More

    ಆನ್​ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಚಾರಣ ಪಥಗಳಿಗೆ ತಾತ್ಕಾಲಿಕ ನಿರ್ಬಂಧ

    ಬೆಂಗಳೂರು: ಪುಷ್ಪಗಿರಿ ಅರಣ್ಯ ವ್ಯಾಪ್ತಿಯ ಕುಮಾರಪರ್ವತಕ್ಕೆ ಜ.26ರಂದು ಒಂದೇ ದಿನ ಸಾವಿರಾರು ಚಾರಣಿಗರು ಭೇಟಿ ಕೊಟ್ಟ ಹಿನ್ನೆಲೆಯಲ್ಲಿ ಅರಣ್ಯದೊಳಗೆ ಜನಜಂಗುಳಿ ತಪ್ಪಿಸಲು ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಚಾರಣ ಪಥಗಳಿಗೆ ಸರ್ಕಾರ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.

    ಈ ಸಂಬಂಧ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಕಾರ್ಯಪಡೆ ಮುಖ್ಯಸ್ಥರಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದು, ಸಾವಿರಾರು ಸಂಖ್ಯೆಯಲ್ಲಿ ಚಾರಣಿಗರು ದಟ್ಟ ಅರಣ್ಯದ ಗಿರಿ ಪ್ರದೇಶಗಳಿಗೆ, ಅದರಲ್ಲೂ ಅಮೂಲ್ಯ ಜೀವವೈವಿಧ್ಯದಿಂದ ಕೂಡಿದ ಪಶ್ಚಿಮಘಟ್ಟಕ್ಕೆ ಪ್ರತಿವಾರವೂ ಆಗಮಿಸಿದರೆ ಪರಿಸರಕ್ಕೂ ಹಾನಿಯಾಗುತ್ತದೆ ಮತ್ತು ಜಲ ಮೂಲಗಳೂ ಕಲುಷಿತಗೊಳ್ಳುತ್ತವೆ. ಹೀಗಾಗಿ ಇಂತಹ ಚಾರಣ ಪಥಕ್ಕೆ ಕಡಿವಾಣ ಹಾಕಿ ಎಂದು ಸೂಚಿಸಿದ್ದಾರೆ.

    ಅರಣ್ಯ ಕಾರ್ಯಪಡೆ ಮುಖ್ಯಸ್ಥರಿಗೆ ಕಳುಹಿಸಿರುವ ಟಿಪ್ಪಣಿಯಲ್ಲಿ, ರಾಜ್ಯದ ಯುವಜನರಲ್ಲಿ ಇತ್ತೀಚೆಗೆ ಅರಣ್ಯವ್ಯಾಪ್ತಿಯ ಗಿರಿ ಶಿಖಿರಗಳಲ್ಲಿ ಚಾರಣ ಮಾಡುವ ಹವ್ಯಾಸ ಹೆಚ್ಚಾಗುತ್ತಿದ್ದು, ಇದು ವಾರಾಂತ್ಯದಲ್ಲಿ ಜನದಟ್ಟಣೆಗೆ ಕಾರಣವಾಗಿದೆ. ಹೀಗೆ ಬರುವವರು ಅರಣ್ಯದ ಅಂಚಿನ ಗ್ರಾಮಗಳಲ್ಲಿ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಮನಸೋಇಚ್ಛೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲಿ, ತಟ್ಟೆ, ಉಳಿದ ಆಹಾರ ಪದಾರ್ಥ ಇತ್ಯಾದಿಗಳನ್ನು ಎಸೆಯುತ್ತಿದ್ದು, ಇದು ವನ್ಯಜೀವಿಗಳಿಗೆ ಅಪಾಯ ತರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಷ್ಟೊಂದು ಜನರನ್ನು ನಿಯಂತ್ರಿಸುವುದು ಮತ್ತು ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಬಿಡುವುದು ಅರಣ್ಯ ಇಲಾಖೆಯ ಸಿಬ್ಬಂದಿಗೂ ದೊಡ್ಡ ಸವಾಲಾಗುತ್ತದೆ ಎಂದಿದ್ದಾರೆ.

    ಕೆಲವು ಚಾರಣಿಗರು ಟ್ರಕ್ಕಿಂಗ್ ವೇಳೆ ಟೆಂಟ್ ಹಾಕಿ ರಾತ್ರಿ ಉಳಿಯುತ್ತಿದ್ದಾರೆ ಎಂಬ ವರದಿಯ ಬಗ್ಗೆಯೂ ಪ್ರಸ್ತಾಪಿಸಿದ್ದು, ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಚಾರಣ ಪಥಗಳು ಅಂದರೆ ಕುಮಾರ ಪರ್ವತ, ಮೂರುಕಣ್ಣಿನಗುಡ್ಡ ಸೇರಿದಂತೆ ಎಲ್ಲ ಚಾರಣ ತಾಣಗಳಲ್ಲಿ ಪ್ರಮಾಣಿತ ಕಾರ್ಯ ವಿಧಾನ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ರೂಪಿಸುವವರೆಗೆ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ತರುವವರೆಗೆ ತಾತ್ಕಾಲಿಕವಾಗಿ ಚಾರಣ ನಿರ್ಬಂಧಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

    ಪ್ರಸ್ತುತ ಅರಣ್ಯ ಇಲಾಖೆಯ ಪರಿಸರ ಪ್ರವಾಸೋದ್ಯಮ ವಿಭಾಗದ ವತಿಯಿಂದ ನಿರ್ವಹಿಸುತ್ತಿರುವ ಚಾರಣ ಪಥಗಳಲ್ಲಿ 150 ಚಾರಣಿಗರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts