ನವದೆಹಲಿ: ಭಾರತದ ಬಗ್ಗೆ ಅಸಂಬದ್ಧ ಮಾತುಗಳನ್ನಾಡುವುದನ್ನೂ ಈ ಕೂಡಲೇ ನಿಲ್ಲಿಸಿ ಎಂದು ಬ್ರೆಜಿಲ್ ಮೂಲದ ಗ್ಯಾಂಗ್ರೇಪ್ ಸಂತ್ರಸ್ತೆ ಇನ್ಸ್ಟಾಗ್ರಾಂ ಮೂಲಕ ತಮ್ಮ ಫಾಲೋವರ್ಸ್ಗೆ ಮನವಿ ಮಾಡಿದ್ದಾರೆ. ಗಂಡನ ಜತೆ ಭಾರತ ಪ್ರವಾಸದಲ್ಲಿರುವ ಬ್ರೆಜಿಲ್ ಮಹಿಳೆಯ ಮೇಲೆ ಜಾರ್ಖಂಡ್ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಈ ಘಟನೆ ಭಾರತೀಯರನ್ನು ಆಘಾತಕ್ಕೆ ದೂಡಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಸಂತ್ರಸ್ತೆಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದ್ದಾರೆ.
ಭಾರತದಲ್ಲಿ ಈ ಕರಾಳ ಘಟನೆ ನಡೆದಿರುವುದರಿಂದ ಸಂತ್ರಸ್ತೆಯ ಸೋಶಿಯಲ್ ಮೀಡಿಯಾ ಫಾಲೋವರ್ಸ್ ಭಾರತವನ್ನು ದೂಷಿಸುತ್ತಿದ್ದಾರೆ. ಹೀಗಾಗಿ ಇನ್ಸ್ಟಾಗ್ರಾಂ ಲೈವ್ ಮೂಲಕ ಈ ಬಗ್ಗೆ ಮಾತನಾಡಿರುವ ಸಂತ್ರಸ್ತೆ, ನನಗೆ ಏನು ನಡೆದಿದೆಯೋ ಅದಕ್ಕೆ ಭಾರತವನ್ನು ದೂಷಿಸಬೇಡಿ ಎಂದು ಫಾಲೋವರ್ಸ್ ಬಳಿ ಮನವಿ ಮಾಡಿಕೊಂಡಿದ್ದಾರೆ.
ಈ ಘೋರ ಅಪರಾಧದ ಸುದ್ದಿ ಬೆಳಕಿಗೆ ಬಂದ ಬೆನ್ನಲ್ಲೇ ಕೆಲ ನೆಟ್ಟಿಗರು, ರಾಜಕಾರಣಿಗಳು ಭಾರತವನ್ನು ದೂಷಿಸಲು ಮತ್ತು ಪ್ರಪಂಚದ ಮುಂದೆ ಭಾರತಕ್ಕೆ ಕಳಂಕ ಹೊರಿಸಲು ಮುಂದಾಗಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇನ್ಸ್ಟಾಗ್ರಾಂ ಮತ್ತು ಎಕ್ಸ್ನಲ್ಲಿನ ಅನೇಕ ಖಾತೆಗಳು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಬೆರಳು ತೋರಿಸಿವೆ. ಬಿಜೆಪಿ ಮಾಡಿದ ಅಸಮರ್ಪಕ ಕೆಲಸಗಳೇ ಇಂತಹ ಘಟನೆಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
ತೀವ್ರ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಇನ್ಸ್ಟಾಗ್ರಾಂ ಲೈವ್ ಮೂಲಕ ಸಂತ್ರಸ್ತೆ ಭಾರತದ ಪರ ಮಾತನಾಡಿದ್ದಾರೆ. ಇದು ಯಾರಿಗಾದರೂ ನಡೆಯಬಹುದು. ಬಹುಶಃ ನಿಮ್ಮ ಸಹೋದರಿ, ತಾಯಿ ಅಥವಾ ಯಾರಾದರೂ ಇರಬಹುದು. ವಿಶ್ವದ ಯಾವುದೇ ಭಾಗದಲ್ಲಿ ಇದು ನಡೆಯಬಹುದು. ಇದು ಈಗಾಗಲೇ ಸ್ಪೇನ್, ಅಮೆರಿಕ ಮತ್ತು ಬ್ರೆಜಿಲ್ನಲ್ಲಿ ನಡೆದಿದೆ. ನಾವು 66 ದೇಶಗಳಲ್ಲಿ ಕ್ಯಾಂಪ್ ಮಾಡಿದ್ದೇವೆ. ಪಾಕಿಸ್ತಾನ, ಇರಾನ್ ಮತ್ತು ಅಫ್ಘಾನಿಸ್ತಾನದ ಮೂಲಕವೂ ಹಾದು ಹೋಗಿದ್ದೇವೆ. ಅಲ್ಲಿ ದ್ವೇಷಪೂರಿತ ಅಥವಾ ಅಪಾಯಕಾರಿ ಎನ್ನುವಂಥದ್ದು ಏನೂ ಸಂಭವಿಸಲಿಲ್ಲ. ಆದರೆ, ಸ್ಪೇನ್, ಬಾರ್ಸಿಲೋನಾದಲ್ಲಿ ಸುಲಿಗೆ ಮಾಡಲಾಯಿತು. ಹಾಗಾಗಿ ನಾವು ಭಾರತದಲ್ಲಿ ಇದ್ದುದರಿಂದ ಹೀಗಾಯಿತು ಎಂಬ ಈ ಅಸಂಬದ್ಧ ಮಾತುಗಳನ್ನು ದಯವಿಟ್ಟು ನಿಲ್ಲಿಸಿ ಎಂದು ಸಂತ್ರಸ್ತೆ ಹೇಳಿದ್ದಾರೆ.
ಬ್ರೆಜಿಲ್ ಮೂಲದ 28 ವರ್ಷದ ಸಂತ್ರಸ್ತೆ, ಓರ್ವ ಬೈಕ್ ಉತ್ಸಾಹಿ. ಜಾರ್ಖಂಡ್ನ ದುಮ್ಕ ಜಿಲ್ಲೆಯಲ್ಲಿ ಟೆಂಟ್ನಲ್ಲಿ ಗಂಡನ ಜತೆ ಕ್ಯಾಂಪಿಂಗ್ ಮಾಡಿದ್ದ ಸಮಯದಲ್ಲಿ ಕೆಲ ಕಿಡಿಗೇಡಿಗಳು ಆಕೆಯ ಮೇಲೆ ಗ್ಯಾಂಗ್ರೇಪ್ ಮಾಡಿದ್ದಾರೆ. ಈ ದುರ್ಘಟನೆಯ ಬಳಿಕ ದಂಪತಿ ಇನ್ಸ್ಟಾಗ್ರಾಂ ಮೂಲಕ ಕರಾಳ ಘಟನೆಯನ್ನು ವಿವರಿಸಿದರು. ಮುಖ ಮತ್ತು ತುಟಿಯಲ್ಲಿ ಗಾಯಗಳಾಗಿರುವುದನ್ನು ಸಂತ್ರಸ್ತೆ ತೋರಿಸಿದಳು. ವಿಡಿಯೋ ವೈರಲ್ ಆದ ಬಳಿಕ ಈ ಘಟನೆ ರಾಷ್ಟ್ರದ ಗಮನ ಸೆಳೆದು, ಸಾಕಷ್ಟು ಮಂದಿ ಈ ಘಟನೆಯನ್ನು ಖಂಡಿಸಿದ್ದಾರೆ.
ನಟ ದುಲ್ಕರ್ ಸಲ್ಮಾನ್ ಮತ್ತು ನಟಿ ರಿಚಾ ಛಡ್ಡಾ ಸೇರಿದಂತೆ ಅನೇಕ ಕಲಾವಿದರು ಕೂಡ ಈ ಘಟನೆಯನ್ನು ಖಂಡಿಸಿದ್ದು, ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ. ಕೆಲ ಭಾರತೀಯರು ಒಲಿಂಪಿಕ್ ಪದಕ ಜಯಿಸುವುದನ್ನು ಎಲ್ಲ ಭಾರತೀಯರು ಹೆಮ್ಮೆ ಪಡುವುದಾದರೆ, ಕೆಲವರು ಅತ್ಯಾಚಾರ ಮಾಡಿದಾಗ ಎಲ್ಲ ಭಾರತೀಯರು ಕೂಡ ನಾಚಿಕೆಪಡಬೇಕು ಎಂದು ಗಾಯಕಿ ಹಾಗೂ ಡಬ್ಬಿಂಗ್ ಕಲಾವಿದೆ ಚಿನ್ಮಯಿ ಘಟನೆಯನ್ನು ಖಂಡಿಸಿದ್ದಾರೆ.
