ಮೈಸೂರು: ಎರಡು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಪ್ರಾದೇಶಿಕ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ಸ್ಥಾಪನೆ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಈ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಚಾಮುಂಡೇಶ್ವರಿ ತಾಯಿಯ ಸನ್ನಿಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದಾರೆ. ಹಾಸನದ ಪುಣ್ಯ ಭೂಮಿಯಲ್ಲಿ ಜನ್ಮ ಪಡೆದು ರಾಮನಗರ ಜನತೆಯ ಆಶೀರ್ವಾದ ಪಡೆದಿದ್ದೇನೆ. ರೈತರ ಮಕ್ಕಳಾಗಿ ಹುಟ್ಟಿದ್ದೇವೆ, ರೈತರಾಗಿಯೇ ಭೂಮಿಗೆ ಹೋಗಬೇಕು ಎಂಬುದು ತಂದೆ ಕೊಟ್ಟ ಆದೇಶ. ದೊಡ್ಡ ಸವಾಲು ಸ್ವೀಕಾರ ಮಾಡಿ ಹೊರಟಿರುವ ನನಗೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಅನುಭವ ಸಿಕ್ಕಿದೆ ಎಂದು ಎಚ್ಡಿಕೆ ಹೇಳಿದರು.
ನನ್ನ ಹೋರಾಟಕ್ಕೆ ರೈತರು ದೇಣಿಗೆ ಕೊಟ್ಟಿದ್ದಾರೆ. ಸ್ವಸಹಾಯ ಸಂಘದ ಸಾಲವನ್ನ ಮನ್ನಾ ಮಾಡಲು ನಿರ್ಧಾರ ಮಾಡಿದ್ದೇನೆ. ಜೆಡಿಎಸ್ ಪಕ್ಷ ರೈತರ ಪಕ್ಷ, ನನ್ನ ಮೇಲೆ ವಿಶ್ವಾಸವಿಡಿ, ನಿಮಗೆ ನ್ಯಾಯಯುತವಾದ ಬೆಲೆಯನ್ನು ನಿಗದಿ ಮಾಡುತ್ತೇನೆ. ಶೇ. 50 ಲಾಭ ತಂದುಕೊಡುವ ಹಾಗೇ ಕೆಲಸ ಮಾಡುತ್ತೇನೆ. ನಮ್ಮ ಸರ್ಕಾರ ಬಂದರೆ ಕೊಬ್ಬರಿ ಕ್ವಿಂಟಾಲ್ಗೆ 15 ಸಾವಿರ ರೂ. ಕೊಡುತ್ತೇನೆ ಎಂದು ಕುಮಾರಸ್ವಾಮಿ ರೈತರನ್ನುದ್ದೇಶಿಸಿ ಹೇಳಿದರು.
ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಪ್ರಧಾನಿ ನರೇಂದ್ರ ಮೋದಿ ರೈತರ ಕಷ್ಟ ಕೇಳಲಿಲ್ಲ. ಪ್ರವಾಹ ಬಂದಾಗ ರೈತರ ಬಗ್ಗೆ ಗಮನ ಹರಿಸಲಿಲ್ಲ. ಚುನಾವಣೆ ಸಮಯದಲ್ಲಿನ ನಿಮ್ಮ ರೋಡ್ ಶೋಗೂ ಪಂಚರತ್ನ ಯಾತ್ರೆಯ ಶೋಗೂ ಬಹಳ ವ್ಯತ್ಯಾಸವಿದೆ ಎಂದ ಎಚ್ಡಿಕೆ, ನರೇಂದ್ರ ಮೋದಿಯವರೇ ಉತ್ತರ ಕರ್ನಾಟಕ ಕಡೆಗೆ ಬಂದು ನೋಡಿ. ಹಳ್ಳಿಗಳಿಗೆ ರಸ್ತೆಗಳಿಲ್ಲ, ಕುಡಿಯಲು ನೀರಿಲ್ಲ. ಸಾವಿರಾರು ಕೋಟಿ ಜಲ ಮಿಷನ್ ಹೆಸರಿನಲ್ಲಿ ಲೂಟಿಯಾಗಿದೆ ಎಂದರು.
