ನವದೆಹಲಿ: ಮಧ್ಯಪ್ರದೇಶದಲ್ಲಿ ಕಮಲನಾಥ್ ಅವರ ಸರ್ಕಾರ ಬಂಡಾಯದ ಬೇಗುದಿಗೆ ಸಿಲುಕಿ ಬಹುಮತ ಕಳೆದುಕೊಂಡ ವೇಳೆ ರಾಜ್ಯಪಾಲ ಲಾಲ್ಜಿ ಟಂಡನ್ ಅವರ ನಿರ್ಣಯವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಹೇಮಂತ್ ಗುಪ್ತಾ ಅವರನ್ನು ಒಳಗೊಂಡ ನ್ಯಾಯಪೀಠವು, ಅಂದಿನ ಕಮಲನಾಥ ಸರ್ಕಾರಕ್ಕೆ ರಾಜ್ಯಪಾಲರು ಅಧಿವೇಶನ ನಡೆಸುವಂತೆ ಸೂಚಿಸಬಹುದಿತ್ತೇ ಹೊರತು, ಫ್ಲೋರ್ ಟೆಸ್ಟ್ ನಡೆಸುವಂತೆ ಸೂಚಿಸಬಾರದಿತ್ತು. ಅದು ಅವರ ಅಧಿಕಾರದ ವ್ಯಾಪ್ತಿಯಲ್ಲಿ ಇಲ್ಲ ಎಂಬ ಅಂಶವುಳ್ಳ ದಾವೆಯ ಅರ್ಜಿಯನ್ನು ಸೋಮವಾರ ತಳ್ಳಿಹಾಕಿದೆ. ಈ ನಿರ್ಣಯವನ್ನು ಸಮರ್ಥಿಸಿಕೊಳ್ಳಲು ಕೋರ್ಟ್, 1994ರ ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ ಒಂಭತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠ ನೀಡಿದ ತೀರ್ಪನ್ನು ಉಲ್ಲೇಖಿಸಿದೆ. ಬಹುಮತ ಸಾಬೀತು ಪಡಿಸಿ ಎಂದು ಹೇಳುವ ಹಕ್ಕು ರಾಜ್ಯಪಾಲರಿಗೆ ಇದ್ದೇ ಇದೆ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿತು.
ಮಾರ್ಚ್ 19ರಂದು ಮಧ್ಯಪ್ರದೇಶದಲ್ಲಿ ರಾಜಕೀಯ ಅಸ್ಥಿರತೆ ಹೆಚ್ಚಾಗಿ ಕಂಡುಬಂದ ಕಾರಣ, ಫ್ಲೋರ್ಟೆಸ್ಟ್ ನಡೆಸುವಂತೆ ಸೂಚಿಸಲಾಗಿತ್ತು. ಅಲ್ಲದೇ, ಅಧಿವೇಶನವನ್ನು ಕೇವಲ ಫ್ಲೋರ್ಟೆಸ್ಟ್ ನಡೆಸುವ ಸಲುವಾಗಿಯೆ ನಡೆಸಬೇಕು ಎಂಬ ನಿರ್ದೇಶನವನ್ನೂ ನೀಡಿದ್ದೆವು ಎಂದು ನ್ಯಾಯಪೀಠ ನೆನಪಿಸಿಕೊಂಡಿದೆ.
ಸುಪ್ರೀಂ ಕೋರ್ಟ್ ಮಾರ್ಚ್ 19ರಂದು ಅಂದಿನ ಅಸೆಂಬ್ಲಿ ಸ್ಪೀಕರ್ ಎನ್.ಪಿ. ಪ್ರಜಾಪತಿ ಅವರಿಗೆ ಮಾರನೇ ದಿನವೇ ಫ್ಲೋರ್ಟೆಸ್ಟ್ ನಡೆಸುವಂತೆ ಸೂಚಿಸಿತ್ತು. ಅಲ್ಲದೆ, ಅದಕ್ಕೆ ಸಂಬಂಧಿಸಿದ ವಿಸ್ತೃತ ತೀರ್ಪನ್ನು ಕೋರ್ಟ್ ಮಾರನೇ ದಿನವೇ ನೀಡಿತ್ತು. ಕೋರ್ಟ್ ಆದೇಶದ ಬೆನ್ನಿಗೇ ಹಿರಿಯ ಕಾಂಗ್ರೆಸ್ ನಾಯಕ ಕಮಲನಾಥ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 15 ತಿಂಳಗಾಗಿದ್ದವು. ಈ ಬೆಳವಣಿಗೆಯ ಬೆನ್ನಲ್ಲೇ ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾದ ಬಳಿಕ ಈ ರಾಜಕೀಯಕ್ಕೆ ಸಂಬಂಧಿಸಿ ಕೋರ್ಟ್ ಇದುವರೆಗೆ 8 ಮಧ್ಯಂತರ ತೀರ್ಪುಗಳನ್ನು ನೀಡಿದೆ. (ಏಜೆನ್ಸೀಸ್)
ಕ್ವಾರಂಟೈನ್ ಕೇಂದ್ರದಲ್ಲಿ ಕೊನೆಯುಸಿರಳೆಯಿತು 10 ತಿಂಗಳ ಹಸುಗೂಸು: ಉತ್ತರ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