ಬೆಂಗಳೂರು: ಮೈಸೂರಿನ ಗ್ಯಾಂಗ್ರೇಪ್ ಪ್ರಕರಣದಲ್ಲಿ ಮಾತನಾಡುತ್ತಾ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ‘ಅಷ್ಹೊತ್ತಿಗೆ ನಿರ್ಜನ ಪ್ರದೇಶಕ್ಕೆ ಯುವತಿ ಹೋಗಬಾರದಿತ್ತು’ ಎಂದಿದ್ದ ಬಗ್ಗೆ ಇಂದು ಸದನದಲ್ಲಿ ಚರ್ಚೆ ನಡೆಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯನವರು ಈ ರೀತಿ ಹೇಳಿಕೆ ನೀಡಿದ್ದು ಸರೀನಾ ಎಂದು ಜ್ಞಾನೇಂದ್ರ ಅವರಿಗೆ ಕ್ಲಾಸ್ ತೆಗೆದುಕೊಂಡರು.
ಮೈಸೂರು ಅತ್ಯಾಚಾರದ ಪ್ರಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ, ಪೊಲೀಸ್ ಏನ್ ಮಾಡ್ತಾರೆ? ಲಿಕ್ಕರ್ ಶಾಪ್ಗೆ ವಸೂಲಿ ಮಾಡೋಕೆ ಹೋಗ್ತಾರೆ ಅಷ್ಟೆ ಎಂದು ಸಿದ್ದರಾಮಯ್ಯ ಪೊಲೀಸರ ಮೇಲೆ ಆಕ್ರೋಶ ತೋರಿಸಿದರು. ಆರಗ ಜ್ಞಾನೇಂದ್ರ ಅವರನ್ನುದ್ದೇಶಿಸಿ, “ಹುಡುಗಿ ಅಲ್ಲಿ ಯಾಕೆ ಹೋಗಬೇಕಿತ್ತು ಎನ್ನೋದು ಸರೀನಾ? ಗಾಂಧೀಜಿ ಏನು ಹೇಳಿದ್ರು?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇದಕ್ಕೆ, “ಸರ್ ನಿಮ್ಮ ಆಶಯ ಸರಿ, ಮಧ್ಯರಾತ್ರಿ ಹುಡುಗಿ ಓಡಾಡಬೇಕು ಸರಿ. ಆದ್ರೆ ಆ ಪರಿಸ್ಥಿತಿ, ವಾತಾವರಣ ಇದೆಯಾ? ಪ್ರಾಮಾಣಿಕವಾಗಿ ಹೇಳಿ ಸರ್” ಎಂದ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದರು. ಪಟ್ಟು ಬಿಡದ ಸಿದ್ದರಾಮಯ್ಯ, “ಹಾಗಾದ್ರೆ ಆ ಸ್ಟೇಟ್ಮೆಂಟ್ ಯಾಕೆ ವಾಪಸ್ ತಗೊಂಡ್ರಿ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ರಾಜಧಾನಿಯಲ್ಲಿ ರೇಪ್ ಆರೋಪ: ಪ್ರಯಾಣಿಕಳ ಮೇಲೆರಗಿದನೇ ಕ್ಯಾಬ್ ಚಾಲಕ?!
ಸರ್, ನಿಮ್ಮಲ್ಲೂ ನಮ್ಮಲ್ಲೂ ಹೆಣ್ಮಕ್ಕಳು ಇದ್ದಾರೆ, ಪಕ್ಕದ ಮನೆಗೆ ಹೋಗಿ ಬರುವಾಗ ಹುಷಾರ್ ಅಂತೀವಿ, ಅದನ್ನು ನಾವು ಹಾಗೆ ಹೇಳ್ತೇವೆ, ನಿಜ. ಆದ್ರೆ ನಿಮ್ಮ ಹಾಗೆ ಬೇಜವಾಬ್ದಾರರಾಗಿ ಹೇಳಿಕೆ ನೀಡಲ್ಲ. ವೈಸ್ ಛಾನ್ಸಲರ್ ಯಾಕೆ ಆದೇಶ ಹೊರಡಿಸಿದ್ರು ಎಂದು ಸಿದ್ದರಾಮಯ್ಯ ಅಬ್ಬರಿಸಿದರು.
ಸುಧಾಕರ್ ಮೇಲೆ ಸಿಟ್ಟು: ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಮಾತನಾಡಲು ಎದ್ದು ನಿಂತರು. ಅದಕ್ಕೆ ಗರಂ ಆದ ಸಿದ್ದರಾಮಯ್ಯ, ತಮ್ಮ ಮಾತಿನ ವೇಳೆ ಪದೇ ಪದೇ ಮಧ್ಯಪ್ರವೇಶ ಮಾಡುತ್ತಿರುವ ಬಗ್ಗೆ ಅವರನ್ನು ತರಾಟೆಗೆ ತೆಗೆದುಕೊಂಡರು. “ಏ…ನಾನು ಈಲ್ಡ್ ಆಗಲ್ಲ ರೀ ಸುಧಾಕರ್. ಇಲ್ಲಿ ಗೃಹ ಮಂತ್ರಿ ಅವರೇ, ನೀನು ಯಾಕೆ ಪದೇ ಪದೇ ಎದ್ದು ನಿಲ್ತೀಯಾ? ಇಲ್ಲಿ ಗೃಹ ಸಚಿವರು ಉತ್ತರ ನೀಡೋಕೆ ದಕ್ಷ ಇದ್ದಾರೆ. ಅವರು ನಿನಗಿಂತ ಸೀನಿಯರ್” ಎಂದು ಗದರಿದರು. ಇದಕ್ಕೆ ಸುಧಾಕರ್ ಸುಮ್ಮನೇ ಕುಳಿತುಬಿಟ್ಟರು. ಮಧ್ಯಾಹ್ನದ ಊಟಕ್ಕಾಗಿ ಸದನ ಮುಂದೂಡಲ್ಪಟ್ಟಿತು.
“ಕೂಸಿಗೆ ಡೈಪರ್ ಬದಲಿಸುವುದಕ್ಕೂ ಹೆಚ್ಚು ಬಾರಿ ಆಟಗಾರರನ್ನ ಬದಲಾಯಿಸ್ತಾರೆ”