ಬೆಂಗಳೂರು: ಕೆಫೆ ಮಾಲೀಕನನ್ನು ಅಪಹರಿಸಿ 26 ಲಕ್ಷ ರೂಪಾಯಿ ಮತ್ತು ಆಡಿ ಕಾರು ಸುಲಿಗೆ ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರೇ ಅವರನ್ನು ಬಿಟ್ಟು ಕಳುಹಿಸಿ ಈಗ ಪೇಚಿಗೆ ಸಿಲುಕಿದ್ದಾರೆ!
ಕೆಫೆ ಮಾಲೀಕನ ಕಿಡ್ನ್ಯಾಪ್ ಪಕ್ರರಣ ಸಂಬಂಧ ಸದಾಶಿವನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ಆನಂತರ ಬಿಟ್ಟು ಕಳುಹಿಸಿದ್ದರು. ಆರೋಪಿಗಳು ಹೊರಬಂದ ಖುಷಿಯಲ್ಲಿ ಮೊಬೈಲ್ ಸ್ಟೇಟಸ್ನಲ್ಲಿ ಅಪ್ಡೇಟ್ ಮಾಡಿ ಮತ್ತೆ ಜೈಲು ಸೇರಿದ್ದಾರೆ. ಪೊಲೀಸರ ವಿರುದ್ಧವೇ ಆರೋಪ ಕೇಳಿಬಂದಿದ್ದರಿಂದ ಪ್ರಕರಣದ ತನಿಖೆಯನ್ನು ಹೈಗ್ರೌಂಡ್ಸ್ ಠಾಣೆಗೆ ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶಿಸಿದೆ.
ಇದನ್ನೂ ಓದಿರಿ ಒಂದೇ ಠಾಣೆಯ ಮೂವರು ಪೇದೆಗಳಿಗೆ ಕರೊನಾ ಪಾಸಿಟಿವ್
ರಾಚೇನಹಳ್ಳಿಯ ಅಭಿನವ್ ಸಿಂಘಾಲ್(41) ಅಪಹರಣಕ್ಕೆ ಒಳಗಾದವರು. ನ್ಯೂ ಬಿಇಎಲ್ ರಸ್ತೆ ಬಳಿ “ಕೆಫೆ ಡೇ ಲಾಂಚ್ ಸ್ಟುಡಿಯೋ” ಎಂಬ ರೆಸ್ಟೋರೆಂಟ್ನ್ನು ಪಾಲುದಾರ ಆರ್ಯನ್ ಪ್ರತಾಪ್ ಜತೆ ನಡೆಸುತ್ತಿದ್ದರು. ಇವರಿಬ್ಬರ ನಡುವೆ ಹಣಕಾಸಿನ ವಿವಾದ ಎಡೆಮಾಡಿಕೊಟ್ಟಿತ್ತು.
ಮೇ 13ರ ಮಧ್ಯಾಹ್ನ 12.30ರಲ್ಲಿ ರೆಸ್ಟೋರೆಂಟ್ ಕ್ಯಾಷಿಯರ್ ಸೇರಿ 9 ಮಂದಿ ಗ್ಯಾಂಗ್ ರೆಸ್ಟೋರೆಂಟ್ಗೆ ಅಭಿವನ್ ಸಿಂಘಾಲ್ರನ್ನು ಕರೆಸಿಕೊಂಡು ಅಪಹರಣ ಮಾಡಿದ್ದರು. ಬನ್ನೇರುಘಟ್ಟ ರಸ್ತೆಯಲ್ಲಿನ ಗೋದಾಮಿನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ಚೆಕ್ಗಳಿಗೆ ಸಹಿ ಮಾಡಿಸಿಕೊಂಡಿದ್ದರು. ಅಲ್ಲಿಂದ ಬ್ಯಾಂಕಿಗೆ ಕರೆತಂದು 26 ಲಕ್ಷ ರೂ. ಆರ್ಟಿಜಿಎಸ್ ಮೂಲಕ ಸುಲಿಗೆ ಮಾಡಿ ಆಡಿ ಕಾರು, ಆಭರಣ ಕಿತ್ತುಕೊಂಡು ಪೊಲೀಸರಿಗೆ ದೂರು ಕೊಡದಂತೆ ಬೆದರಿಕೆಹಾಕಿ ಬಿಟ್ಟು ಕಳುಹಿಸಿದ್ದರು.
