ನವದೆಹಲಿ: ಪ್ರಮುಖ ಶೈಕ್ಷಣಿಕ ಪರೀಕ್ಷೆಗಳು, ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ನೈಜ ಅಭ್ಯರ್ಥಿಯ ಬದಲು ಬೇರೆಯವರು ಪರೀಕ್ಷೆ ಬರೆಯುವ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಲೆ ಇವೆ. ಇಂತಹುದೇ ಒಂದು ಪ್ರಕರಣ ತಿಹಾರ್ ಜೈಲಿನಲ್ಲಿ ಬಹಿರಂಗವಾಗಿದೆ. ಈ ಅಕ್ರಮ ಹೊರಬೀಳಲು ಕಾರಣವಾಗಿರುವುದು ಬಯೋಮೆಟ್ರಿಕ್ ವ್ಯವಸ್ಥೆ.
ಬಯೋಮೆಟ್ರಿಕ್ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿನ ಈಗ ತಿಹಾರ್ ಜೈಲಿನ 50 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ನೇಮಕಾತಿ ಪರೀಕ್ಷೆಯಲ್ಲಿ ನೈಜ ಅಭ್ಯರ್ಥಿ ಬದಲು ಬೇರೆ ಯಾರೋ ಪರೀಕ್ಷೆ ಬರೆದಿರುವ ಶಂಕೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೇಮಕಾತಿ ಪರೀಕ್ಷೆ ಬರೆದಿದ್ದು ಒಬ್ಬರು; ನೌಕರಿ ಮಾಡಲು ಬಂದಿರುವುದು ಇನ್ನೊಬ್ಬರು. ಹೀಗಾಗಿ ಬಯೋಮೆಟ್ರಿಕ್ ಹೊಂದಾಣಿಕೆಯಾಗುತ್ತಿಲ್ಲ ಎಂಬುದು ಗೊತ್ತಾಗಿದೆ.
ಬಯೋಮೆಟ್ರಿಕ್ ಗುರುತಿನ ದಾಖಲೆಯಲ್ಲಿ ತಾಳೆಯಾಗದ ಕಾರಣ ತಿಹಾರ್ ಜೈಲಿನ ಆಡಳಿತ ಮಂಡಳಿಯು ತನ್ನ 50 ನೌಕರರಿಗೆ ವಜಾಗೊಳಿಸುವ ನೋಟಿಸ್ ನೀಡಿದೆ. ಈ 50 ವಜಾಗೊಂಡ ನೌಕರರಲ್ಲಿ 39 ವಾರ್ಡರ್ಗಳು, 9 ಸಹಾಯಕ ಸೂಪರಿಂಟೆಂಡೆಂಟ್ ಮತ್ತು 2 ಮ್ಯಾಟ್ರನ್ ಸೇರಿದ್ದಾರೆ.
ದೆಹಲಿ ಅಧೀನ ಸೇವೆಗಳ ಆಯ್ಕೆ ಮಂಡಳಿಯ (ಡಿಎಸ್ಎಸ್ಬಿ) ನಿರ್ದೇಶನದಂತೆ ಈ ನೋಟಿಸ್ ನೀಡಲಾಗಿದೆ. ಈ ಮೂರು ಹುದ್ದೆಗಳಿಗೆ ಡಿಎಸ್ಎಸ್ಬಿ ಪರೀಕ್ಷೆ ನಡೆಸಿ, ಅಂದಾಜು 450 ಅರ್ಜಿದಾರರನ್ನು ನೇಮಕ ಮಾಡಿತ್ತು. ಈ 450 ಉದ್ಯೋಗಿಗಳಲ್ಲಿ 50 ಮಂದಿಗೆ ಬಯೋಮೆಟ್ರಿಕ್ ಗುರುತು ಹೊಂದಿಕೆಯಾಗಿಲ್ಲ. ಈ ಕಾರಣದಿಂದಾಗಿ ಅವರನ್ನು ವಜಾಗೊಳಿಸುವ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಎಲ್ಲಾ ಉದ್ಯೋಗಿಗಳು ಎರಡು ವರ್ಷಗಳ ಕಾಲ ಪ್ರೋಬೆಷನ್ ಪಿರಿಯಡ್ನಲ್ಲಿ ಇದ್ದರು. ಇವರು ಒಂದು ತಿಂಗಳೊಳಗೆ ನೋಟಿಸ್ಗೆ ಉತ್ತರಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕುಡಿಯುವ ನೀರಿಗಾಗಿ ಆಂಧ್ರ- ತೆಲಂಗಾಣ ನಡುವೆ ಘರ್ಷಣೆ: ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ
ಸೌರ ಮಾರುತ ಅಧ್ಯಯನ ಉಪಕರಣ ಸಕ್ರಿಯ: ಇಸ್ರೋ ಆದಿತ್ಯ-1ನಲ್ಲಿ ಮಹತ್ವದ ಸಾಧನೆ