More

    ಕೋಳಿಮರಿಯೆಂದು ವಿಷದ ಬಾಟಲಿ ನುಂಗಿದ ನಾಗರಹಾವು

    ಕಾರ್ಕಳ: ವಿಷದ ಬಾಟಲಿಯನ್ನು ನುಂಗಿದ ನಾಗರಹಾವನ್ನು ಉರಗ ತಜ್ಞ ಗುರುರಾಜ್ ಸನಿಲ್ ಹಿಡಿದು ವಿಷದ ಬಾಟಲ್ ಹೊರ ತೆಗೆದು ಹಾವನ್ನು ರಕ್ಷಣೆ ಮಾಡಿದ ಘಟನೆ ಕಾರ್ಕಳ ತಾಲೂಕಿನ ನೀರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

    ನೀರೆ ಗ್ರಾಮದ ಸುಮಿತ್ ಪೂಜಾರಿ ಎಂಬುವರ ಮನೆಯ ಶೌಚಾಲಯದಲ್ಲಿ ವಿಷದ ಬಾಟಲಿಯನ್ನು ಹಾವು ನುಂಗಿದ್ದು, ಇದನ್ನು ಕಂಡ ಜಗದೀಶ್ ಎಂಬುವರು ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ಗೆ ಕರೆ ಮಾಡಿ ಮಾಹಿತಿ ನೀಡಿದರು. ಅದರಂತೆ ಗುರುರಾಜ್ ಸನಿಲ್ ಅವರು ಗೆಳೆಯರೊಂದಿಗೆ ಸ್ಥಳಕ್ಕೆ ಆಗಮಿಸಿ ಹಾವನ್ನು ಹಿಡಿದು ವಿಷದ ಬಾಟಲ್ ಹೊರ ತೆಗೆದು ರಕ್ಷಣೆ ಮಾಡಿದ್ದಾರೆ. ಹಾವಿನ ರಕ್ಷಣೆಗೆ ಸ್ಥಳೀಯರು, ಉರಗ ತಜ್ಞರು ಹರಸಾಹಸ ಪಟ್ಟಿದ್ದಾರೆ.

    ಹೊಟ್ಟೆ ಸೇರಿದ್ದ ವಿಷದ ಬಾಟಲ್

    ಸ್ಥಳೀಯ ಜಗದೀಶ್ ಹಾಗೂ ಅವರ ಗೆಳೆಯ ಸುಜಿತ್ ಎಂಬುವರು ಹಾವು ಅವಿತಿದ್ದ ಶೌಚಾಲಯದ ನೆಲವನ್ನು ಪೂರ್ಣ ಒಡೆದು ಕೊನೆಗೆ ಅದರ ಅಡಿಪಾಯದ ಕಲ್ಲುಗಳನ್ನು ಕಿತ್ತು ತೆಗೆದು ಸಹಕರಿಸಿದಾಗ ಗುರುರಾಜ್ ಸನಿಲ್ ಅವರು ಹಾವನ್ನು ಹೊರಗೆ ತರುವಲ್ಲಿ ಯಶಸ್ವಿಯಾದರು. ನಂತರ ಹಾವನ್ನು ಹಿಡಿದು ಪೂರ್ತಿ ಹೊಟ್ಟೆ ಸೇರಿದ್ದ ವಿಷದ ಬಾಟಲಿಯನ್ನು ಬಹಳ ಜಾಗರೂಕತೆಯಿಂದ ತಳ್ಳುತ್ತಾ ಹೊರ ತೆಗೆದಿದ್ದಾರೆ. ಬಾಟಲಿಯನ್ನು ಹೊರ ತೆಗೆದು ಸುರಕ್ಷಿತವಾಗಿ ಹಾವನ್ನು ನೀರೆ ಬೈಲೂರು ಸಮೀಪ ಕಾಡಿಗೆ ಬಿಡಲಾಗಿದೆ.

    ಹಟ್ಟಿ ಹೊಕ್ಕು ಕೋಳಿಗೆ ಕಚ್ಚಿದ ಹಾವು

    ಮನೆಯ ಹಟ್ಟಿ ಹೊಕ್ಕ ಹಾವು ಕೋಳಿಯೊಂದನ್ನು ಕಚ್ಚಿ ಸಾಯಿಸಿತ್ತು. ಅಲ್ಲೇ ಸಮೀಪದಲ್ಲಿದ್ದ ಕೋಳಿಯ ಮರಿಯನ್ನು ನುಂಗಲು ಹಾವು ಪ್ರಯತ್ನಿಸಿತು. ಆದರೆ ಅದರ ದುರಾದೃಷ್ಟಕ್ಕೆ ಕೋಳಿಯ ಕೊರಳ ಪಕ್ಕದಲ್ಲಿ ಬಿದ್ದಿದ್ದ ವಿಷದ ಬಾಟಲಿಯು ಬಾಯಿಗೆ ಸಿಕ್ಕಿತು. ಹಾವು ಅದನ್ನೇ ಕೋಳಿ ಎಂದು ಭ್ರಮಿಸಿ ನುಂಗಿಬಿಟ್ಟಿದೆ.

    ಹಾವುಗಳಿಗೆ ಯಾವುದೇ ಜೀವಿ ಅಥವಾ ವಸ್ತುಗಳನ್ನು ಮನುಷ್ಯರ ಹಾಗೆ ನಿಖರವಾಗಿ ಗುರುತಿಸುವ ದೃಷ್ಟಿ ವ್ಯವಸ್ಥೆ ಇಲ್ಲ ಹಾಗೂ ಇತರ ಪ್ರಾಣಿಗಳಂತೆ ಮೂಗಿನ ಮೂಲಕ ವಾಸನೆಯನ್ನು ಗ್ರಹಿಸಿ ಪತ್ತೆ ಹಚ್ಚುವ ಶಕ್ತಿಯೂ ಇಲ್ಲ. ಅವುಗಳ ಕಣ್ಣಗಳು ಜೀವಿಗಳ ಅಥವಾ ವಸ್ತುಗಳ ಓಡಾಟದ ಚಲನೆಯನ್ನು ಮಾತ್ರವೇ ಗ್ರಹಿಸಬಲ್ಲವು. ಉಳಿದಂತೆ ಅವುಗಳಿಗೆ ಸುತ್ತಲಿನ ಎಲ್ಲಾ ಆಗುಹೋಗುಗಳನ್ನು ತಿಳಿದುಕೊಳ್ಳಲು ಕೇವಲ ಸೀಳು ನಾಲಗೆಯೇ ಮುಖ್ಯ ಅಂಗವಾಗಿದೆ.
    -ಗುರುರಾಜ್ ಸನಿಲ್, ಉರಗತಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts