ರಾಣೆಬೆನ್ನೂರ: ಬೆಂಗಳೂರಿನಲ್ಲಿ ಫೆ. 27ರಂದು ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಮಹಾ ಸಮ್ಮೇಳನ ಆಯೋಜಿಸಲಾಗಿದ್ದು, ಇದರಲ್ಲಿ ನಿಗಮ, ಮಂಡಳಿ ಸೇರಿ ಮೂರು ಲಕ್ಷಕ್ಕೂ ಅಧಿಕ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ತಾಲೂಕು ಸಂಘದ ಅಧ್ಯಕ್ಷ ಎಂ.ಡಿ. ದ್ಯಾಮಣ್ಣನವರ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಉಪಸ್ಥಿತರಿರುವರು.
7ನೇ ವೇತನ ಆಯೋಗ, ಹಳೇ ಪಿಂಚಣಿ ಯೋಜನೆ ಜಾರಿ, ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಸೇರಿ ಪ್ರಮುಖ ಹಕ್ಕೋತ್ತಾಯಗಳನ್ನು ಮಂಡಿಸಲಾಗುವುದು. ಈ ಹಿನ್ನೆಲೆಯಲ್ಲಿ ತಾಲೂಕಿನಿಂದ ಸುಮಾರು 300 ರಾಜ್ಯ ಸರ್ಕಾರಿ ನೌಕರರು ಮಹಾ ಸಮ್ಮೇಳನದಲ್ಲಿ ಭಾಗವಹಿಸಲು ತೆರಳುವ ನಿರೀಕ್ಷೆಯಿದೆ. ಅದಕ್ಕಾಗಿ ಐದು ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು ತಾಲೂಕು ಸರ್ಕಾರಿ ನೌಕರರ ಕಾರ್ಯಾಲಯ ಬಳಿಯಿಂದ ಬಸ್ ಬಿಡಲಾಗುವುದು ಎಂದರು.
ಪ್ರಮುಖರಾದ ಎಸ್.ಸಿ. ಷಡಕ್ಷರಿಮಠ, ಅರುಣಕುಮಾರ ಚಂದನ್, ಆರ್.ಡಿ. ಹೊಂಬರಡಿ, ಸುಧೀಂದ್ರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.