ರಾಮನಗರ: ಮರಾಠ ಮೀಸಲಾತಿ ವಿಚಾರದಲ್ಲಿ ಮಹಾರಾಷ್ಟ್ರದಲ್ಲಿ ಉಂಟಾಗಿರುವ ಉದ್ವಿಘ್ನತೆಯ ನಡುವೆ ಕರ್ನಾಟಕದ ಸರ್ಕಾರಿ ಬಸ್ಗಳಿಗೆ ಬೆಂಕಿ ಇಡುತ್ತಿರುವ ಮರಾಠಿ ಪ್ರತಿಭಟನಾಕಾರರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ರಾಮನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಹಾರಾಷ್ಟ್ರದಲ್ಲಿ ಮೀಸಲಾತಿ ವಿಚಾರಕ್ಕೆ ಹೋರಾಟ ಮಾಡ್ತಿದ್ದಾರೆ. ಕೆಲವೆಡೆ ನಮ್ಮ ಬಸ್ಗಳನ್ನು ಸುಟ್ಟಿದ್ದಾರೆ, ಬಸ್ ಸುಡುವುದಕ್ಕೂ, ಮೀಸಲಾತಿಗೂ ಯಾವುದೇ ಸಂಬಂಧ ಇಲ್ಲ. ಅವರು ಮೀಸಲಾತಿಗೆ ಹೋರಾಟ ಮಾಡಿಕೊಳ್ಳಲಿ. ಆದರೆ ಈ ರೀತಿಯ ಉದ್ದಟತನ ಸರಿಯಿಲ್ಲ ಎಂದು ಎಚ್ಚರಿಕೆ ನೀಡಿದರು.
ನಮ್ಮ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲು ಹೇಳಿದ್ದೀನಿ. ಅವರು ಮಹಾರಾಷ್ಟ್ರ ಮುಖ್ಯಕಾರ್ಯದರ್ಶಿಗೆ ಪತ್ರ ಬರೆಯಲಿದ್ದಾರೆ. ಯಾರು ಯಾರು ಬಸ್ ಸುಟ್ಟಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹೇಳಿದ್ದೇನೆ. ಅವರ ಬಸ್ಸುಗಳೂ ಕೂಡಾ ನಮ್ಮ ಕಡೆ ಬರುತ್ತಲ್ವಾ? ನಮ್ಮವರು ಏನಾದ್ರೂ ಮಾಡ್ತಾರಾ? ನಮಗೂ ಮಹಾರಾಷ್ಟ್ರ ಗಲಾಟೆಗೂ ಏನಾದ್ರೂ ಸಂಬಂಧ ಇದೆಯಾ? ಮೀಸಲಾತಿ ಹೋರಾಟ ಅವರ ಆಂತರಿಕ ವಿಚಾರ. ಆದರೆ, ನಮ್ಮ ಬಸ್ಸುಗಳಿಗೆ ಹಾನಿ ಮಾಡ್ತಿರೋದು ತಪ್ಪು. ಯಾರೋ ಕಿಡಿಗೇಡಿಗಳು ಈ ಕೃತ್ಯ ಮಾಡಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಪ್ರತ್ಯೇಕ ರಾಜ್ಯ ಅನ್ನೋದು ಮುಗಿದ ಕಥೆ
ಇದೇ ಸಂದರ್ಭದಲ್ಲಿ ಪ್ರತ್ಯೇಕ ರಾಜ್ಯದ ಚರ್ಚೆ ವಿಚಾರವಾಗಿ ಮಾತನಾಡಿ, ಪ್ರತ್ಯೇಕ ರಾಜ್ಯ ಅನ್ನೋದು ಮುಗಿದ ಕಥೆ. ಕನ್ನಡ ಮಾತನಾಡುವ ಭಾಷಿಗರೆಲ್ಲಾ ಒಂದೇ. ಈಗಾಗಲೇ 67 ವರ್ಷ ಮುಗಿದಿದೆ, ಯಾರರು ಯಾರು ಹೋರಾಟ ಮಾಡಿದ್ದಾರೆ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಮರಾಠ ಮೀಸಲು ಹೋರಾಟ ಏಕೆ?
ಹಿಂದುಳಿದ ವರ್ಗಗಳ (ಒಬಿಸಿ) ಅಡಿಯಲ್ಲಿ ಶಿಕ್ಷಣ ಮತ್ತು ಸರ್ಕಾರಿ ಕೆಲಸದಲ್ಲಿ ಮರಾಠ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ, ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಮರಾಠ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಮಧ್ಯಾಹ್ನ ಪ್ರತಿಭಟನಾಕಾರರ ಗುಂಪೊಂದು ಮುಂಬೈ-ಬೆಂಗಳೂರು ಹೆದ್ದಾರಿಯನ್ನು ಸುಮಾರು 2 ಗಂಟೆಗಳ ಕಾಲ ತಡೆಹಿಡಿದರು. ಇದರ ಪರಿಣಾಮ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ, ಪ್ರಯಾಣಿಕರು ಪರದಾಡುವಂತಾಯಿತು. ಸಾಕಷ್ಟು ಮನವಿ ಮಾಡಿದರೂ ಪ್ರತಿಭಟನೆಯನ್ನು ಹಿಂಪಡೆಯಲು ಒಪ್ಪದಿದ್ದಕ್ಕೆ ರಸ್ತೆಯ ಎರಡು ಕಡೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ಕರ್ನಾಟಕದ ಬಸ್ಗಳನ್ನೂ ಸುಟ್ಟಿರುವ ವರದಿಯಾಗಿದೆ.
ಮಹಾರಾಷ್ಟ್ರದಲ್ಲಿ ತೀವ್ರ ಸ್ವರೂಪ ಪಡೆದ ಮರಾಠ ಮೀಸಲು ಕಿಚ್ಚು: ಬೆಂಗ್ಳೂರು-ಮುಂಬೈ ಹೆದ್ದಾರಿ ತಡೆ, ರೈಲು ಸಂಚಾರ ಸ್ಥಗಿತ
ತಿಮ್ಮಪ್ಪನ ದರ್ಶನಕ್ಕಾಗಿ 2,150 ಕಿ.ಮೀ ಕಾಲ್ನಡಿಗೆಯಲ್ಲಿ ಬಂದ ವೃದ್ಧದಂಪತಿ!
ಬಂಪರ್ ಗಿಫ್ಟ್ ಘೋಷಣೆ ಮಾಡಿದ ಸಿಎಂ; ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ನೀರು, ವಿದ್ಯುತ್