ಹೂವಿನಹಡಗಲಿ: ತಾಲೂಕಿನ ಹಗರನೂರು ಗ್ರಾಮದ ಸಮೀಪ ಮೈಲಾರ-ತೋರಣಗಲ್ ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಗಾಯಗೊಂಡ ಚಿರತೆ ಕೆಲ ಕೆಲ ಕಾಲ ರಸ್ತೆಯಲ್ಲಿಯೇ ಮಲಗಿದ ಘಟನೆ ಸೋಮವಾರ ನಡೆದಿದೆ.
ಹಗರನೂರು ಹೊರ ವಲಯದ ಹೆದ್ದಾರಿಯಲ್ಲಿ ಚಿರತೆ ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಚಿರತೆ ಗಾಯಗೊಂಡು ಕೆಲ ಕಾಲ ರಸ್ತೆಯಲ್ಲಿಯೇ ಮಲಗಿದೆ. ರಸ್ತೆ ಮಧ್ಯೆ ಚಿರತೆ ಕಂಡು ವಾಹನ ಸವಾರರು ಗಾಬರಿಯಾಗಿ ವಾಹನ ನಿಲ್ಲಿಸಿದ್ದಾರೆ. ಕೆಲ ಪ್ರಯಾಣಿಕರು ಹಾರ್ನ್ ಹೊಡೆದರೂ ಚಿರತೆ ಎದ್ದಿಲ್ಲ.
ಸಾರ್ವಜನಿಕರು ಚಿರತೆ ಬಳಿ ತೆರಳಿ ಕೂಗಾಡಿದಾಗ ಚಿರತೆ ಗಾಬರಿಗೊಂಡು ಸೇತುವೆ ಕೆಳ ಭಾಗದಲ್ಲಿ ಅಡಗಿದೆ. ಜನರು ಗಲಾಟೆ, ಕಲ್ಲು ತೂರುವುದು ಮಾಡಿದಾಗ ಜನರ ಮೇಲೆ ಎರಗಲು ಮುಂದಾಗಿದೆ. ಆದರೆ, ನಿಶಕ್ತವಾದ ಕಾರಣ ಚಿರತೆ ಸೇತುವೆ ಕೆಳ ಭಾಗದಲ್ಲಿಯೇ ಭಯದಿಂದ ಅಡಗಿ ಕುಳಿತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.