ನಾಗ್ಪುರ: ಕರೊನಾದಿಂದಾಗಿ ಉಸಿರಾಟದ ಸಮಸ್ಯೆ ತೀವ್ರವಾಗಿತ್ತು… ಆಸ್ಪತ್ರೆಯಲ್ಲಿ ಹಾಸಿಗೆಗಾಗಿ ಅಲೆದಾಟ ನಡೆಸಿದ ಬಳಿಕ ಕೊನೆಗೂ ಬದುಕಲು ಅವಕಾಶ ಸಿಕ್ಕಿತ್ತು… ಆದರೆ ಅದೇ ವೇಳೆ ಈ ಹಿರಿಯ ಜೀವ ನೋಡಿದ್ದು ಪತಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದ ಹೆಣ್ಣುಮಗಳೊಬ್ಬಳನ್ನು, ಅಪ್ಪನಿಗಾಗಿ ಹಂಬಲಿಸುತ್ತಿದ್ದ ಪುಟ್ಟ ಕಂದಮ್ಮಗಳನ್ನು…. ಅಷ್ಟೇ. ಜೀವನದ ಸಂಧ್ಯಾಕಾಲದಲ್ಲಿ ಇರುವ ತಮಗಿಂತ 40 ವಯಸ್ಸಿನ ಆಸುಪಾಸಿನಲ್ಲಿರುವ ಆ ವ್ಯಕ್ತಿಯ ಜೀವವೇ ಮೇಲೆನಿಸಿ, ಕೊನೆಗೆ ಆತನಿಗಾಗಿ ಹಾಸಿಗೆ ಬಿಟ್ಟುಕೊಟ್ಟರು, ತಾವು ಉಸಿರು ಚೆಲ್ಲಿದರು!
ಇಂಥದ್ದೊಂದು ಘಟನೆಗೆ ಸಾಕ್ಷಿಯಾಗಿದ್ದು ನಾಗ್ಪುರದಲ್ಲಿರುವ ಇಂದಿರಾಗಾಂಧಿ ಆಸ್ಪತ್ರೆ. ಈ ಒಂದು ಮಹತ್ಕಾರ್ಯ ಮಾಡಿ ತಮ್ಮ ಜೀವನವನ್ನು ಬೇರೊಬ್ಬ ವ್ಯಕ್ತಿಗಾಗಿ ಬಲಿ ಕೊಟ್ಟವರು ರಾಷ್ಟ್ರೀಯ ಸ್ವಯಂ ಸೇವಕ ನಾಗಪುರದ ನಾರಾಯಣ ದಾಬಡ್ಕರ್.
ಇವರ ಈ ಕಾರ್ಯವನ್ನು ಕಣ್ಣಾರೆ ಕಂಡಿರುವ ಡಾ. ಶೆಫಾಲಿ ಎಂಬ ವೈದ್ಯರು ಆ ಕ್ಷಣಗಳನ್ನು ಬಣ್ಣಿಸಿದ್ದಾರೆ.
85 ವರ್ಷದ ನಾರಾಯಣ ಅವರಿಗೆ ಕರೊನಾ ಸೋಂಕು ತಗುಲಿತ್ತು. ತೀವ್ರವಾದ ಉಸಿರಾಟದ ಸಮಸ್ಯೆ ಎದುರಾಗಿತ್ತು. ಅನೇಕ ಆಸ್ಪತ್ರೆಗಳಲ್ಲಿ ಬೆಡ್ಗಾಗಿ ಅವರ ಮಗಳು ಮತ್ತು ಅಳಿಯ ಅಲೆದಾಡಿದ್ದಾರೆ. ಕೊನೆಯದಾಗಿ ಅವರಿಗೆ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಹಾಸಿಗೆ ಸಿಕ್ಕಿತ್ತು.
