ಭೋಪಾಲ್: ವಾಯ್ಸ್ ಮಾರ್ಫಿಂಗ್ ಅಪ್ಲಿಕೇಷನ್ ಬಳಸಿ ವ್ಯಕ್ತಿಯೋರ್ವ ಏಳಕ್ಕೂ ಹೆಚ್ಚು ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಸಂಬಂಧ ಪೊಲೀಸರು ಪ್ರಮುಖ ಆರೋಪಿ ಬ್ರಜೇಶ್ ಪ್ರಜಾಪತಿ, ಕೃತ್ಯಕ್ಕೆ ಸಹಕರಿಸಿದ ಈತನ ಸಹಚರರಾದ ರಾಹುಲ್ ಪ್ರಜಾಪತಿ, ಲವ್ಕುಶ್ ಪ್ರಜಾಪತಿ, ಸಂದೀಪ್ ಪ್ರಜಾಪತಿ ಎಂದು ಗುರುತಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಮಹಾನಿರೀಕ್ಷಕ ಮಹೇಂದ್ರ ಸಿಂಗ್ ಸಿಕರ್ವಾರ್, ಆರೋಪಿಯು ಅನಕ್ಷರಸ್ಥನಾಗಿದ್ದು, ಕಾಲ್ ಮಾರ್ಫಿಂಗ್ ಅಪ್ಲಿಕೇಷನ್ ಬಳಸಿ ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯರಿಗೆ ಕರೆ ಮಾಡಿ ಶಿಕ್ಷಕಿಯರಂತೆ ಮಾತನಾಡುತ್ತಿದ್ದ. ವಿದ್ಯಾರ್ಥಿ ವೇತನ ಪಡೆಯಲು ಸಹಾಯ ಮಾಡುವುದಾಗಿ ನಂಬಿಸುತ್ತಿದ್ದ ಆರೋಪಿಯು ತಾವಿರುತ್ತಿದ್ದ ಜಾಗಕ್ಕೆ ಕರೆಸಿಕೊಳ್ಳುತ್ತಿದ್ದರು.
ಇದನ್ನೂ ಓದಿ: 3ನೇ ಮಗು ಹುಟ್ಟಿದ್ದಕ್ಕೆ ಇಬ್ಬರು ಬಿಜೆಪಿ ಕಾರ್ಪೊರೇಟರ್ಗಳು ಅನರ್ಹ
ನಿರ್ಜನ ಪ್ರದೇಶಕ್ಕೆ ಕರೆಸಿಕೊಳ್ಳುತ್ತಿದ್ದ ಬಳಿಕ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಆರೋಪಿಯು ಅವರ ಬಳಿ ಇದ್ದ ಫೋನ್ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿ ಎಲ್ಲೂ ಬಾಯ್ಬಿಡದಂತೆ ಬೆದರಿಕೆ ಹಾಕುತ್ತಿದ್ದ. ಮೇ 20ರಂದು ಸಂತ್ರಸ್ತೆಯೊಬ್ಬರು ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಆರೋಪಿಯನ್ನು ಬಂಧಿಸಲು ಆತ ಬಳಸಿದ ಮಾರ್ಗವನ್ನೇ ಬಳಸಿ ವಶಕ್ಕೆ ಪಡೆಯಲಾಗಿದೆ. ಇದಲ್ಲದೆ ಈತನಿಗೆ ಸಹಾಯ ಮಾಡಿದ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನಷ್ಟು ಜನರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಮಹಾನಿರೀಕ್ಷಕ ಮಹೇಂದ್ರ ಸಿಂಗ್ ಸಿಕರ್ವಾರ್ ತಿಳಿಸಿದ್ದಾರೆ.
ಇತ್ತ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಆರೋಪಿಗಳಿಂದ ಇನ್ನೂ ಹೆಚ್ಚಿನ ದೌರ್ಜನ್ಯಗಳಾಗಿವೆಯೇ ಎಂದು ತನಿಖೆ ನಡೆಸಲು 9 ಪೊಲೀಸ್ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಇದಲ್ಲದೆ ಆರೋಪಿ ಹಾಗೂ ಆತನ ಸಹಚರರ ಮನೆಗಳನ್ನು ಸಿಧಿ ಜಿಲ್ಲಾಡಳಿತ ಬುಲ್ಡೋಜರ್ ಬಳಸಿ ನೆಲಸಮಗೊಳಿಸಿದೆ.