ಬೆಂಗಳೂರು: ಹುಲಿಯುಗುರು ಪೆಂಡೆಂಟ್ ಇರುವ ಸರವನ್ನು ಧರಿಸಿದ್ದ ಹಿನ್ನೆಲೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿದ್ದಾಗಲೇ ಬಿಗ್ ಬಾಸ್ ಮನೆಯಿಂದಲೇ ಸ್ಪರ್ಧಿ ವರ್ತೂರು ಸಂತೋಷ್ ಬಂಧನವಾದ ಬೆನ್ನಿಗೇ ರಾಜ್ಯದಲ್ಲಿ ಹೊಸದೊಂದು ಸಂಚಲನ ಸೃಷ್ಟಿಯಾಗಿದೆ.
ಹುಲಿಯುಗುರು ಪೆಂಡೆಂಟ್ ಧರಿಸುವುದು ವನ್ಯಜೀವಿ ಕಾಯ್ದೆಯನ್ವಯ ಅಪರಾಧ ಆಗಿರುವುದರಿಂದ ಅರಣ್ಯಾಧಿಕಾರಿಗಳ ದೂರಿನ ಮೇರೆಗೆ ಪೊಲೀಸರು ಸಂತೋಷ್ರನ್ನು ಬಂಧಿಸಿದ್ದು, ಆ ಬಳಿಕ ಹಲವು ಗಣ್ಯರು ಅಂಥದ್ದೇ ಪೆಂಡೆಂಟ್ ಧರಿಸಿರುವುದು ಬೆಳಕಿಗೆ ಬಂದಿತ್ತು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್, ನಟ ದರ್ಶನ್ ತೂಗುದೀಪ, ನಟ-ರಾಜ್ಯಸಭಾ ಸದಸ್ಯ ಜಗ್ಗೇಶ್ ಮುಂತಾದವರು ಹುಲಿಯುಗುರಿನ ಪೆಂಡೆಂಟ್ ಇರುವ ಸರಗಳನ್ನು ಧರಿಸಿದ್ದ ಫೋಟೋಗಳು ವೈರಲ್ ಆಗಿದ್ದವು.
ಇದನ್ನೂ ಓದಿ: ನಾನು ಧರಿಸಿದ್ದ ಹುಲಿ ಉಗುರು ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ: ನಿಖಿಲ್ ಕುಮಾರಸ್ವಾಮಿ
ಆ ಬಳಿಕ ನಿಖಿಲ್ ಕುಮಾರ್ ತನ್ನ ಬಳಿ ಇರುವ ಹುಲಿಯುಗುರು ಅಸಲಿ ಅಲ್ಲ, ಅದು ನಕಲಿ ಹುಲಿ ಉಗುರಿನ ಪೆಂಡೆಂಟ್, ನನ್ನ ಮದುವೆ ಸಮಯದಲ್ಲಿ ಉಡುಗೊರೆಯಾಗಿ ಬಂದಿರುವುದು ಎಂದು ಹೇಳಿದ್ದರು. ನಂತರ ನಟ ದರ್ಶನ್ ಮನೆಯಲ್ಲೂ ಅಧಿಕಾರಿಗಳಿಂದ ಪರಿಶೀಲನೆ ನಡೆದಾಗ ಹುಲಿ ಉಗುರಿನ ಪೆಂಡೆಂಟ್ಗಳು ಪತ್ತೆಯಾಗಿದ್ದವು. ಆದರೆ ಅವು ಕೂಡ ಅಸಲಿಯಲ್ಲ ಎಂಬ ಸಂಗತಿ ಕೇಳಿಬಂದಿದೆ.
ಇದನ್ನೂ ಓದಿ: ನಟ ದರ್ಶನ್ ಬಳಿ ಇತ್ತಾ 8 ಹುಲಿ ಉಗುರಿನ ಮಾದರಿಯ ಪೆಂಡೆಂಟ್!;ಇದ್ಯಾವುದೂ ಅಸಲಿ ಅಲ್ವಾ?
