More

    ಕುಡಿಯುವ ನೀರಿಗಾಗಿ ಆಂಧ್ರ- ತೆಲಂಗಾಣ ನಡುವೆ ಘರ್ಷಣೆ: ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ

    ಹೈದರಾಬಾದ್: ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಈ ಮೊದಲು ಒಂದೇ ರಾಜ್ಯವಾಗಿದ್ದವು. ವಿಭಜನೆಯಾದ ನಂತರ ಹಲವು ವಿಷಯಗಳಲ್ಲಿ ಎರಡೂ ರಾಜ್ಯಗಳ ನಡುವೆ ಕಚ್ಚಾಟ ನಡೆದುಕೊಂಡೇ ಬಂದಿದೆ. ಈಗ ಕುಡಿಯುವ ನೀರಿನ ವಿಚಾರದಲ್ಲಿ ಮತ್ತೆ ಘರ್ಷಣೆ ಶುರುವಾಗಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ಜಗಳ ಬಿಡಿಸಲು ಕೇಂದ್ರ ಸರ್ಕಾರವೇ ಮಧ್ಯಪ್ರವೇಶಿಸುವಂತಾಗಿದೆ.

    ತೆಲಂಗಾಣ ಚುನಾವಣೆಗೆ ಕೆಲವೇ ಗಂಟೆಗಳ ಮೊದಲು, ಆಂಧ್ರಪ್ರದೇಶವು ನಾಗಾರ್ಜುನ ಸಾಗರ ಅಣೆಕಟ್ಟಿನ ಉಸ್ತುವಾರಿ ವಹಿಸಿಕೊಂಡಿದೆ. ಅಲ್ಲದೆ, ನೀರು ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಇದು ಎರಡು ರಾಜ್ಯಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆ. ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ತೆಲಂಗಾಣದ ಬಹುತೇಕ ಅಧಿಕಾರಿಗಳು ಮತದಾನದಲ್ಲಿ ನಿರತರಾಗಿದ್ದಾಗ 700 ಆಂಧ್ರ ಪೊಲೀಸರು ನಾಗಾರ್ಜುನ ಸಾಗರ ಅಣೆಕಟ್ಟು ಯೋಜನೆ ಪ್ರದೇಶಕ್ಕೆ ನುಗ್ಗಿ ಬಲ ಕಾಲುವೆ ತೆರೆದು ಗಂಟೆಗೆ 500 ಕ್ಯೂಸೆಕ್ ಕೃಷ್ಣಾ ನೀರನ್ನು ಬಿಡುಗಡೆ ಮಾಡಿದ್ದಾರೆ.

    “ನಾವು ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೃಷ್ಣಾ ನದಿಯ ನಾಗಾರ್ಜುನಸಾಗರ ಬಲ ಕಾಲುವೆಯಿಂದ ನೀರು ಬಿಡುತ್ತಿದ್ದೇವೆ” ಎಂದು ಆಂಧ್ರಪ್ರದೇಶ ರಾಜ್ಯದ ನೀರಾವರಿ ಸಚಿವ ಅಂಬಟಿ ರಾಂಬಾಬು ಗುರುವಾರ ಬೆಳಗ್ಗೆ ಎಕ್ಸ್‌ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವಿನ ಒಪ್ಪಂದದ ಪ್ರಕಾರ ರಾಜ್ಯಕ್ಕೆ ಸೇರಿದ ನೀರನ್ನು ಮಾತ್ರ ತೆಗೆದುಕೊಂಡಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

    “ನಾವು ಯಾವುದೇ ಒಪ್ಪಂದ ಉಲ್ಲಂಘಿಸಿಲ್ಲ, ಕೃಷ್ಣಾ ನೀರಿನಲ್ಲಿ ಶೇ. 66ರಷ್ಟು ಆಂಧ್ರಪ್ರದೇಶಕ್ಕೆ ಮತ್ತು ಶೇ. 34ರಷ್ಟು ತೆಲಂಗಾಣಕ್ಕೆ ಸೇರಿದೆ. ನಮಗೆ ಸೇರದ ಒಂದು ಹನಿ ನೀರನ್ನು ಸಹ ನಾವು ಬಳಸಿಲ್ಲ. ನಾವು ನಮ್ಮ ಸೀಮೆಯಲ್ಲಿ ನಮ್ಮ ಕಾಲುವೆ ತೆರೆಯಲು ಪ್ರಯತ್ನಿಸಿದ್ದೇವೆ. ಈ ನೀರು ನಮ್ಮದು ಎಂದು ರಾಮಬಾಬು ಮಾಧ್ಯಮಗಳಿಗೆ ತಿಳಿಸಿದರು.

