| ಹರ್ಷವರ್ಧನ್ ಬ್ಯಾಡನೂರು
ಚಿತ್ರ : ಘೋಸ್ಟ್
ನಿರ್ದೇಶನ : ಶ್ರೀನಿ
ನಿರ್ಮಾಣ : ಸಂದೇಶ್ ನಾಗರಾಜ್
ತಾರಾಗಣ : ಶಿವರಾಜಕುಮಾರ್, ಜಯರಾಮ್, ಅನುಪಮ್ ಖೇರ್, ಅರ್ಚನಾ ಜೋಯಿಸ್, ಪ್ರಶಾಂತ್ ನಾರಾಯಣ್, ದತ್ತಣ್ಣ ಮತ್ತು ಮುಂತಾದವರು.
ಗ್ಯಾಂಗ್ಸ್ಟರ್ ಪಾತ್ರಗಳು ಶಿವಣ್ಣನಿಗೆ ಹೊಸತೇನಲ್ಲ. ‘ಓಂ’, ‘ಜೋಗಿ’, ‘ಮಫ್ತಿ’ ಸೇರಿ ಹಲವು ಚಿತ್ರಗಳಲ್ಲಿ ಲಾಂಗ್ ಝಳಪಿಸಿದ್ದಾರೆ. ಆದರೆ, ಈಗ ಟ್ರೆಂಡ್ ಬದಲಾಗಿದೆ. ಮಚ್ಚುಗಳ ಜಾಗಕ್ಕೆ ಗನ್ಗಳು ಬಂದಿವೆ. ಹೀಗಾಗಿಯೇ ರಾ, ರಗಡ್ ಶಿವಣ್ಣ ‘ಘೋಸ್ಟ್’ ಚಿತ್ರದಲ್ಲಿ ಸ್ಟೈಲಿಶ್ ಒರಿಜಿನಲ್ ಗ್ಯಾಂಗ್ಸ್ಟರ್ ಆಗಿದ್ದಾರೆ.
ಇದನ್ನೂ ಓದಿ : ಮಲೆನಾಡಿನಲ್ಲಿ ನಡೆಯುವ ನಿಗೂಢ ಘಟನೆಗಳ ಸುತ್ತ…; ‘ಶಾಖಾಹಾರಿ’ ರಂಗಾಯಣ ರಘು
‘ತಪ್ಪು ಮಾಡಿ ಜೈಲಿಗೆ ಬಂದಿರೋರನ್ನ ನೋಡಿದೀನಿ. ಆದರೆ, ಅವನು ಜೈಲಿಗೆ ಬಂದು ತಪ್ಪು ಮಾಡುತ್ತಿದ್ದಾನೆ. ಯಾರವನು?’ ಎನ್ನುತ್ತಾನೆ ಪೊಲೀಸ್ ಅಧಿಕಾರಿ ಚೆಂಗಪ್ಪ (ಜಯರಾಮ್). ಅದಕ್ಕೆ ಕಾರಣ, ಗುಂಪೊಂದು ಜೈಲನ್ನೇ ವಶಕ್ಕೆ ತೆಗೆದುಕೊಂಡು, ಜೈಲು ಖಾಸಗೀಕರಣಕ್ಕೆ ಆಗಮಿಸಿದ್ದ ಮಾಜಿ ಸಿಬಿಐ ಅಧಿಕಾರಿ ವಾಮನ್ (ಪ್ರಶಾಂತ್) ಜತೆ ನೂರಾರು ಕೈದಿಗಳನ್ನೂ ಅಪಹರಿಸಿರುತ್ತದೆ. ಆ ನಟೋರಿಯಸ್ ಗ್ಯಾಂಗ್ನ ನಾಯಕ ಯಾರು? ಜೈಲನ್ನು ಯಾಕೆ ಹೈಜಾಕ್ ಮಾಡಿರುತ್ತಾರೆ? ಜೈಲಿನಲ್ಲಿ ಅಂಥದ್ದೇನಿದೆ? ವಾಮನ್ ಮೇಲೆ ಕೋಪವೇಕೆ? ಹೀಗೆ ಸಿನಿಮಾ ಸಾಗಿದಂತೆ ಒಂದೊಂದೇ ಪ್ರಶ್ನೆಗೆ ಉತ್ತರ ಸಿಗುತ್ತಾ ಹೋಗುತ್ತದೆ.
ಇದನ್ನೂ ಓದಿ : ಉರಿಸಬೇಡ ಬಡವನ ಹೃದಯ..! ‘ಗರಡಿ’ ಚಿತ್ರದ ಮೂರನೇ ಹಾಡು ಬಿಡುಗಡೆ
ದರೋಡೆ ಸುತ್ತ ಸುತ್ತುವ ಈ ಸಸ್ಪೆನ್ಸ್ ಆ್ಯಕ್ಷನ್ ಥ್ರಿಲ್ಲರ್ನಲ್ಲಿ ಒನ್ ಲೈನರ್ ಸಂಭಾಷಣೆಗಳು ಮತ್ತು ಹಿನ್ನೆಲೆ ಸಂಗೀತ ಪ್ರಮುಖ ಆಕರ್ಷಣೆ. ‘ಆನೆಬಲ ಬೇಡ, ಆನೆಯನ್ನೇ ಹೊಡೆಯೋ ಬಲ ಬೇಕು’, ‘ಜಿಂಕೆ ಹೊಡೆದ್ರೂ ಬೇಟೆಗಾರನೇ, ಹುಲಿ ಹೊಡೆದ್ರೂ ಬೇಟೆಗಾರನೇ. ಆದರೆ, ಯಾರನ್ನ ಹೊಡೀತ್ಯಾ ಅನ್ನೋದು ಮುಖ್ಯ’, ‘ರೌಡಿಗಳು, ಡಾನ್ಗಳು ಬಂದ್ರೆ ಭಯ ಇರುತ್ತೆ. ಆದರೆ, ಅವನು ಬಂದ್ರೆ ಭಯಂಕರವಾಗಿರುತ್ತೆ’, ‘ಎಲ್ಲೀತನಕ ಸಿಂಹ ತನ್ನ ಕತೆ ಬರೆಯೋದಿಲ್ವೋ, ಅಲ್ಲೀತನಕ ಬೇಟೆಗಾರನೇ ಕತೆಯ ಹೀರೋ ಆಗಿರ್ತನೆ’… ಹೀಗೆ ಸಿನಿಮಾದಾದ್ಯಂತ ಪ್ರಸನ್ನ ಮತ್ತು ಮಾಸ್ತಿಯ ಮಾಸ್ ಸಂಭಾಷಣೆಗಳು ಹೇರಳವಾಗಿವೆ. ಅದಕ್ಕೆ ತಕ್ಕಂತೆ ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ, ಚಿತ್ರವನ್ನು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿಸುತ್ತದೆ. ಕನ್ನಡದ ಮೊದಲ ಸಿನಿಮ್ಯಾಟಿಕ್ ಯೂನಿವರ್ಸ್ ಸೃಷ್ಟಿಸುತ್ತಿರುವ ನಿರ್ದೇಶಕ ಶ್ರೀನಿ ‘ಬೀರ್ಬಲ್’ ಚಿತ್ರದ ಪಾತ್ರವನ್ನು ಬುದ್ದಿವಂತಿಕೆಯಿಂದ ‘ಘೋಸ್ಟ್’ಗೆ ತಳಕು ಹಾಕಿದ್ದಾರೆ. ಫ್ಲ್ಯಾಶ್ಬ್ಯಾಕ್ನಲ್ಲಿ ಕಿಕ್ ನೀಡುತ್ತಾ, ಹೊಸ ಹೊಸ ಟ್ವಿಸ್ಟ್ಗಳ ಮೂಲಕ 133 ನಿಮಿಷಗಳ ಕಾಲ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಕ್ಸಸ್ ಆಗಿದ್ದಾರೆ.
ಇದನ್ನೂ ಓದಿ : ಹಾಟ್ ಲುಕ್ನಲ್ಲಿ ಕಂಗೊಳಿಸಿದ ಬಿಟೌನ್ ಸುಂದರಿ; ಪಡ್ಡೆ ಹುಡುಗರ ನಿದ್ದೆ ಕದ್ದ ಇಶಾ ಗುಪ್ತಾ..!
30ರ ವರ್ಷದ ವಯಸ್ಸಿನಲ್ಲಿ ಲಾಂಗ್ ಹಿಡಿದು ಅಬ್ಬರಿಸಿದ್ದ ಶಿವಣ್ಣ, ಇದೀಗ 60 ಹಾಟಿದ ಬಳಿಕ ಗನ್ ಹಿಡಿದು ಬೊಬ್ಬಿರಿದಿದ್ದಾರೆ. ಫೈಟ್ಗಳಲ್ಲಿ ಮಿಂಚುತ್ತಾ, ಡೈಲಾಗ್ಗಳ ಮೂಲಕ ಗುಡುಗುತ್ತಾ ಮಾಸ್ ಪ್ರಿಯರಿಗೆ ಮನರಂಜನೆಯ ಮಳೆ ಸುರಿಸಿದ್ದಾರೆ. ಮೊದಲ ಕನ್ನಡ ಚಿತ್ರದಲ್ಲಿಯೇ ಶಿವಣ್ಣನಿಗೆ ಸಮನಾಗಿ ನಿಂತಿದ್ದಾರೆ ಮಲಯಾಳಂ ನಟ ಜಯರಾಮ್. ಚಿತ್ರದಲ್ಲಿ ಗ್ಯಾಂಗ್ಸ್ಟರ್ಗೆ ಸವಾಲು ಹಾಕುವ ಪೊಲೀಸ್ ಅಧಿಕಾರಿಯಾಗಿ, ನಟನೆಯಲ್ಲೂ ಶಿವಣ್ಣನಿಗೆ ಟಕ್ಕರ್ ಕೊಡುತ್ತಾ ಸಾಗಿದ್ದಾರೆ. ಉಳಿದಂತೆ ಪ್ರಶಾಂತ್ ನಾರಾಯಣ್, ದತ್ತಣ್ಣ, ಅರ್ಚನಾ ಜೋಯಿಸ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. 37 ವರ್ಷಗಳ ಹಿಂದಿನ ‘ಆನಂದ್’ ಲುಕ್ನಲ್ಲಿ ಶಿವಣ್ಣನನ್ನು ತೋರಿಸುವ ಪ್ರಯತ್ನ ಸಪ್ಪೆಯಾಗಿದೆ. ಅದನ್ನು ಹೊರತುಪಡಿಸಿದರೆ, ‘ಘೋಸ್ಟ್’ ಎರಡೂಕಾಲು ತಾಸುಗಳ ಪ್ಯೂರ್ ಎಂಟರ್ಟೇನರ್!