ಬೆಂಗಳೂರು: ಕೇರಳದಲ್ಲಿ ಸಂಭವಿಸಿದ ಗರ್ಭಿಣಿ ಆನೆಯ ಧಾರುಣ ಸಾವು, ಕರುಳು ಹಿಂಡುವ ಸನ್ನಿವೇಶವನ್ನು ಮರಳು ಕಲಾವಿದರೊಬ್ಬರು ಒಡಿಶಾದ ಪುರಿ ಕಡಲತೀರದಲ್ಲಿ ಮರಳು ಕಲೆ ಮೂಲಕ ಕಟ್ಟಿಕೊಟ್ಟಿದ್ದು, ಈ ದೃಶ್ಯ ಮನುಕುಲದ ಮಾನವೀಯತೆಯನ್ನೇ ಪ್ರಶ್ನಿಸಿದೆ.
ಕಿಡಿಗೇಡಿಗಳ ಕೃತ್ಯಕ್ಕೆ ಬಲಿಯಾದ ಗರ್ಭಿಣಿ ಆನೆ ಮತ್ತು ತಾಯಿಗರ್ಭದಿಂದ ಹೊರಬರುವ ಮುನ್ನವೇ ಮೃತಪಟ್ಟ ಆನೆಮರಿಗೆ ಶೋಕ ವ್ಯಕ್ತಪಡಿಸಿರುವ ಪ್ರಸಿದ್ಧ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್, ಆನೆ ತನ್ನ ಮಗುವಿನೊಂದಿಗೆ ನೆಲದ ಮೇಲೆ ಮಲಗಿರುವಂತೆ ಚಿತ್ರ ಬಿಡಿಸಿದ್ದಾರೆ. ಈ ಚಿತ್ರ ತಾಯಿಆನೆ ಮತ್ತು ಮರಿಯಾನೆ ಚಿರನಿದ್ರೆಗೆ ಜಾರಿದಂತಿದೆ.
ಇದನ್ನೂ ಓದಿರಿ ನಾವು ಮನುಷ್ಯರಾಗೋದು ಯಾವಾಗ? ಗರ್ಭಿಣಿ ಆನೆ ಸಾವಿಗೆ ಸ್ಯಾಂಡಲ್ವುಡ್ ಸಂತಾಪ
ಈ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ಸುದರ್ಶನ್ ಪಟ್ನಾಯಕ್, “ಮಾನವೀಯತೆ ಮತ್ತೆ ವಿಫಲವಾಗಿದೆ. ಆನೆಯನ್ನು ರಕ್ಷಿಸಿ” ಎಂದು ಶೀರ್ಷಿಕೆ ಬರೆದಿದ್ದಾರೆ. ಈ ಚಿತ್ರವನ್ನು ಸಾವಿರಾರು ಮಂದಿ ಶೇರ್ ಮಾಡಿಕೊಂಡಿದ್ದು, ಗರ್ಭಿಣಿ ಆನೆ ಸಾವಿಗೆ ಲಕ್ಷಾಂತರ ಜನರು ಸಂತಾಪ ಸೂಚಿಸಿದ್ದಾರೆ. ಇದೇ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ಐಎಫ್ಎಸ್ ಅಧಿಕಾರಿ ಸುಸಂತ ನಂದ ಅವರು ‘ನಾವು ಮಾನವರಾಗಿ ಮತ್ತು ಭೂಮಂಡಲದ ಪಾಲಕರಾಗಿ ಸೋತಿದ್ದೇವೆ” ಎಂದು ಬರೆದು ಕೊಂಡಿದ್ದಾರೆ. ಈ ಚಿತ್ರ ವೈರಲ್ ಆಗಿದ್ದು, ಆನೆ ಸಾವಿಗೆ ನ್ಯಾಯ ಸಿಗಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಇದನ್ನೂ ಓದಿರಿ ಮಾನವೀಯತೆ ಮರೆತು ಗರ್ಭಿಣಿ ಆನೆ ಕೊಂದ ದುಷ್ಟರಿಗೆ ಮುಂದೆ ಕಾದಿದೆ ಮಾರಿಹಬ್ಬ
ಕೇರಳದ ಮಲಪ್ಪುರಂ ಜಿಲ್ಲೆಯ ಸೈಲೆಂಟ್ ವ್ಯಾಲಿಯಲ್ಲಿ ಆಹಾರ ಹುಡುಕುತ್ತ ಗ್ರಾಮವೊಂದರ ಸಮೀಪ ಬಂದಿದ್ದ ಹೆಣ್ಣಾನೆಗೆ ಕೆಲ ಕಿಡಿಗೇಡಿಗಳು ಪೈನಾಪಲ್(ಅನಾನಸ್) ನಲ್ಲಿ ಪಟಾಕಿ ಇಟ್ಟು ತಿನ್ನಲು ಕೊಟ್ಟಿದ್ದರು. ಇದನ್ನು ತಿನ್ನುತ್ತಿದ್ದಂತೆ ಸ್ಫೋಟಗೊಂಡು ಆನೆಯ ಸೊಂಡಿಲು-ಬಾಯಿಗೆ ತೀವ್ರ ಗಾಯವಾಗಿತ್ತು. ಸುಟ್ಟಗಾಯದ ನೋವು ಸಹಿಸಲಾರದೆ ನದಿ ನೀರೊಳಗೆ ಹೋದ ಗರ್ಭಿಣಿ ಆನೆ ನಿಂತಲ್ಲೇ ಪ್ರಾಣಬಿಟ್ಟಿತ್ತು. ಕೆಲವೇ ತಿಂಗಳಲ್ಲಿ ಭೂಮಿ ಮೇಲೆ ಕಣ್ಣು ಬಿಡಬೇಕಿದ್ದ ಆನೆಭ್ರೂಣವೂ ತಾಯಿ ಗರ್ಭದಲ್ಲೇ ಸತ್ತಿದೆ.
ಈ ಪೈಶಾಚಿಕ ಕೃತ್ಯಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹ ಕೇಳಿಬಂದಿದೆ. ಈ ನಡುವೆ ಮರಳು ಕಲಾವಿದ ಸುದರ್ಶನ್ ಅವರ ಚಿತ್ರವು ಮನುಕುಲದ ಮನಸ್ಥಿತಿ ಎತ್ತ ಸಾಗಿದೆ, ಮಾನವೀಯತೆ ಎಲ್ಲಿದೆ… ಎಂಬೆಲ್ಲ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ.
ಇದನ್ನೂ ಓದಿರಿ ಗರ್ಭಿಣಿ ಆನೆ ಸಾವು : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕೇಂದ್ರ ಭರವಸೆ
Humanity has failed again………..
One of my SandArt on save #Elephant. pic.twitter.com/nzcM4PNDvr— Sudarsan Pattnaik (@sudarsansand) June 3, 2020