ನವದೆಹಲಿ: ಮಿಚೌಂಗ್ ಚಂಡಮಾರುತವು ಕರಾವಳಿ ಜಿಲ್ಲೆಗಳಿಗೆ ಅಪ್ಪಳಿಸುವ ನಿರೀಕ್ಷೆ ಇರುವುದರಿಂದ, ತಮಿಳುನಾಡಿನಾದ್ಯಂತ ಪೊಲೀಸರು ಮತ್ತು ಅಧಿಕಾರಿಗಳನ್ನು ಹೈ ಅಲರ್ಟ್ ಮಾಡಲಾಗಿದೆ. 118 ರೈಲುಗಳ ಸಂಚಾರ ರದ್ದು ಮಾಡಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಮತ್ತು ಪುದುಚೇರಿಗೆ 18 ತಂಡಗಳನ್ನು ಕಳುಹಿಸಿದೆ. ಯಾವುದೇ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸಲು 10 ಹೆಚ್ಚುವರಿ ತಂಡಗಳನ್ನು ಸಜ್ಜುಗೊಳಿಸಲಾಗಿದೆ.
ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳು ಭಾರಿ ಮಳೆಗೆ ತುತ್ತಾಗುತ್ತಿದ್ದು, ನೈಋತ್ಯ ಬಂಗಾಳ ಕೊಲ್ಲಿಯಲ್ಲಿನ ಹೆಚ್ಚಿನ ಒತ್ತಡದಿಂದ ಮುಂದಿನ 24 ಗಂಟೆಗಳಲ್ಲಿ ಮಿಚೌಂಗ್ ಚಂಡಮಾರುತ ತೀವ್ರವಾಗಿ ಬೀಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂದಾಜಿಸಿದೆ.
ಚಂಡಮಾರುತದ ರಚನೆಯು ಪುದುಚೇರಿಯ ಪೂರ್ವ-ಆಗ್ನೇಯಕ್ಕೆ ಅಂದಾಜು 440 ಕಿಮೀ ಮತ್ತು ಚೆನ್ನೈನ ಆಗ್ನೇಯಕ್ಕೆ 420 ಕಿಮೀ ದೂರದಲ್ಲಿದೆ.
ತೀವ್ರ ಒತ್ತಡವು “ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆಯಿದೆ ಮತ್ತು ಮುಂದಿನ 24 ಗಂಟೆಗಳಲ್ಲಿ ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತವು ಬೀಸಬಹುದಾಗಿದೆ. ಇದಾದ ನಂತರ, ಅದು ವಾಯುವ್ಯಕ್ಕೆ ಚಲಿಸಿ, ಸೋಮವಾರದ ಮುನ್ನಾದಿನದ ವೇಳೆಗೆ ದಕ್ಷಿಣ ಆಂಧ್ರಪ್ರದೇಶ ಮತ್ತು ಪಕ್ಕದ ಉತ್ತರ ತಮಿಳುನಾಡು ಕರಾವಳಿಯಿಂದ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯನ್ನು ತಲುಪುತ್ತದೆ ”ಎಂದು ಐಎಂಡಿ ಮುನ್ಸೂಚನೆಯಲ್ಲಿ ತಿಳಿಸಿದೆ.
ಡಿಸೆಂಬರ್ 5 ರಂದು, ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯನ್ನು ದಾಟುವುದರಿಂದ ಈ ಚಂಡಮಾರುತವು ಗರಿಷ್ಠ 80-90 ಕಿಮೀ ವೇಗವನ್ನು ತಲುಪುವ ನಿರೀಕ್ಷೆಯಿದೆ, , ಇದು ಗಂಟೆಗೆ 100 ಕಿಮೀ ವೇಗ ಕೂಡ ಪಡೆದುಕೊಳ್ಳಬಹುದಾಗಿದೆ.
ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳು ಮತ್ತು ಉತ್ತರ ತಮಿಳುನಾಡು ಮತ್ತು ಪುದುಚೇರಿಯ ಪಕ್ಕದ ಕರಾವಳಿ ಜಿಲ್ಲೆಗಳಲ್ಲಿ ಆಸ್ತಿ ಮತ್ತು ದುರ್ಬಲ ಕಟ್ಟಡಗಳಿಗೆ ಹಾನಿಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ಹೇಳಿದೆ.
ಮಳೆಯ ಎಚ್ಚರಿಕೆ:
ಉತ್ತರ ಕರಾವಳಿ ತಮಿಳುನಾಡು ಮತ್ತು ಪುದುಚೇರಿಯ ಕೆಲವು ಸ್ಥಳಗಳಲ್ಲಿ ಭಾನುವಾರ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಸೋಮವಾರ ಕೂಡ ಮಳೆಯಾಗುವ ಸಾಧ್ಯತೆಯಿದ್ದು, ನಂತರ ಕಡಿಮೆಯಾಗಬಹುದು. ಚೆನ್ನೈನಲ್ಲಿಯೂ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.
ದಕ್ಷಿಣ ಕರಾವಳಿ ಆಂಧ್ರಪ್ರದೇಶದಲ್ಲಿ ಭಾನುವಾರದಂದು ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುತ್ತದೆ. ಸೋಮವಾರ ಮತ್ತು ಮಂಗಳವಾರದಂದು ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂನ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುತ್ತದೆ. ಡಿಸೆಂಬರ್ 6 ರಂದು ಕೂಡ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ರಾಯಲಸೀಮಾ ಪ್ರದೇಶವು ಭಾನುವಾರ ಮತ್ತು ಸೋಮವಾರದಂದು ಮಳೆಯಾಗಬಹುದು.
ಒಡಿಶಾದಲ್ಲಿ ಸೋಮವಾರ ಮತ್ತು ಬುಧವಾರದ ನಡುವೆ ದಕ್ಷಿಣ ಕರಾವಳಿ ಮತ್ತು ಪಕ್ಕದ ದಕ್ಷಿಣ ಒಳಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ವಿವಿಧ ರಾಜ್ಯಗಳಲ್ಲಿ ಎನ್ಐಎ ದಾಳಿ: ನಕಲಿ ನೋಟು ಜಾಲದಲ್ಲಿನ ಬಳ್ಳಾರಿ ವ್ಯಕ್ತಿ ಯಾರು?
ಲೋಕಸಭೆ ಚುನಾವಣೆಯ ಸೆಮಿಫೈನಲ್ ಫಲಿತಾಂಶ ಶೀಘ್ರ; ಮತ ಎಣಿಕೆಯಲ್ಲಿ ವಿಜಯಮಾಲೆ ಯಾರಿಗೆ?
ವಿವಾಹ ಭೋಜನವಿದು… ಅತಿಥಿಗಳೇ ರೊಟ್ಟಿ ತಯಾರಕರು… ನೆಟ್ಟಿಗರ ಗಮನ ಸೆಳೆದ ವಿಶಿಷ್ಟ ವಿಡಿಯೋ