ಬಾಗಲಕೋಟೆ: ಸಾಮಾಜಿಕ ಮಾಧ್ಯಮದ ಯುಗದಲ್ಲಿ ಯುವ ಪೀಳಿಗೆ ಹೆಚ್ಚು ಸ್ಮಾರ್ಟ್ಫೋನ್ ಗೀಳಿಗೆ ಬಲಿಯಾಗುತ್ತಿದ್ದು, ಇದೀಗ ವಿದ್ಯಾರ್ಥಿಯೋರ್ವ ಐಫೋನ್ ಕೊಡಿಸಲಿಲ್ಲವೆಂದು ಮನೆ ಬಿಟ್ಟು ಹೋಗಿರುವ ಘಟನೆ ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ.
ಮನೆ ಬಿಟ್ಟು ಹೋದ ಬಾಲಕನನ್ನು ಗುರುನಾಥ ತಳವಾರ್ ಹಾಗೂ ಸುವರ್ಣ ದಂಪತಿಯ ಪುತ್ರ ಶ್ರವಣಕುಮಾರ್ ಎಂದು ಗುರುತಿಸಲಾಗಿದೆ. ಈತ ಒಂಬತ್ತನೇ ತರಗತಿ ಮುಗಿಸಿ ಇದೀಗ ಹತ್ತನೇ ತರಗತಿಗೆ ತೇರ್ಗಡೆಯಾಗಿದ್ದ. ಕಳೆದ ಶನಿವಾರ(ಏಪ್ರಿಲ್ 13) ಮನೆಯಲ್ಲಿದ್ದ 800 ರೂ. ತೆಗೆದುಕೊಂಡು ಮನೆಯಿಂದ ಹೋಗಿದ್ದಾನೆ. ಈವರೆಗೆ ಹಿಂತಿರುಗಿಲ್ಲ ಎಂದು ತಿಳಿದು ಬಂದಿದೆ.
ಇನ್ನು ಮನೆಯ ಹಿರಿಮಗ ಕಾಣೆಯಾಗಿದ್ದಕ್ಕೆ ಪೋಷಕರು ಕಂಗಾಲಾಗಿದ್ದು, ಶ್ರವಣಕುಮಾರನನ್ನ ನೆನೆದು ತಂದೆ-ತಾಯಿ, ಸಹೋದರ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಎಲ್ಲೇ ಇದ್ದರೂ ಮನೆಗೆ ಬಾ ಎಂದು ಪೋಷಕರು ಶ್ರವಣಕುಮಾರನ ಫೋಟೋ ಹಿಡಿದು ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ: ಕೈಗೆ ಪಟ್ಟಿ ಕಟ್ಟಿಕೊಂಡು ದ್ವಾರಕೀಶ್ ಅಂತಿಮ ದರ್ಶನಕ್ಕೆ ಬಂದ ಡಿ ಬಾಸ್
ಶ್ರವಣಕುಮಾರ್ ಕಳೆದ ಒಂದು ವರ್ಷದಿಂದ ತಂದೆಯ ಫೋನ್ ಬಳಸುತ್ತಿದ್ದ. ಕಳೆದ ಕೆಲ ದಿನಗಳ ಹಿಂದೆ ಆತನ ಫೋಷಕರು 15 ಸಾವಿರ ರೂಪಾಯಿ ಮೌಲ್ಯದ ಹೊಸ ಮೊಬೈಲ್ ಫೋನ್ ಕೊಡಿಸಿದ್ದರು. ಅದಾದರೂ ಹೊಸ ಐಫೋನ್ ಕೊಡಿಸುವಂತೆ ಪೋಷಕರ ಬಳಿ ಹಠ ಹಿಡಿದಿದ್ದ. ಸ್ವಲ್ಪ ದಿನ ತಡವಾಗುತ್ತದೆ ಎಂದು ಹೇಳಿದ್ದಕ್ಕೆ ಕೋಪಗೊಂಡು ಮನೆ ಬಿಟ್ಟು ಹೋಗಿದ್ದಾನೆ.
ವೃತ್ತಿಯಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕ ಕಂ ನಿರ್ವಾಹಕರಾಗಿರುವ ಗುರುನಾಥ್ ತಳವಾರ್ ಹಾಗೂ ಸುವರ್ಣ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಶ್ರವಣಕುಮಾರ್ ಹಿರಿಯ ಮಗ ಎಂದು ತಿಳಿದು ಬಂದಿದೆ. ಈತ ಓದಿನಲ್ಲಿ ಮುಂದೆ ಇದ್ದು, ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದಾನೆ. ಒಂಬತ್ತನೇ ತರಗತಿಯಲ್ಲಿ 92 ಪ್ರತಿಶತ ಅಂಕ ಗಳಿಸಿದ್ದಾನೆ. ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಶ್ರವಣಕುಮಾರ ಮನೆ ಬಿಟ್ಟು ಹೋಗಿದ್ದು, ಕುಟುಂಬಸ್ಥರಿಗೆ ಧಿಕ್ಕು ತೋಚದಂತಾಗಿದೆ.
ಎಲ್ಲೇ ಇದ್ದರೂ ಮನೆಗೆ ಬಾ ನೀನು ಹೇಳಿದಂತೆ ಫೋನ್ ಕೊಡಿಸುತ್ತೇವೆ ಎನ್ನುತ್ತಿರುವ ಪೋಷಕರು. ಮಗ ಕಾಣೆಯಾದ ಬಗ್ಗೆ ಶ್ರವಣಕುಮಾರ್ ಫೋಷಕರು ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.