ಬೆಂಗಳೂರು: ಚುನಾವಣೆ ಇನ್ನೇನು ಸಮೀಪದಲ್ಲೇ ಇದ್ದು ನಟ ಸುದೀಪ್ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಆಗುತ್ತಾರಾ ಎನ್ನುವ ಪ್ರಶ್ನೆ ಅನೇಕರಿಗೆ ಕಾಡುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನ ಸುರ್ಜೇವಾಲಾ ಹಾಗೂ ಬಿಜೆಪಿಯ ಸಚಿವ ಸುಧಾಕರ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಕಾಲೆಳೆದುಕೊಂಡು ಜಗಳಕ್ಕಿಳಿದಿದ್ದಾರೆ.
ಸ್ಟಾರ್ ನಟ ಸುದೀಪ್ ಬಿಜೆಪಿಯ ಕ್ಯಾಂಪೇನರ್ ಆಗುವ ವಿಚಾರವಾಗಿ ಸುರ್ಜೇವಾಲಾ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ಕೌಂಟರ್ ಕೊಟ್ಟಿರುವ ಸಚಿವ ಸುಧಾಕರ್ “ಹಿಂದೆ ಕಾಂಗ್ರೆಸ್ನವರು ಇಬ್ಬರು ನಟಿಯರನ್ನ ಮಂತ್ರಿ ಮಾಡಿರಲಿಲ್ವಾ? ಅನ್ಯ ಪಕ್ಷದವರು ಬಿಜೆಪಿ ಬಗ್ಗೆ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಮೋದಿ ಅವರಆಡಳಿತದ ಮೇಲೆ ನಂಬಿಕೆ ಇಟ್ಟು ನಾಯಕರು ಪಕ್ಷಕ್ಕೆ ಬರ್ತಿದ್ದಾರೆ. ನಟ ಸುದೀಪ್ ಅವರೇ ಬಿಜೆಪಿಯ ಸ್ಟಾರ್ ಕ್ಯಾಂಪೇನರ್” ಎಂದು ಬಿಜೆಪಿ ಕಚೇರಿಯಲ್ಲಿ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ.
ಇದೇ ಸಂದರ್ಭ ಇತರ ನಟರಿಗೂ ಆಹ್ವಾನ ನೀಡಿದ ಸಚಿವರು “ಸುದೀಪ್ ಪಕ್ಷದ ಸ್ಟಾರ್ ಕ್ಯಾಂಪೇನರ್ ಆಗಿಯೇ ಪ್ರಚಾರ ಮಾಡ್ತಾರೆ. ಈಗಾಗಲೇ ಅವ್ರು ಮುಖ್ಯಮಂತ್ರಿಗಳಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಅವರು ಎಲ್ಲೆಲ್ಲಿ ಪ್ರಚಾರ ಮಾಡಬೇಕು ಎಂದು ಶೀಘ್ರವೇ ತೀರ್ಮಾನ ಮಾಡ್ತೀವಿ. ಇನ್ನೂ ಹಲವು ಸ್ಟಾರ್ ನಟರು ಪ್ರಚಾರಕ್ಕೆ ಬಂದರೆ ಸ್ವಾಗತ” ಎಂದು ಹೇಳಿದ್ದಾರೆ.