    ಆಂಧ್ರಪ್ರದೇಶದ ಅಂದಾಜು 500 ಶಸ್ತ್ರಸಜ್ಜಿತ ಪೊಲೀಸರು ನಾಗಾರ್ಜುನ ಸಾಗರ ಅಣೆಕಟ್ಟಿಗೆ ಬಂದು ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿದ್ದಾರೆ. ಅಲ್ಲದೆ, ಗೇಟ್ ಸಂಖ್ಯೆ 5 ಮತ್ತು ಹೆಡ್ ರೆಗ್ಯುಲೇಟರ್‌ಗಳನ್ನು ತೆರೆದು ಅಂದಾಜು 5,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದಾರೆ ಎಂದು ತೆಲಂಗಾಣ ಮುಖ್ಯ ಕಾರ್ಯದರ್ಶಿ ಸಂತಿ ಕುಮಾರಿ ಗುರುವಾರ ಆರೋಪಿಸಿದ್ದರು.

    ಆಂಧ್ರಪ್ರದೇಶದ ಈ ಕ್ರಮವು ತರುವಾಯ ತೆಲಂಗಾಣದಲ್ಲಿ “ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು” ಸೃಷ್ಟಿಸಿತು. ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವಾಗ, ಇದು ಹೈದರಾಬಾದ್ ಮತ್ತು ಸುತ್ತಮುತ್ತಲಿನ ಎರಡು ಕೋಟಿ ಜನರ ಕುಡಿಯುವ ನೀರಿನ ಪೂರೈಕೆಯನ್ನು ಗಂಭೀರವಾಗಿ ಅಡ್ಡಿಪಡಿಸುತ್ತದೆ ಎಂದು ಆತಂಕ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ನಲ್ಗೊಂಡ ಜಿಲ್ಲೆಯ ನಾಗಾರ್ಜುನ ಸಾಗರ ಅಣೆಕಟ್ಟಿನಲ್ಲಿ ತೆಲಂಗಾಣ ಪೊಲೀಸರನ್ನು ನಿಯೋಜಿಸಲಾಯಿತು.

    ಈ ವಿಷಯದಲ್ಲಿ ಉದ್ವಿಗ್ನತೆ ಭುಗಿಲೆದ್ದಿರುವುದರಿಂದ ಈಗ ಕೇಂದ್ರವು ಮಧ್ಯಪ್ರವೇಶಿಸಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ತೆಲಂಗಾಣ ಮತ್ತು ಆಂಧ್ರಪ್ರದೇಶದೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂಧಾನಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಡಿದ ಪ್ರಸ್ತಾಪವನ್ನು ಎರಡೂ ರಾಜ್ಯಗಳು ಒಪ್ಪಿವೆ ಎನ್ನಲಾಗಿದೆ.

    ಹೆಚ್ಚಿನ ಘರ್ಷಣೆಯನ್ನು ತಪ್ಪಿಸಲು, ಅಣೆಕಟ್ಟನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮೇಲ್ವಿಚಾರಣೆ ಮಾಡುತ್ತದೆ. ಅಲ್ಲದೆ, ಒಪ್ಪಂದದ ಪ್ರಕಾರ ಎರಡೂ ಕಡೆಯವರು ನೀರು ಪಡೆಯುವ ಕುರಿತು ಮೇಲ್ವಿಚಾರಣೆಯನ್ನು ಕೂಡ ಸಿಆರ್​​ಪಿಎಫ್​ ಮಾಡಲಿದೆ.

    2015ರಲ್ಲಿ ಆಂಧ್ರ ಪೊಲೀಸರು ಅಣೆಕಟ್ಟಿಗೆ ನುಗ್ಗಲು ಇದೇ ರೀತಿಯ ಪ್ರಯತ್ನವನ್ನು ಮಾಡಿದ್ದರು. ಆದರೆ ತೆಲಂಗಾಣ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪ್ರಯತ್ನವನ್ನು ತಡೆದಿದ್ದವು.

    ಸೌರ ಮಾರುತ ಅಧ್ಯಯನ ಉಪಕರಣ ಸಕ್ರಿಯ: ಇಸ್ರೋ ಆದಿತ್ಯ-1ನಲ್ಲಿ ಮಹತ್ವದ ಸಾಧನೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts