ಬೆಳಗಾವಿ: ಈಗ ತಾನೇ ವಿವಾದದ ಸುಳಿಯಿಂದ ಹೊರ ಬಂದಿರುವ ಸತೀಶ್ ಜಾರಕಿಹೊಳಿ ಈಗ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಜಾರಕಿಹೊಳಿ ಭಾಷಣದ ಬಗ್ಗೆ ಟ್ವೀಟ್ ಮಾಡಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ದೇವೇಂದ್ರ ಫಡ್ನವೀಸ್, ಈಗ ಟ್ವೀಟ್ ಮೂಲಕ ವಿವಾದ ಸೃಷ್ಟಿ ಮಾಡಿದ್ದು ಧರ್ಮವೀರ ಸಂಭಾಜಿ ಮಹಾರಾಜರಿಗೆ ಸತೀಶ್ ಜಾರಕಿಹೊಳಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸತೀಶ್ ಜಾರಕಿಹೊಳಿ ಮಾಡಿದ್ದ ಭಾಷಣದ ತುಣಕನ್ನು ಟ್ವಿಟರ್ನಲ್ಲಿ ಫಡ್ನವಿಸ್ ಅಪ್ಲೋಡ್ ಮಾಡಿದ್ದಾರೆ.
ಅ.6ರಂದು ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಭಾಷಣ ಮಾಡಿದ್ದರು. ಭಾಷಣದಲ್ಲಿ ಸಂಭಾಜಿ ಮಹಾರಾಜರಿಗೆ ‘ಧರ್ಮವೀರ’ ಎಂಬ ಹೆಸರು ಬಂದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು ಎಂದು ಫಡ್ನವಿಸ್ ಆರೋಪಿಸಿದ್ದಾರೆ.
42 ಸೆಕೆಂಡ್ ವಿಡಿಯೋ ಟ್ವೀಟ್ ಮಾಡಿದ ಫಡ್ನವಿಸ್ ‘ಛತ್ರಪತಿ ಶಿವಾಜಿ ಮಹಾರಾಜರಿಗೆ ವಿಷಪ್ರಾಶನ ಮಾಡಿಲಾಗಿತ್ತು’ ಎಂದು ಸತೀಶ್ ಜಾರಕಿಹೊಳಿ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಟ್ವೀಟ್ನಲ್ಲಿ ‘ಧರ್ಮವೀರ ಸಂಭಾಜಿ ಮಹಾರಾಜರ ಬಗ್ಗೆ ಅಸಂಬದ್ಧ, ದಾರಿತಪ್ಪಿಸುವ, ಅವಮಾನಿಸುವ ಸುಳ್ಳು ಹೇಳಿಕೆ ಒಪ್ಪುತ್ತೀರಾ? ಇದು ನಿಮ್ಮ ಕಾಂಗ್ರೆಸ್ ಪಕ್ಷದ ಅಧಿಕೃತ ಹೇಳಿಕೆಯಾ?’ ಎಂದು ರಾಹುಲ್ ಗಾಂಧಿಗೆ ಪ್ರಶ್ನಿಸಿದ್ದಾರೆ.
ತಮ್ಮ ಟ್ವೀಟ್ನಲ್ಲಿ ‘ಮಹಾರಾಷ್ಟ್ರ ಇದನ್ನ ಸಹಿಸೋದಿಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾರೆ. ಫಡ್ನವಿಸ್ ಟ್ವೀಟ್ ಮಾಡಿರುವ 42 ಸೆಕೆಂಡ್ ವಿಡಿಯೋದಲ್ಲಿ ‘ಸಂಭಾಜಿ ಮಹಾರಾಜರನ್ನು ಬ್ರಿಟಿಷರು ಹಿಡಿದು ಹತ್ಯೆ ಮಾಡಿದರು. ಏಕೆ ಹತ್ಯೆ ಮಾಡಿದರು? ಶಿವಾಜಿ ಮಹಾರಾಜರ ಊಟದಲ್ಲಿ ವಿಷ ಹಾಕಲಾಗಿತ್ತು. ಆಗ ಅವರನ್ನು ಸಂಭಾಜಿ ಮಹಾರಾಜರು ಹಿಡಿದಿದ್ದರು. ಈ ಸಿಟ್ಟಿನಲ್ಲಿ ಅವರನ್ನು ಬ್ರಿಟಿಷರ ವಶಕ್ಕೆ ನೀಡಲಾಯಿತು. ಬಳಿಕ ಅವರಿಗೆ ಧರ್ಮವೀರ ಸಂಭಾಜಿ ಮಹಾರಾಜ ಹೆಸರಿಟ್ಟರು. ಅದೊಂದು ಇತಿಹಾಸ. ಈ ದೇಶದ ಇತಿಹಾಸ ಬಹಳ ವಿಚಿತ್ರವಾಗಿದೆ. ಇದನ್ನು ತಿಳಿದುಕೊಳ್ಳಲು ಬಹಳ ಸಮಯ ಬೇಕು’ ಎಂದು ಸತೀಶ್ ಜಾರಕಿಹೊಳಿ ಹೇಳಿರುವ 42 ಸೆಕೆಂಡ್ನ ವಿಡಿಯೋವನ್ನು ಫಡ್ನವಿಸ್ ಟ್ವೀಟ್ ಮಾಡಿದ್ದಾರೆ.