More

    ಐಪಿಎಸ್ ಅಧಿಕಾರಿ ಎನ್ನುತ್ತಾ ವಂಚಿಸಿರುವುದು ದೃಢ; ಪೊಲೀಸರ ತನಿಖೆಯಲ್ಲಿ ಬಯಲಾದ ಇನ್ನಷ್ಟು ಮಾಹಿತಿಗಳ ವಿವರ ಇಂತಿವೆ…

    ಬೆಂಗಳೂರು: ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ನಕಲಿ ಐಪಿಎಸ್ ಅಧಿಕಾರಿ ಶ್ರೀನಿವಾಸ್, ಭಾರತೀಯ ರೈಲ್ವೆ ಅಧಿಕಾರಿ, ವೈದ್ಯ,ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿ, ಕೇಂದ್ರ ಗುಪ್ತಚರ ವಿಭಾಗದ ಅಧಿಕಾರಿ ಎಂದು ಸಾರ್ವಜನಿಕರಿಗೆ ವಂಚಿಸಿರುವುದು ತಲಘಟ್ಟಪುರ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

    ಈತನಿಂದ ಲಕ್ಷಾಂತರ ರೂ. ಮೌಲ್ಯದ ಐಷಾರಾಮಿ ದ್ವಿಚಕ್ರ ವಾಹನಗಳು ಹಾಗೂ 36.20 ಲಕ್ಷ ರೂ. ನಗದನ್ನು ತಲಘಟ್ಟಪುರ ಠಾಣೆ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಸಾರ್ವಜನಿಕರಿಗೆ ವಂಚಿಸಿದ ಹಣದಲ್ಲಿ ಖರೀದಿಸಿದ್ದ 54 ಲಕ್ಷ ರೂ. ಮೌಲ್ಯದ 21 ಐಫೋನ್, ಇನೋವಾ ಕಾರು, ಬಿಎಂಡ್ಲ್ಹ್ಯೂ ಬೈಕ್, ಟ್ರಯಂಫ್ ಟೈಗರ್ ಎಕ್ಸ್‌ಆರ್‌ಎಕ್ಸ್ ಬೈಕ್, ಎಕ್ಸ್-ಪಲ್ಸ್ ಬೈಕ್, ರಾಯಲ್ ಎನ್‌ಫೀಲ್ಡ್ ವಶಕ್ಕೆ ಪಡೆಯಲಾಗಿದೆ. ಜತೆಗೆ ಆ್ಯಪಲ್ ಕಂಪನಿಯ ಲ್ಯಾಪ್‌ಟಾಪ್, ಒಂದು ಡಮ್ಮಿ ಪಿಸ್ತೂಲ್, ನಾಲ್ಕು ವಾಕಿಟಾಕಿಗಳು, ನಕಲಿ ಗುರುತಿನ ಚೀಟಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಮದುವೆಗೆ ಹೋಗುವುದನ್ನೇ ಮರೆತ ವರ; ಮುರಿದು ಬಿದ್ದ ವಿವಾಹದ ವೆಚ್ಚ ಭರಿಸುವಂತೆ ತಾಕೀತು ಮಾಡಿದ ವಧು!

    ಈತ ದತ್ತು ಮಗ

    ಸಿನಿಮಾಗಳ ಪ್ರೇರಣೆ ಹಾಗೂ ಐಷಾರಾಮಿ ಜೀವನಕ್ಕಾಗಿ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಸಾರ್ವಜನಿಕರಿಗೆ ಆರೋಪಿ ಶ್ರೀನಿವಾಸ್ ವಂಚಿಸುತ್ತಿದ್ದ. ಈತನನ್ನು ಚಂದ್ರಲೇಔಟ್ ನಿವಾಸಿ ಎಂ.ರಾಜು ಎಂಬುವರು ಆಸ್ಪತ್ರೆಯಿಂದ ತಂದು ದತ್ತು ಮಗನಾಗಿ ಸಾಕಿದ್ದಾರೆ. ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಕಾಲೇಜಿನಲ್ಲಿ ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡಿದ್ದು, ಅರ್ಧಕ್ಕೆ ನಿಲ್ಲಿಸಿದ್ದಾನೆ. ಇದೇ ವೇಳೆ ಐಷಾರಾಮಿ ಜೀವನಕ್ಕಾಗಿ 2010ರಲ್ಲಿ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ಎರಡು ಕಾರುಗಳನ್ನು ಕಳವು ಮಾಡಿದ್ದ. ಅದರಲ್ಲಿ ಜೈಲಿಗೂ ಹೋಗಿ ಬಂದಿದ್ದಾನೆ.

