ಕನಕಗಿರಿ: ಸರ್ಕಾರದ ನಾನಾ ಯೋಜನೆಗಳಿಗೆ ಬಳಕೆಯಾಗುವ ಆಧಾರ್ ಕಾರ್ಡ್, ಪ್ಯಾನ್ಕಾರ್ಡ್, ಎಟಿಎಂ ಕಾರ್ಡ್ ಮತ್ತು ಹಲವು ದಾಖಲೆಗಳು ತಾಲೂಕಿನ ಗೌರಿಪುರ ವ್ಯಾಪ್ತಿಯ ಪೊಸ್ಟ್ಮನ್ನ ನಿರ್ಲಕ್ಷ್ಯದಿಂದ ಗ್ರಾಮದ ತಿಪ್ಪೆಗುಂಡಿಯಲ್ಲಿ ಸೋಮವಾರ ಕಂಡುಬಂದವು.
ಸುಮಾರು 500ಕ್ಕೂ ಹೆಚ್ಚು ಆಧಾರ್ ಕಾರ್ಡ್, 40ಕ್ಕೂ ಹೆಚ್ಚು ಪ್ಯಾನ್ ಕಾರ್ಡ್, 50ಕ್ಕೂ ಹೆಚ್ಚು ಎಟಿಎಂ ಕಾರ್ಡ್ ಮತ್ತು ನಾನಾ ಯೋಜನೆಯ ಬಾಂಡ್ಗಳು, ಗುತ್ತಿಗೆದಾರರ ಪರವಾನಗಿ, ಚೆಕ್ಬುಕ್ಗಳನ್ನು ಜನತೆಗೆ ತಲುಪಿಸದೆ ಇಲ್ಲಿನ ಪೋಸ್ಟ್ಮನ್ ವಿನಾಯಕ ಅಚ್ಚಲಕರ್ ತಾತ್ಸಾರ ತೋರಿದ್ದರ ಪರಿಣಾಮ ತಿಪ್ಪೆಗುಂಡಿಯಲ್ಲಿ ಪತ್ತೆಯಾಗಿವೆ ಎಂಬ ಆರೋಪ ಕೇಳಿಬಂದಿದೆ.
ಸುಮಾರು ಮೂರು ಚೀಲಗಳಲ್ಲಿ ತುಂಬಿದ್ದ ಈ ದಾಖಲೆಗಳನ್ನು ಕಂಡ ಸಾರ್ವಜನಿಕರು ಅವನ್ನೆಲ್ಲ ಕನಕದಾಸ ವೃತ್ತದ ಬಳಿ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿ ಕಾದು ಕುಳಿತವರು ಪದೇಪದೆ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಆದರೆ, ಇಲಾಖೆಯಿಂದ ರವಾನೆಯಾದರೂ ಪೋಸ್ಟ್ಮನ್ ತಲುಪಿಸದೆ ನಿರ್ಲಕ್ಷೃ ತೋರಿದ್ದಕ್ಕೆ ದೇವಲಾಪುರ, ಅಡವಿಬಾವಿ ಚಿಕ್ಕತಾಂಡಾ, ಚಿಕ್ಕ ವಡ್ರಕಲ್, ದೊಡ್ಡ ತಾಂಡಾ, ಸೋಮಸಾಗರ, ಬಸರಿಹಾಳ, ಬೈಲಕ್ಕುಂಪುರ ಗ್ರಾಮಸ್ಥರು ಹಿಡಿ ಶಾಪ ಹಾಕಿದರು.
ತನ್ನ ಸಹಾಯಕ್ಕಾಗಿ ಸ್ಥಳೀಯ ಯುವಕನೊಬ್ಬನನ್ನು ಅಂಚೆಗೆ ಬಂದ ದಾಖಲೆಗಳನ್ನು ವಿತರಿಸಲು ಪೋಸ್ಟ್ಮನ್ ನೇಮಿಸಿಕೊಂಡಿದ್ದ. ಆದರೆ, ಈ ಸಹಾಯಕ ಅಂಚೆಗೆ ಬಂದ ದಾಖಲೆಗಳನ್ನು ಸಂಬಂಧಿತರಿಗೆ ವಿತರಿಸಿಲ್ಲ. ಕಳೆದ ತಿಂಗಳು ಈ ಸಹಾಯಕನನ್ನು ಪೋಸ್ಟ್ಮನ್ ತೆಗೆದುಹಾಕಿದ್ದರಿಂದ ಕೋಪಗೊಂಡ ಸಹಾಯಕ ಸದರಿ ದಾಖಲೆಗಳ ನಾಲ್ಕು ಗಂಟನ್ನು ತಿಂಗಳ ಹಿಂದೆಯೇ ತಿಪ್ಪೆಗೆ ಎಸೆದಿದ್ದಾನೆ ಎನ್ನಲಾಗಿದೆ. ಇದು ಸೋಮವಾರ ಬೆಳಕಿಗೆ ಬಂದಿದೆ.