ಕೊನೆಗೂ ತಮಗೆ ಹಾಸಿಗೆ ಸಿಕ್ಕಿತು ಎಂಬ ಖುಷಿಯಲ್ಲಿ ನಾರಾಯಣ ಇದ್ದರು. ಇನ್ನೇನು ಅಡ್ಮಿಷನ್ನ ಪ್ರಕ್ರಿಯೆ ನಡೆಯಬೇಕಿತ್ತು. ಅಷ್ಟೊತ್ತಿಗಾಗಲೇ ಕಣ್ಣೀರು ಸುರಿಸುತ್ತ ಬಂದ ಮಹಿಳೆಯೊಬ್ಬರು 40 ವರ್ಷ ಆಸುಪಾಸಿನ ತಮ್ಮ ಪತಿಗಾಗಿ ಹಾಸಿಗೆ ಹುಡುಕಾಟದಲ್ಲಿ ತೊಡಗಿದ್ದರು. ಎಲ್ಲಿಯೂ ಹಾಸಿಗೆ ಸಿಗದೇ ತಮ್ಮ ಪತಿಯನ್ನು ಉಳಿಸಿಕೊಳ್ಳಲು ಅವರು ಒದ್ದಾಡುತ್ತಿದ್ದರು. ಅವರ ಜತೆ ಮಕ್ಕಳು ಕೂಡ ಜೋರಾಗಿ ಅಳುತ್ತಿದ್ದರು.
85-year-old COVID-positive RSS Swayamsevak gave up his bed and life so another person can live https://t.co/jfIH6Mn8iv
— Friends of RSS (@friendsofrss) April 27, 2021
ಈ ದೃಶ್ಯವನ್ನು ನಾರಾಯಣ ಅವರು ನೋಡಿದ್ದಾರೆ. ಹಿಂದೆ ಮುಂದೆ ಯೋಚನೆ ಮಾಡದ ಅವರು, ತಮ್ಮ ಅಡ್ಮಿಷನ್ ಪ್ರಕ್ರಿಯೆಯನ್ನು ಅಲ್ಲಿಗೇ ನಿಲ್ಲಿಸಿ. ನನಗೀಗ 85 ವರ್ಷ, ನಾನು ನನ್ನ ಜೀವನವನ್ನು ಕಂಡಿದ್ದೇನೆ. ಇನ್ನು ಮರಣಹೊಂದಿದರೂ ಸಮಸ್ಯೆಯಿಲ್ಲ. ಆ ಯುವ ಜೀವಕ್ಕೆ ನನಗೆ ಸಿಕ್ಕಿರುವ ಹಾಸಿಗೆ ನೀಡಿ, ಆಕೆಯ ಪತಿಯನ್ನು ಕಾಪಾಡಿ ಎಂದು ಹೇಳಿ ಅವರಿಗೆ ಹಾಸಿಗೆ ನೀಡುವಂತೆ ಸಿಬ್ಬಂದಿಯ ಮನವೊಲಿಸಿದ್ದಾರೆ.
ಇಷ್ಟು ಹೇಳಿ ತಮ್ಮ ಮನೆಗೆ ವಾಪಸಾದ ಅವರು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಶೆಫಾಲಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಹಿರಿಯ ಜೀವದ ತ್ಯಾಗವನ್ನು ಬರೆದುಕೊಂಡಿದ್ದಾರೆ. ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.
ನಾಳೆಯಿಂದ ನೌಕರರಿಗಾಗಿ ಬಸ್ ಇರುತ್ತಾ? ಕೆಲಸಕ್ಕೆ ಹೋಗಲು ಪಾಸ್ ಬೇಕಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ ನೋಡಿ…
ಇದು ‘ಪಾಸಿಟಿವ್’ ಸಪ್ತಪದಿ: ಕರೊನಾ ಬಂದರೂ ಡೋಂಟ್ ಕೇರ್- ನಡೆಯಿತು ಹೀಗೊಂದು ಮದುವೆ…
ಮಕ್ಕಳ ಮದುವೆಯನ್ನು ಹೀಗೂ ಸ್ಮರಣೀಯ ಮಾಡಬಹುದು ಎಂದು ತೋರಿಸಿಕೊಟ್ಟ ರೈತ- ಕೂಡಿಟ್ಟ ಹಣ ಆಕ್ಸಿಜನ್ಗೆ!