    ಯುವತಿಗೆ ವಂಚನೆ

    ಮುಕ್ತ ವಿವಿಯಲ್ಲಿ ಬಿಸಿಎ ವ್ಯಾಸಂಗ ಮಾಡಿ, ಬನ್ನೇರುಘಟ್ಟ, ಬೇಗೂರು ಕೊಪ್ಪ, ಹುಲ್ಲಹಳ್ಳಿಯಲ್ಲಿರುವ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ. ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ರಮ್ಯಾ ಎಂಬಾಕೆಯನ್ನು ಪರಿಚಯಿಸಿಕೊಂಡಿದ್ದಾನೆ. ಕೆಲ ದಿನಗಳ ಬಳಿಕ ‘ತಾನು ಐಪಿಎಸ್ ತೇರ್ಗಡೆ ಆಗಿದ್ದೇನೆ. ನಿನ್ನನ್ನೇ ಮದುವೆ ಆಗುತ್ತೇನೆ’ ಎಂದು ಆಕೆ ಜತೆಗೆ ಗೋವಾ, ಚೆನ್ನೈ, ಹೈದರಾಬಾದ್ ಕಡೆ ಕರೆದೊಯ್ದು ಸುತ್ತಾಡಿ ವಂಚಿಸಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಮೊದಲಿಗೆ ‘ನಾನು ಸಬ್‌ಇನ್‌ಸ್ಪೆಕ್ಟರ್ ಆಗಿದ್ದು, ಐಬಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ನಂಬಿಸಿದ್ದಾನೆ. ಬಳಿಕ ಐಪಿಎಸ್ ಪರೀಕ್ಷೆಯಲ್ಲಿ 7ನೇ ರ್ಯಾಂಕ್ ಪಡೆದು ಉತ್ತೀರ್ಣನಾಗಿದ್ದೇನೆ’ ಎಂದು ನಂಬಿಸಿದ್ದಾನೆ. ಅಲ್ಲದೆ, ಅದಕ್ಕೆ ಪೂರಕವಾಗಿ ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡು ಪೊಲೀಸ್ ಅಧಿಕಾರಿಯ ಸಮವಸ್ತ್ರ ಧರಿಸಿ, ಇನೋವಾ ಕಾರಿಗೆ ಪೊಲೀಸ್ ವಾಹನಗಳ ಮೇಲೆ ಅಳವಡಿಸಿರುವ ಟಾಪ್‌ಲೈಟ್ ಹಾಕಿಕೊಂಡಿದ್ದಾನೆ. ಡಮ್ಮಿ ಪಿಸ್ತೂಲ್, ವಾಕಿಟಾಕಿಗಳನ್ನು ಖಾಸಗಿಯಾಗಿ ಖರೀದಿಸಿ, ಅಸಲಿ ಎಂದು ನಂಬಿಸಿದ್ದಾನೆ. ಹೀಗೆ ಸಾರ್ವಜನಿಕರಿಗೆ ನಕಲಿ ಗುರುತಿನ ಚೀಟಿ ತೋರಿಸಿ, ಲ್ಯಾಂಡ್ ಡೀಲಿಂಗ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಕೋಟ್ಯಂತರ ರೂ. ಪಡೆದು ವಂಚಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಕೊಡವ ಶೈಲಿಯ ಉಡುಗೆ ಧರಿಸಿ ಫೋಸ್ ಕೊಟ್ಟ ಸಿಎಂ ಬೊಮ್ಮಾಯಿ; ಫೋಟೋ ವೈರಲ್

    ಪ್ರಕರಣವೇನು?