ಇದನ್ನೂ ಓದಿ: ಬಾಯ್ಬಿಟ್ಟು ಕೆಟ್ಟಳು ಕಿಡ್ನ್ಯಾಪ್ ಮಾಡಿದ್ದ ಮಹಿಳೆ; ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿತು ‘ಹಾಲು-ಉಪ್ಪಿಟ್ಟು’!
ಮೈಸೂರು ಮಹಾರಾಜರು ನಾಗರಿಕತೆಯನ್ನ ಕೊಟ್ಟಿದ್ದಾರೆ. ದೇವೇಗೌಡರಂಥ ನಾಯಕರು ನೀರಾವರಿ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದಾರೆ. ದೇವೇಗೌಡರು ಸದಾ ರೈತರ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ದೇವೇಗೌಡರು ಖಾಯಿಲೆ ಅಂಥ ಆಸ್ಪತ್ರೆ ಎಂದು ಹೋಗಿಲ್ಲ. ಜನರ ತೆರಿಗೆ ಹಣವನ್ನ ಲೂಟಿ ಮಾಡಿಲ್ಲ ಎಂದ ಎಚ್ಡಿಕೆ, ಕನ್ನಡಿಗ ಮಾಡಿದ ಕೆಲಸವನ್ನು ಜನರು ಸ್ಮರಿಸುತ್ತಿಲ್ಲ, ಆದರೆ ಅವರು ಮಾಡಿದ ಕೆಲಸ ದೆಹಲಿಯ ಕಡತದಲ್ಲಿದೆ ಎಂದರು.
ಪ್ರತಿ ದಿನ ದೇವರ ಮುಂದೆ ದೇವೇಗೌಡರ ಆರೋಗ್ಯದ ಬಗ್ಗೆ ಬೇಡುತ್ತಿದ್ದೇವೆ.ನಾನು ಮತ್ತೊಂದು ಬಾರಿ ಸಿಎಂ ಆಗಲು ಇಷ್ಟ ಇಲ್ಲ. ದೇವೇಗೌಡರು ನಾನು ಮಾಡುವ ಕೆಲಸವನ್ನ ಕಣ್ಣಾರೆ ನೋಡಬೇಕು. ಎರಡನೇ ಬಾರಿ ಸಿಎಂ ಆದಾಗ ಸಾಕಷ್ಟು ಒಳ್ಳೆ ಕೆಲಸ ಮಾಡಿದ್ದೇನೆ. ಆದರೆ ಅದಕ್ಕೆ ಪ್ರಚಾರ ಸಿಗಲಿಲ್ಲ. ಬಡವರ ಬಂಧು ಕಾರ್ಯಕ್ರಮದ ಮೂಲಕ ಬಡವರಿಗೆ ಸಹಾಯ ಮಾಡಿದೆ ಎಂದ ಎಚ್ಡಿಕೆ, ಈ ಸಲ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹಾಸನ, ಮಂಡ್ಯ, ಮೈಸೂರು ಜಿಲ್ಲೆಯ ಭದ್ರಕೋಟೆಯನ್ನು ಬಿಜೆಪಿಯವರು ಛಿದ್ರ ಮಾಡುತ್ತೇವೆ ಎನ್ನುತ್ತಾರೆ, ನಾವು ಮಂಡ್ಯದಲ್ಲಿ 7 ಸ್ಥಾನವನ್ನು ಗೆದ್ದೇ ಗೆಲ್ಲುತ್ತೇವೆ. ಮೈಸೂರು, ಮಂಡ್ಯ, ಹಾಸನ ಜಿಲ್ಲೆಯಲ್ಲಿ ನಮ್ಮ ಪಕ್ಷವನ್ನು ಕೈಹಿಡಿಯುವ ನಂಬಿಕೆ ಇದೆ. ತುಮಕೂರು ಜಿಲ್ಲೆಯಲ್ಲಿ 11 ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.
ಪ್ಯಾನ್-ಆಧಾರ್ ಲಿಂಕ್, ಮಾ. 31 ಕಡೇ ದಿನ: ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ?