ನವದೆಹಲಿ: ಐಪಿಎಲ್ 13ನೇ ಆವೃತ್ತಿಯ ಮೊದಲ ಪಂದ್ಯದಿಂದಲೂ ಕಳಪೆ ಅಂಪೈರಿಂಗ್ ಸುದ್ದಿ ಮಾಡುತ್ತಲೇ ಇದೆ. ಅಂಪೈರ್ಗಳ ಕೆಟ್ಟ ತೀರ್ಪಿನ ಕಾರಣದಿಂದಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪಂದ್ಯವನ್ನೇ ಸೋತಿತು. ಮಂಗಳವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಅಂಪೈರ್ ಕೆಟ್ಟ ತೀರ್ಪಿಗೆ ಚೆನ್ನೈ ಸೂಪರ್ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಕೂಡ ಕಿಡಿಕಾರಿದ್ದರು. ಅದರ ಬೆನ್ನಲ್ಲೇ ಅವರ ಪತ್ನಿ ಸಾಕ್ಷಿ ಸಿಂಗ್ ಕೂಡ ಐಪಿಎಲ್ ಅಂಪೈರ್ಗಳನ್ನು ಟೀಕಿಸಿ ಟ್ವೀಟ್ ಮಾಡಿದರೂ, ವಿವಾದಕ್ಕೆ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಬಳಿಕ ಆ ಟ್ವೀಟ್ ಅನ್ನೇ ಡಿಲೀಟ್ ಮಾಡಿದರು.
ರಾಜಸ್ಥಾನ ಇನಿಂಗ್ಸ್ನ 18ನೇ ಓವರ್ನಲ್ಲಿ ದೀಪಕ್ ಚಹರ್ ಎಸೆತದಲ್ಲಿ ಟಾಮ್ ಕರ್ರನ್ ಕಾಟ್ ಬಿಹೈಂಡ್ ಆದರೆಂದು ಅಂಪೈರ್ ಸಿ. ಶಂಶುದ್ದೀನ್ ತೀರ್ಪು ನೀಡಿದರು. ಆದರೆ ಕೀಪರ್ ಧೋನಿ ಕ್ಯಾಚ್ ಹಿಡಿಯುವ ವೇಳೆ ಚೆಂಡು ನೆಲದಿಂದ ಪುಟಿದೆದ್ದಿದ್ದು ಟಿವಿ ಮರುಪ್ರಸಾರದಲ್ಲಿ ಕಂಡುಬಂದಿತ್ತು. ಸ್ಕ್ವೇರ್ ಲೆಗ್ ಅಂಪೈರ್ ವಿನೀತ್ ಕುಲಕರ್ಣಿ ಅವರೊಂದಿಗೆ ಚರ್ಚಿಸಿದ ಬಳಿಕವೂ ಶಂಶುದ್ದೀನ್ ಔಟ್ ತೀರ್ಪು ನೀಡಿದ್ದರು. ಆದರೆ ಟಿವಿ ಅಂಪೈರ್ ಮಧ್ಯಪ್ರವೇಶದ ಬಳಿಕ ತೀರ್ಪು ಬದಲಾಗಿ ಟಾಮ್ ಕರ್ರನ್ ಬ್ಯಾಟಿಂಗ್ ಮುಂದುವರಿಸಿದರು. ಈ ವೇಳೆ ಅಂಪೈರ್ ವರ್ತನೆಯ ಬಗ್ಗೆ ಅಸಮಾಧಾನಗೊಂಡ ಧೋನಿ ವಾಗ್ವಾದವನ್ನೂ ನಡೆಸಿದರು.
ಪಂದ್ಯ ಬೆನ್ನಲ್ಲೇ ಧೋನಿ ಪತ್ನಿ ಸಾಕ್ಷಿ ಸಿಂಗ್ ಕೂಡ ಅಂಪೈರಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ‘ನೀವು ತಂತ್ರಜ್ಞಾನವನ್ನು ಬಳಸುವುದಾದರೆ ಅದನ್ನು ಸರಿಯಾದ ರೀತಿಯಲ್ಲೇ ಬಳಸಿ. ಔಟ್ ಆದರೆ ಔಟ್. ಅದು ಕ್ಯಾಚ್ ಆಗಿರಲಿ ಅಥವಾ ಎಲ್ಬಿಡಬ್ಲ್ಯು ಆಗಿರಲಿ’ ಎಂದು ಟ್ವೀಟಿಸಿದ್ದರು. ಬಳಿಕ ಕೆಲವೇ ಹೊತ್ತಿನಲ್ಲಿ ಈ ಟ್ವೀಟ್ ಅನ್ನು ಅವರು ಡಿಲೀಟ್ ಮಾಡಿದರು. ಅದಕ್ಕೆ ಕಾರಣವೇನೆಂದು ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: VIDEO | ಬುರ್ಜ್ ಖಲೀಫಾ ಮೇಲೆ ಮಿಂಚಿದ ಕೋಲ್ಕತ ನೈಟ್ರೈಡರ್ಸ್!
ಕಳೆದ ವರ್ಷದ ಐಪಿಎಲ್ನಲ್ಲೂ ಧೋನಿ ರಾಜಸ್ಥಾನ ವಿರುದ್ಧದ ಪಂದ್ಯದ ಸಮಯದಲ್ಲೇ ಅಂಪೈರ್ ಜತೆ ವಾಗ್ವಾದ ನಡೆಸಿದ್ದರು. ಆ ವೇಳೆಯೂ ಅಂಪೈರ್ ನೋಬಾಲ್ ತೀರ್ಪು ಬದಲಾಯಿಸಿದ್ದಕ್ಕೆ ಧೋನಿ ಡಗ್ಔಟ್ನಿಂದ ಮೈದಾನಕ್ಕೆ ನುಗ್ಗಿ ಅಂಪೈರ್ ಜತೆ ವಾಗ್ವಾದ ನಡೆಸಿದ್ದರು. ಆಗ ಧೋನಿಗೆ ದಂಡ ಶಿಕ್ಷೆಯನ್ನೂ ವಿಧಿಸಲಾಗಿತ್ತು.