ಹೀಗೆ ಹುಲಿಯುಗುರಿನ ಪೆಂಡೆಂಟ್ಗಳು ಅಸಲಿಯಲ್ಲ ಎಂಬ ಸಂಗತಿಯೇ ಇದೀಗ ಹೊಸದೊಂದು ಜಿಜ್ಞಾಸೆಯನ್ನು ಹುಟ್ಟಿಸಿದೆ. ಹುಲಿ ಉಗುರನ್ನು ಧರಿಸುವುದರಿಂದ ಸಾಕಷ್ಟು ಪ್ರಯೋಜನಗಳು ಇವೆ ಎಂಬ ನಂಬಿಕೆ ಇದೆ. ಅದೇ ಕಾರಣಕ್ಕೆ ಹಲವರು ಅದನ್ನು ಧರಿಸುತ್ತಾರೆ ಎನ್ನಲಾಗಿದೆ. ಆದರೆ ಅಂಥ ನಂಬಿಕೆ-ಪ್ರಯೋಜನಗಳಿಗಾಗಿ ನಕಲಿ ಹುಲಿಯುಗುರನ್ನು ಧರಿಸಿದರೆ ಏನು ಪ್ರಯೋಜನ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹುಲಿ ಉಗುರು ಅಷ್ಟು ಪವರ್ಫುಲ್ಲಾ?; ಯಾಕೆ ಧರಿಸುತ್ತಾರೆ ಗೊತ್ತಾ?
ರಿಯಾಲಿಟಿ, ಶೋಕಿ
ರಿಯಾಲಿಟಿ ಶೋನಿಂದ ಬೆಳಕಿಗೆ ಬಂದ ಈ ಹುಲಿಯುಗುರಿನಲ್ಲೇ ರಿಯಾಲಿಟಿ ಇಲ್ಲವೇ ಅಥವಾ ಅದೂ ಶೋಕಿಯೋ? ಅಷ್ಟಕ್ಕೂ ಗಣ್ಯರು-ಸೆಲೆಬ್ರಿಟಿಗಳು ನಕಲಿ ಹುಲಿಯುಗುರು ಧರಿಸುತ್ತಾರೆ ಎಂಬುದೇ ನಂಬಲು ಕಷ್ಟ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರನ ಮದುವೆ ಸಂದರ್ಭದಲ್ಲಿ ನಕಲಿ ಹುಲಿಯುಗುರನ್ನು ಉಡುಗೊರೆಯಾಗಿ ಕೊಡುತ್ತಾರೆಂದರೆ!? ಅವು ಅಸಲಿ ಅಲ್ಲ ಎಂದಾದರೆ ಅದು ಈ ಪ್ರಕರಣದಿಂದ ಬಚಾವಾಗುವ ಕರಾಮತ್ತಿರಬಹುದಾ ಎಂಬ ಅನುಮಾನವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ. ನಕಲಿ ಧರಿಸುವುದರಿಂದ ಪ್ರಯೋಜನ ಇಲ್ಲ ಎನ್ನುವುದು ಒಂದೆಡೆಯಾದರೆ, ಅಂಥ ಗಣ್ಯರಿಗೆ ನಕಲಿ ಶೋಕಿ ಯಾಕೆ ಎಂಬ ಅಚ್ಚರಿಯ ಮಾತುಗಳೂ ವ್ಯಕ್ತವಾಗಿವೆ. ಒಟ್ಟಿನಲ್ಲಿ ಹುಲಿಯುಗುರಿನ ಅಸಲಿಯತ್ತು ಜಿಜ್ಞಾಸೆಯನ್ನು ಮೂಡಿಸಿದೆ.
ಮಧುಮೇಹಿಗಳ ಗಾಯಗಳಿಗಾಗಿ ಹೊಸ ಔಷಧ ಕಂಡುಹಿಡಿದ ವಿಜ್ಞಾನಿಗಳು; ಈ ಜೆಲ್ಗಿದೆ 3 ಪಟ್ಟು ಬೇಗ ಗುಣವಾಗಿಸುವ ಶಕ್ತಿ