ಗಂಗಾವತಿ: ಲಾರಿಯೊಂದರಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ 10ಜನರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.
ಕೊಪ್ಪಳದ ಗಿಣಿಗೇರಾ ದನದ ಮಾರುಕಟ್ಟೆಯಿಂದ ಖರೀದಿಸಿದ 8ಲಕ್ಷ ರೂ. ಮೌಲ್ಯದ 16 ಜಾನುವಾರುಗಳನ್ನು ಒಂದೇ ಲಾರಿಯಲ್ಲಿ ತುಂಬಿದ್ದು, ಉಸಿರಾಡಲಾಗದಂತೆ ಕಟ್ಟಿ ಹಾಕಲಾಗಿತ್ತು. ಈ ಕುರಿತು ಹಿಂದುಪರ ಸಂಘಟನೆ ಕಾರ್ಯಕರ್ತರಾದ ಕುಮಾರ ಹೂಗಾರ್ ಮತ್ತು ರೋಹಿತ್ ಹೂಗಾರ್ ದೂರು ನೀಡಿದ್ದರು. ತಾಲೂಕಿನ ವಿರುಪಾಪುರಗಡ್ಡಿ ಕಿಷ್ಕಿಂಧಾ ಕ್ರಾಸ್ ಬಳಿ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಜಾನುವಾರುಗಳು ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದು, ಈ ಬಗ್ಗೆ ಪಿಐಎಸ್ ಅನ್ಸರ್ ಸ್ವಯಂ ಪ್ರಕರಣ ದಾಖಲಿಸಿದ್ದಾರೆ. ಜಾನುವಾರುಗಳನ್ನು ರಕ್ಷಿಸಿರುವ ಪೊಲೀಸರು, ಸ್ಥಳೀಯ ಗೋಶಾಲೆಗೆ ರವಾನಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನೂಲಿನ ಆಲೂರ್ ಮಂಡಲದ ಚಾಲಕ ರಘುವೀರ ಶೀನಯ್ಯ ಮತ್ತು ಜಾನುವಾರುಗಳನ್ನು ಲಾರಿಯಲ್ಲಿ ತುಂಬಿದ ಖರೀದಿದಾರರಾದ ಆಲೂರು ಮಂಡಲದ ಶೇಖಣ್ಣ, ರಾಮಾಂಜನೇಯ, ಆಂಜನೇಯ, ಹುಚ್ಚೀರಪ್ಪ, ವೈಕುಂಟ, ಚಂದ್ರ, ಟಿ.ಹುಚ್ಚೀರಪ್ಪ ಮತ್ತು ರಾಯಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.