    ತಲಘಟ್ಟಪುರ ನಿವಾಸಿ ಹಾಗೂ ದೂರುದಾರ ವೆಂಕಟನಾರಾಯಣ್‌ಗೆ ಸ್ನೇಹಿತ ವೆಂಕಟರಮಣ್ಣಪ್ಪ ಎಂಬುವರ ಮೂಲಕ ಶ್ರೀನಿವಾಸ್ ಪರಿಚಯವಾಗಿದ್ದಾನೆ. ಈ ವೇಳೆ ತಾನೊಬ್ಬ ಐಪಿಎಸ್ ಪೊಲೀಸ್ ಅಧಿಕಾರಿಯಾಗಿದ್ದು, ಮೈಸೂರಿನಲ್ಲಿ ಪ್ರೊಬೇಷನರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಸದ್ಯದಲ್ಲಿ ಬೆಂಗಳೂರಿಗೆ ಡಿಸಿಪಿಯಾಗಿ ಬಡ್ತಿ ಪಡೆದು ಬರುತ್ತೇನೆ ಎಂದು ನಂಬಿಸಿದ್ದಾನೆ. ಅಲ್ಲದೆ, ಮೈಸೂರಿನಲ್ಲಿ ಒಂದು ಪ್ರಾಪರ್ಟಿಯ ಕೇಸ್ ಡೀಲ್ ಮಾಡುತ್ತಿದ್ದು, ಈ ಕೇಸ್‌ನಲ್ಲಿ 450 ಕೋಟಿ ರೂ. ಡೀಲ್ ಇದ್ದು, ಅದರಲ್ಲಿ 250 ಕೋಟಿ ರೂ. ಬರುತ್ತದೆ. ಹೀಗಾಗಿ ತನಗೆ 2.5 ಕೋಟಿ ರೂ. ಅಗತ್ಯವಿದೆ ಎಂದು ಹೇಳಿ ಮುಂಗಡವಾಗಿ 49 ಲಕ್ಷ ರೂ. ಪಡೆದು, ಡಿಸೆಂಬರ್‌ನಲ್ಲಿ ವಾಪಸ್ ನೀಡಿದ್ದಾನೆ. ಅನಂತರ ಹೆಚ್ಚುವರಿ ಹಣ ಕೇಳಿದಾಗ, ಜಯನಗರದ ಸುಖ್‌ಸಾಗರ್ ಹೋಟೆಲ್ ಮಾಲೀಕ ಅಭಿಷೇಕ್ ಪೂಜಾರಿ ಅವರಿಂದ ೧.೨೦ ಕೋಟಿ ರೂ. ಹಾಗೂ ಸ್ನೇಹಿತರೊಬ್ಬರಿಂದ ೫೬ ಲಕ್ಷ ರೂ. ಕೊಡಿಸಿದ್ದಾರೆ. ಆದರೆ, ಆರೋಪಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ.

    ಹಲವು ನಕಲಿ ಗುರುತಿ ಚೀಟಿಗಳು ಜಪ್ತಿ

    ಆರೋಪಿ ಶ್ರೀನಿವಾಸ್ ಮನೆಯಲ್ಲಿ ಶೋಧ ನಡೆಸಿದಾಗ ಈತ, ಭಾರತೀಯ ರೈಲ್ವೆಯಲ್ಲಿ ಆಪರೇಷನ್ ಎಕ್ಸಿಕ್ಯೂಟಿವ್, ಎಂಬಿಬಿಎಸ್, ಎಂಡಿ ಹೃದ್ರೋಗ ತಜ್ಞ ಎಂದು ಕರ್ನಾಟಕ ಮೆಡಿಕಲ್ ಕೌನ್ಸಿನ್ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಪಡೆದುಕೊಂಡಿದ್ದಾನೆ. ರಕ್ಷಣಾ ಸಚಿವಾಲಯದಲ್ಲಿ ರಿಮೋಟ್ ಪೈಲೆಟ್ ಎಂಬ ಹುದ್ದೆಯಲ್ಲಿರುವಂತೆ ನಕಲಿ ಐಟಿ ಕಾರ್ಡ್ ಸೃಷ್ಟಿಸಿಕೊಂಡಿದ್ದಾನೆ. ಹಾಗೆಯೇ ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಎಎಸ್‌ಐ (ಸಹಾಯಕ ಗುಪ್ತಚರ ಅಧಿಕಾರಿ) ಎಂಬ ಹುದ್ದೆಯಲ್ಲಿರುವುದಾಗಿ ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದ ಅವುಗಳನ್ನು ಜಪ್ತಿ ಮಾಡಲಾಗಿದೆ. ಆದರೆ, ಈ ಗುರುತಿನ ಚೀಟಿಗಳನ್ನು ತೋರಿಸಿ ಯಾವ ರೀತಿ ವಂಚಿಸಿದ್ದಾನೆ. ಯಾರಿಂದ ಹಣ ಪಡೆದುಕೊಂಡಿದ್ದಾನೆ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಬಿಜೆಪಿ ರೌಡಿ ಮೋರ್ಚಾಗೆ ಬಹಿರಂಗ ಚಾಲನೆ ದೊರೆತಿದೆ! ಕಾಂಗ್ರೆಸ್ ಟೀಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts