ಶ್ರೀನಗರ: ಭದ್ರತಾ ಪಡೆಗಳು ಉಗ್ರರ ಕುಟುಂಬಗಳನ್ನು ಗುರಿಯಾಗಿಸುವುದಿಲ್ಲ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಶುಕ್ರವಾರ ಹೇಳಿದ್ದಾರೆ.
ಕುಲ್ಗಮ್ ಎನ್ಕೌಂಟರ್ ಬಗ್ಗೆ ಅವರು ಸುದ್ದಿಗಾರರಿಗೆ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಈ ಕುರಿತು ಹೇಳಿದರು. ಈ ಎನ್ಕೌಂಟರ್ನಲ್ಲಿ ಶುಕ್ರವಾರ ಮೂರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಸೋಪೋರ್ನಲ್ಲಿ ಸಕ್ರಿಯವಾಗಿರುವ ವಾಂಟೆಡ್ ಉಗ್ರಗಾಮಿ ಸಾಜಾದ್ ಅಲಿಯಾಸ್ ಹೈದರ್ ಇತ್ತೀಚೆಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಉಗ್ರರ ಕುಟುಂಬಗಳನ್ನು ಗುರಿಯಾಗಿಸಬೇಡಿ ಎಂದು ಪೊಲೀಸರಿಗೆ ತಿಳಿಸಿದ್ದಾನೆ ಎಂದು ಕಾಶ್ಮೀರ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಕೊಚ್ಚಿ ಹಡಗು ನಿರ್ಮಾಣ ಸಂಸ್ಥೆಯಲ್ಲಿ ಅಪ್ರೆಂಟಿಸ್ಷಿಪ್ : ಯಾರಿಗೆ ಅವಕಾಶ?
ಭದ್ರತಾ ಪಡೆಗಳಲ್ಲಿ ಯಾರೂ ಉಗ್ರರ ಕುಟುಂಬಗಳನ್ನು ಅಥವಾ ಅವರ ಸಂಬಂಧಿಕರನ್ನು ಗುರಿಯಾಗಿಸುವುದಿಲ್ಲ. ಆದರೆ ಉಗ್ರರು ಪೊಲೀಸರು ಮತ್ತು ನಾಗರಿಕರ ಮೇಲೆ ದಾಳಿ ಮಾಡುತ್ತಾರೆ ಎಂದು ವಿಜಯ್ ಕುಮಾರ್, ತಿಳಿಸಿದರು.
ಹತ್ಯೆಗೀಡಾದ ಉಗ್ರನ ತಾಯಿಯನ್ನು ಪೊಲೀಸರು ಬಂಧಿಸಿದ ಒಂದೇ ಒಂದು ಪ್ರಕರಣವಿದೆ ಎಂದು ಕುಮಾರ್ ಹೇಳಿದರು. ಉಗ್ರಗಾಮಿತ್ವದಲ್ಲಿ ಆಕೆ ಭಾಗಿಯಾಗಿರುವ ಬಗ್ಗೆ ದೃಢವಾದ ಪುರಾವೆಗಳಿವೆ ಎಂದು ಆಕೆಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ ಎಂದು ಅವರು ಹೇಳಿದರು.
ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ ನಂತರವೇ ವಿಶೇಷ ಸಂಚಾರ ಕೈಗೊಳ್ಳಬೇಕೆಂದು ಅವರು ತಿಳಿಸಿದರು.