ಕ್ರಿಮಿನಲ್ಗಳನ್ನು ಮಾತ್ರ ದೂಷಿಸುತ್ತೇನೆ
ದೇಶದಾದ್ಯಂತ ಸುಮಾರು 20,000 ಕಿಮೀ ಸುರಕ್ಷಿತವಾಗಿ ಪ್ರಯಾಣ ಮಾಡಿರುವುದರಿಂದ ಭಾರತೀಯರ ವಿರುದ್ಧ ನನಗೆ ಯಾವುದೇ ದೂರುಗಳಿಲ್ಲ ಎಂದು ಸ್ಪೇನ್ ಮಹಿಳೆ ಕಳೆದ ಮಂಗಳವಾರ ಹೇಳಿದ್ದಾರೆ. ತಮ್ಮ ಪತಿಯೊಂದಿಗೆ ತಮ್ಮ ಮೋಟರ್ ಸೈಕಲ್ನಲ್ಲಿ ಬಿಹಾರ ಮೂಲಕ ನೇಪಾಳಕ್ಕೆ ತೆರಳುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿಶ್ವ ಪ್ರವಾಸವನ್ನು ಮುಂದುವರಿಸುವುದಾಗಿ ಹೇಳಿದರು. ಭಾರತದ ಜನರು ಒಳ್ಳೆಯವರು. ನಾನು ಜನರನ್ನು ದೂಷಿಸುವುದಿಲ್ಲ, ಆದರೆ ನಾನು ಕ್ರಿಮಿನಲ್ಗಳನ್ನು ಮಾತ್ರ ದೂಷಿಸುತ್ತೇನೆ. ಭಾರತದ ಜನರು ನನ್ನನ್ನು ಚೆನ್ನಾಗಿ ನಡೆಸಿಕೊಂಡಿದ್ದಾರೆ ಮತ್ತು ನನ್ನೊಂದಿಗೆ ತುಂಬಾ ಕರುಣಾಮಯಿಯಂತೆ ವರ್ತಿಸಿದ್ದಾರೆ. ತುಂಬಾ ಪ್ರಶಾಂತವಾಗಿದ್ದರಿಂದ ತಂಗಲು ಆ ಸ್ಥಳವನ್ನು ಆಯ್ಕೆ ಮಾಡಿಕೊಂಡೆವು. ಇದೇ ಮೊದಲ ಬಾರಿಗೆ ಇದು ನಡೆದಿದೆ. ಆದರೆ, ಇದಕ್ಕಾಗಿ ಎಲ್ಲ ಭಾರತೀಯರನ್ನು ನಾನು ದೂಷಿಸುವುದಿಲ್ಲ. ಅಪರಾಧಿಗಳನ್ನು ಮಾತ್ರ ದೂಷಿಸುತ್ತೇನೆ. ನನಗೆ ಭಾರತದಲ್ಲಿ ಒಳ್ಳೆಯ ಮೆಮೊರಿಗಳಿವೆ ಎಂದು ಸಂತ್ರಸ್ತೆ ಹೇಳಿದ್ದಾರೆ.
ಇನ್ನೂ ಈ ಪ್ರಕರಣ ಸಂಬಂಧ ಒಟ್ಟು 8 ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)
ಸೆಲ್ಫಿ ವೇಳೆ ಅಭಿಮಾನಿಯ ಅಸಭ್ಯ ವರ್ತನೆ ಕಂಡು ನಟಿ ಕಾಜಲ್ ಅಗರವಾಲ್ ಶಾಕ್! ವಿಡಿಯೋ ವೈರಲ್
ಭಾರತೀಯರು ಹೆಮ್ಮೆ ಪಡುವುದಾದರೆ… ಸ್ಪೇನ್ ಮಹಿಳೆ ಮೇಲೆ ಗ್ಯಾಂಗ್ರೇಪ್, ಗಾಯಕಿ ಚಿನ್ಮಯಿ ಟ್ವೀಟ್ ವೈರಲ್!