ಎಚ್.ಡಿ.ಕೋಟೆ : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯದಂಚಿನ ಗ್ರಾಮಗಳಲ್ಲಿ ಹುಲಿ ಹೆಜ್ಜೆ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕೂಡಲೇ ಹುಲಿ ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ.
ತಾಲೂಕಿನ ಅಣ್ಣೂರು ಹೊಸಹಳ್ಳಿ ಗ್ರಾಮದ ರೈತ ಷಡಕ್ಷರಿ ಅವರ ಜಮೀನಿನಲ್ಲಿ, ಹುಲಿ ಹೆಜ್ಜೆ ಗುರುತು ಪತ್ತೆಯಾಗಿ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ರೈತ ಷಡಕ್ಷರಿ ಎಂದಿನಂತೆ ಗುರುವಾರ ಬೆಳಗ್ಗೆ ಜಮೀನಿನ ಬಳಿ ತೆರಳಿದ ವೇಳೆ ಹುಲಿ ಹೆಜ್ಜೆ ಗುರು ಕಂಡು ಗಾಬರಿಗೊಂಡು ತಕ್ಷಣ ಅರಣ್ಯ ಇಲಾಖೆಯವರಿಗೆ ದೂರವಾಣಿ ಮೂಲಕ ವಿಚಾರ ತಿಳಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಡಿಆರ್ಎಫ್ಒ ಸಚಿನ್, ಗಾರ್ಡ್ ಕೃಷ್ಣಯ್ಯ ವಾಚರ್, ಗಳಾದ ಮಹೇಶ್, ಪಾಪಯ್ಯ, ಗೋವಿಂದ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಜಮೀನಿನಲ್ಲಿ ಕಂಡುಬಂದ ಹೆಜ್ಜೆ ಗುರುತು ಹುಲಿ ಹೆಜ್ಜೆ ಕಂಡುಬಂದಿದ್ದು ಸುತ್ತಮುತ್ತ ಪರಿಶೀಲನೆ ನಡೆಸಿದ್ದಾರೆ. ನಾಡಿಗೆ ಬಂದ ಹುಲಿ ಮತ್ತೆ ಕಾಡಿಗೆ ತೆರಳಿದೆ ಎಂದು ಸಚಿನ್ ಸ್ಪಷ್ಟಪಡಿಸಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ರೈತ ಆನಂದ ಮಾತನಾಡಿ 10 ದಿನಗಳ ಹಿಂದೆ ಬೆಳ್ಳಂಬೆಳಗ್ಗೆ ಎರಡು ದಿನ ಸಲಗ ನಮ್ಮ ಜಮೀನುಗಳಿಗೆ ನುಗ್ಗಿ ಫಸಲು ನಾಶ ಮಾಡಿದ್ದಲ್ಲದೆ ಗ್ರಾಮಕ್ಕೆ ನುಗ್ಗಿ ದಾಂಧಲೆ ಮಾಡಿತ್ತು. ಈಗ ಹುಲಿ ಹೆಜ್ಜೆ ಗುರುತು ಪತ್ತೆ ಆಗಿರುವುದರಿಂದ, ಜಮೀನುಗಳಿಗೆ ರೈತರು ತೆರಳುವುದಕ್ಕೆ ಭಯ ಪಡುತ್ತಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಾಣಿಗಳ ಹಾವಳಿ ತಪ್ಪಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಹುಲಿ ಹೆಜ್ಜೆ ಗುರುತು ಪತ್ತೆಯಾಗಿರುವುದನ್ನು ಪರಿಶೀಲಿಸಲಾಗಿದೆ. ಹುಲಿ ಮತ್ತೆ ಕಾಡಿಗೆ ತೆರಳಿದೆ ಎಂದು ಖಚಿತವಾಗಿದೆ. ಹುಲಿಯ ಚಲನವಲನ ಪತ್ತೆಹಚ್ಚಲು ಅರಣ್ಯ ಇಲಾಖೆ ಸಿಬ್ಬಂದಿ ತಂಡ ರಚನೆ ಮಾಡಲಾಗಿದೆ. ಆನೆ ಹಾವಳಿ ತಪ್ಪಿಸಲು ಮಾಸ್ತಿಗುಡಿ ಪುನರ್ವಸತಿ ಕೇಂದ್ರದಿಂದ, ಅಣ್ಣೂರು, ಗುರುಪುರ ಕೆರೆಯವರೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಪ್ರಾರಂಭಗೊಂಡಿದೆ.
ಸಚಿನ್ಡಿ ಆರ್ಎಫ್ಒ