಧ ಹೊಂದಿರಬಹುದು ಎಂಬ ಗುಮಾನಿ ಶುರುವಾಗಿದೆ. ಅದಕ್ಕಾಗಿಯೇ ಆತ ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾನೆ. ನಾನು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸೋಮಾಲಿಕಾ ಎಚ್ಚರಿಕೆ ನೀಡಿದ್ದರು.
ವರದಿಗಳ ಪ್ರಕಾರ, ಶಾಸಕ ಬಿಜಯ್ ಮತ್ತು ಸೊಮಾಲಿಕಾ ನಡುವೆ ಎಸ್ವಿಎಂ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಪರಸ್ಪರ ಪರಿಚಯವಿತ್ತು ಮತ್ತು ಪ್ರೇಮಾಂಕುರವು ಆಗಿತ್ತು. ಅಲ್ಲದೆ, ದೈಹಿಕ ಸಂಬಂಧವು ಇಬ್ಬರ ನಡುವೆ ಇತ್ತು ಎಂದು ತಿಳಿದುಬಂದಿದೆ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಇಬ್ಬರ ಸಂಬಂಧ ನಂತರದ ದಿನಗಳಲ್ಲಿ ವೈಮನಸ್ಸಿನಿಂದಾಗಿ ಬಿರುಕು ಮೂಡಲು ಆರಂಭಿಸಿತು. ಕಳೆದ ಪಂಚಾಯತ್ ಚುನಾವಣೆಯ ಸಮಯದಲ್ಲಿ ಸೋಮಾಲಿಕಾ ತನ್ನ ವೈಯಕ್ತಿಕ ವಿಡಿಯೋವನ್ನು ಸಾರ್ವಜನಿಕಗೊಳಿಸಿದರು. ಈ ಬಗ್ಗೆ ಎಸ್ಪಿ ಅವರನ್ನೂ ಸಂಪರ್ಕಿಸಿದ್ದರು. ಇದಾದ ಬಳಿಕ ಇಬ್ಬರನ್ನು ಕರೆಸಿ, ಸಂಧಾನ ಮಾಡಿದ್ದರು. ಈ ವೇಳೆ ರಿಜಿಸ್ಟ್ರರ್ ಮದುವೆಗೆ ಬಿಜಯ್ ಒಪ್ಪಿಕೊಂಡಿದ್ದ. ಆದರೆ, ಬಿಜಯ್ ಇದೀಗ ಮದುವೆಗೂ ಬಂದಿಲ್ಲ ಮತ್ತು ಸ್ಪಷ್ಟನೆ ನೀಡಲು ತಯಾರಿಲ್ಲದಿರುವುದು ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಸೊಮಾಲಿಕಾ ಹೇಳಿದ್ದರು. (ಏಜೆನ್ಸೀಸ್)
MLA ಜತೆ ಲವ್ ಅಫೇರ್: ಇನ್ನೇನು ಮದ್ವೆ ಆಗಬೇಕೆನ್ನುವಷ್ಟರಲ್ಲಿ ಯುವತಿಗೆ ಕಾದಿತ್ತು ಬಿಗ್ ಶಾಕ್!
ಆಸ್ಪತ್ರೆಗೆ ಹೋಗುವಾಗ ಗರ್ಭಿಣಿ ಪತ್ನಿ, ಪತಿ ಸಜೀವ ದಹನ: ನಿಗೂಢ ಭೇದಿಸಲಾಗದೇ ಅಧಿಕಾರಿಗಳು ಕಂಗಾಲು
ವಾಂತಿ-ಭೇದಿ ಅಂತ ಆಸ್ಪತ್ರೆಗೆ ಹೋದ ಜೂನಿಯರ್ ಡ್ಯಾನ್ಸರ್ ವಾಪಸ್ ಬರಲೇ ಇಲ್ಲ!