ಬೆಂಗಳೂರು: ಕರೊನಾ ವೈರಸ್ ಹರಡಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ಕೊಟ್ಟ ಆರೋಪದಲ್ಲಿ ಬಂಧಿತನಾಗಿರುವ ಸಾಫ್ಟ್ ವೇರ್ ಇಂಜಿನಿಯರ್ಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಿರಾಕರಿಸಿದೆ.
ಟೆಕ್ಕಿ ಮೊಹಮ್ಮದ್ ಮುಜೀಬ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಅವರಿದ್ದ ಪೀಠ, ಜಾಮೀನು ಮಂಜೂರು ಮಾಡಲು ನಿರಾಕರಿಸಿ ಅರ್ಜಿ ವಜಾಗೊಳಿಸಿತು.
ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಈತನಿಗೆ ತನ್ನ ನಡೆಯಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಅರಿವಿರಬೇಕು. ವಿದ್ಯಾವಂತನಾಗಿದ್ದು, ಒಳ್ಳೆಯ ಉದ್ಯೋಗದಲ್ಲಿರುವ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿಷಯಗಳು ದೇಶದ ಸಾಮರಸ್ಯ, ಸಾರ್ವಭೌಮತ್ವ, ಭ್ರಾತೃತ್ವ ಮತ್ತು ಏಕತೆಗೆ ಧಕ್ಕೆ ಉಂಟು ಮಾಡುವಂತಿವೆ. ಇಡೀ ಪ್ರಪಂಚ ಕರೊನಾದಂಥ ಆಘಾತಕಾರಿ ಸನ್ನಿವೇಶ ಎದುರಿಸುತ್ತಿರುವ ಸಂದರ್ಭದಲ್ಲಿ ಜನರಲ್ಲಿ ಆತಂಕ ಹುಟ್ಟಿಸುವ ಪ್ರಯತ್ನ ಇದಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.
ಇದನ್ನೂ ಓದಿ ಚೀನಾಕ್ಕೆ ಬುದ್ಧಿ ಕಲಿಸಲು ಸನ್ನದ್ಧವಾಗಿದೆ ಭಾರತೀಯ ಸೇನೆ
ತನಿಖಾ ದಾಖಲೆಗಳ ಪ್ರಕಾರ, ಅರ್ಜಿದಾರ ಬಹರೇನ್ ಮತ್ತು ಕುವೈತ್ ದೇಶಗಳಲ್ಲಿ ಕೆಲ ವರ್ಷ ನೆಲೆಸಿದ್ದು, ಧಾರ್ಮಿಕ ಮೂಲಭೂತವಾದ ಹಾಗೂ ದೇಶ ವಿರೋಧಿ ಚಿಂತನೆ ಹೊಂದಿದ್ದ. ಇಸ್ಲಾಮಿಕ್ ಮಾಹಿತಿಗಾಗಿ ಪಾಕಿಸ್ತಾನದ ವಾಟ್ಸ್ಆ್ಯಪ್ ನಂಬರ್ ಹಂಚಿಕೊಂಡಿದ್ದಾನೆಂದು ತಿಳಿದುಬಂದಿದೆ. ಅರ್ಜಿದಾರನ ಸಂಪರ್ಕಗಳ ಬಗ್ಗೆ ಎನ್ಐಎ ಸಹ ತನಿಖೆ ನಡೆಸುತ್ತಿದ್ದು, ಅದಿನ್ನೂ ಪ್ರಗತಿಯಲ್ಲಿದೆ. ಇಂಥ ಸಂದರ್ಭದಲ್ಲಿ ಜಾಮೀನು ನೀಡುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.
ಮುಜೀಬ್ ಫೇಸ್ಬುಕ್ನಲ್ಲಿ ‘‘ಹೊರಗೆ ತೆರಳಿ ಸಾರ್ವಜನಿಕ ಪ್ರದೇಶದಲ್ಲಿ ಸೀನುವ ಮೂಲಕ ವೈರಸ್ ಹರಡಲು ನಾವೆಲ್ಲರೂ ಕೈ ಜೋಡಿಸೋಣ. ಈ ವಿಷಯವನ್ನು ಎಲ್ಲರಿಗೂ ಮುಟ್ಟಿಸಿ ಪ್ರಪಂಚ ಕೊನೆಗಾಣಿಸಿ. ನಾಯಿಗಳನ್ನು ಕೊಲ್ಲಲು ನನ್ನ ಸ್ಟೆನ್ಗನ್ ಸಿದ್ಧವಿದೆ’ ಎಂದು ಪೋಸ್ಟ್ ಹಾಕಿದ್ದ.
ಈ ಬಗ್ಗೆ ಮಹೇಶ್ ಮಲ್ಲಯ್ಯನವರ್ ಎಂಬುವವರು ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಮಾ. 9ರಂದು ಮುಜೀಬ್ನನ್ನು ಬಂಧಿಸಿದ್ದರು. ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಅಕ್ರಮ ಮಾರ್ಗದಲ್ಲಿ ಬರುತ್ತಿರುವ ಭಾರತೀಯರಿಂದ ಕರೊನಾ ಸೋಂಕು ಹರಡುತ್ತಿದೆ…!