ಕುಣಿಗಲ್: ಸಹೋದರಿಯರಿಬ್ಬರ ಜತೆ ತೋಟದ ಮನೆ ಮುಂದೆ ಆಟವಾಡುತ್ತಿದ್ದ 7 ವರ್ಷದ ಬಾಲಕಿ ಮೇಲೆ ಹಾಡಹಗಲೇ ಚಿರತೆ ದಾಳಿ ನಡೆಸಿದ್ದು, ಆಕೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ತೆರೆದಕುಪ್ಪೆ ಗ್ರಾಮದ ನಾಗರಾಜು ಅವರ ಪುತ್ರಿ ರೇಖಾ(7) ಚಿರತೆ ದಾಳಿಗೆ ಒಳಗಾದ ಬಾಲಕಿ. ಗುರುವಾರ ಮಧ್ಯಾಹ್ನ ಮೂವರು ಮಕ್ಕಳು ಆಟವಾಡುತ್ತಿದ್ದಾಗ ನೋಡನೋಡುತ್ತಿದ್ದಂತೆ ರೇಖಾ ಮೇಲೆರಗಿದ ಚಿರತೆ ಆಕೆಯನ್ನು ಎಳೆದುಕೊಂಡು ಹೋಗಿದೆ. ಸಹೋದರಿಯರು ಮತ್ತು ಪಕ್ಕದಲ್ಲೇ ಇದ್ದ ತಂದೆ ನಾಗರಾಜು ಚೀರಾಡಿದ್ದು, ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿ ಚಿರತೆಯನ್ನು ಬೆನ್ನಟ್ಟಿದರು. ದಾರಿಯಲ್ಲೇ ರೇಖಾಳನ್ನು ಬಿಟ್ಟ ಚಿರತೆ ಪೊದೆಗೆ ಹೊಕ್ಕಿತು. ರೇಖಾಳ ಕುತ್ತಿಗೆ, ಕಿವಿ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಪಟ್ಟಣದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿರಿ ಮಿಸ್ಡ್ಕಾಲ್ನಲ್ಲಿ ಪರಿಚಯವಾದ ಯುವಕನೊಂದಿಗೆ ಹಾಸಿಗೆ ಹಂಚಿಕೊಂಡ ಗೃಹಿಣಿ… ಆಕೆ ಗಂಡ ಮಾಡಿದ್ದಾದರೂ ಏನು?
ಚಿರತೆ ಹಾವಳಿಗೆ ಬೇಸತ್ತಿರುವ ಗ್ರಾಮಸ್ಥರು ತುಮಕೂರು ಮತ್ತು ಕುಣಿಗಲ್ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನಲ್ಲಿ ಈ ಹಿಂದೆ ಚಿರತೆಗೆ ವೃದ್ಧೆ ಮತ್ತು ಬಾಲಕಿ ಬಲಿಯಾಗಿದ್ದರು. ಈಗ ತಮ್ಮೂರಿನ ಬಾಲಕಿ ಮೇಲೆ ಚಿರತೆ ದಾಳಿ ನಡೆಸಿದ್ದು, ಸಾವಿನ ದವಡೆಗೆ ಸಿಲುಕಿದ್ದಾಳೆ. ರಾತ್ರಿ ಇರಲಿ, ಹಗಲಿನ ವೇಳೆ ಓಡಾಡುವುದಕ್ಕೂ ಭಯವಾಗುತ್ತಿದೆ. ಮೊದಲು ಈ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಬಂದ ಕುಣಿಗಲ್ ಠಾಣೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿರಿ ಸೆಕೆ ಅಂತ ಮನೆಯ ಪಡಸಾಲೆಯಲ್ಲಿ ಮಲಗಿದ್ದ ವೃದ್ಧೆಯನ್ನು ಎಳೆದೊಯ್ದು ತಿಂದ ಚಿರತೆ!
ತಾಲೂಕಿನಲ್ಲಿ ಚಿರತೆ ಮತ್ತು ನಾಯಿಗಳ ದಾಳಿಯಿಂದಾಗಿ ಸಾವು-ನೋವು ಸಂಭವಿಸುತ್ತಲೇ ಇದೆ. ಆದರೆ, ಸಂಬಂಧಪಟ್ಟವರು ಮಾತ್ರ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ. ತಾಲೂಕಿನ ಜನತೆ ಭಯದಲ್ಲೇ ದಿನದೂಡುವಂತಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಇತ್ತೀಚಿಗೆ ಪಟ್ಟಣದ ವಾರ್ಡ್ ನಂಬರ್ 2ರಲ್ಲಿ ಮೂರೂವರೆ ವರ್ಷದ ಬಾಲಕನೊಬ್ಬ ಹುಚ್ಚುನಾಯಿ ದಾಳಿಗೆ ಬಲಿಯಾಗಿದ್ದ. ಮತ್ತೊಬ್ಬ ಬಾಲಕ ಗಂಭೀರ ಗಾಯಗೊಂಡಿದ್ದ.
ಇದನ್ನೂ ಓದಿರಿ ಪೊಲೀಸರೇ ಕಿಡ್ನ್ಯಾಪರ್ಗಳನ್ನು ಬಿಟ್ಟು ಕಳಿಸಿದರೂ ಜೈಲಿಗೆ ತಳ್ಳಿದ ವಾಟ್ಸ್ಆ್ಯಪ್ ಸ್ಟೇಟಸ್!