ಇದನ್ನೂ ಓದಿರಿ ಈ ಚಿತ್ರ ನೋಡಿ… ಗರ್ಭಿಣಿ ಆನೆಯ ದಾರುಣ ಸಾವಿಗೆ ಕಂಬನಿ ಮಿಡಿಯುತ್ತಿದೆ!
ಬಳಿಕ ಅಭಿನವ್ ಸಿಂಘಾಲ್, ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ಆಡಿ ಕಾರು ಸಹಿತ 9 ಮಂದಿಯನ್ನು ಕೆಲವೇ ದಿನಗಳಲ್ಲಿ ಬಂಧಿಸಿದ್ದರು. ಸರಿಯಾದ ವಿಚಾರಣೆ ನಡೆಸದೆ ಆಡಿ ಕಾರು ಜಪ್ತಿ ಮಾಡಿ ಮೂವರು ಪ್ರಮುಖ ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದರು. ಈ ಬಗ್ಗೆ ದೂರುದಾರ ಪೊಲೀಸ್ ಠಾಣೆಗೆ ಹೋಗಿ ಪ್ರಶ್ನಿಸಿದಾಗ ಅವಾಜ್ ಹಾಕಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಬಳಿಕ ಕೇಂದ್ರ ವಿಭಾಗ ಡಿಸಿಪಿ ಡಾ. ಚೇತನ್ ಸಿಂಗ್ ರಾಥೋಡ್ರನ್ನು ಭೇಟಿ ಮಾಡಿದ ಅಭಿನವ್ ಸಿಂಘಾಲ್, ಸದಾಶಿವನಗರ ಪೊಲೀಸರ ವಿರುದ್ಧ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ಬೇರೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಬೇಕು ಎಂದು ಮನವಿ ಮಾಡಿದ್ದರು. ಗಂಭೀರವಾಗಿ ಪರಿಗಣಿಸಿದ ಡಿಸಿಪಿ, ಹೈಗ್ರೌಂಡ್ಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿ ಮರು ತನಿಖೆಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿರಿ ಮಿಸ್ಡ್ಕಾಲ್ನಲ್ಲಿ ಪರಿಚಯವಾದ ಯುವಕನೊಂದಿಗೆ ಹಾಸಿಗೆ ಹಂಚಿಕೊಂಡ ಗೃಹಿಣಿ… ಆಕೆ ಗಂಡ ಮಾಡಿದ್ದಾದರೂ ಏನು?
ಸದಾಶಿವನಗರ ಠಾಣೆ ಪೊಲೀಸರು ಲಂಚ ಪಡೆದು ಆರೋಪಿಗಳನ್ನು ಬಿಟ್ಟು ಕಳುಹಿಸಿರುವ ಅನುಮಾನ ಇರುವುದಾಗಿ ದೂರುದಾರ ಅಭಿನವ್ ಸಿಂಘಾಲ್ ಆರೋಪ ಮಾಡಿದ್ದರು. ಈ ಬಗ್ಗೆ ಪ್ರತ್ಯೇಕ ತನಿಖೆ ನಡೆಸಿ ವರದಿ ನೀಡುವಂತೆ ಎಸಿಪಿಗೆ ಡಿಸಿಪಿ ಸೂಚಿಸಿದ್ದಾರೆ.
ಹೈಗ್ರೌಂಡ್ಸ್ ಠಾಣೆ ಪೊಲೀಸರು ರೆಸ್ಟೋರೆಂಟ್ ಕ್ಯಾಷಿಯರ್ ಶರತ್ಕುಮಾರ್, ರಾಜ್ಕಿರಣ್, ಹೇಮಂತ್, ವಾಸೀಂ, ಅರುಣ್ ಕುಮಾರ್, ಲೋಕೇಶ್, ಥಾಮಸ್, ಡಾನಿಯಲ್ ಸೇರಿ 9 ಮಂದಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿರಿ ಮೃತ ಸ್ನೇಹಿತನ ಮನೆ ಕಟ್ಟಿ.. ಅಲ್ಲೇ 11ನೇ ದಿನದ ಕಾರ್ಯ ನೆರವೇರಿಸಿದ ಯುವಕರ ಸಾಹಸಗಾಥೆ ಇದು!