ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಶಿವಮೊಗ್ಗದ ಕೆಲವು ಪ್ರದೇಶ ಸೇರಿದಂತೆ ರಾಜ್ಯದ ಕೆಲವು ಊರುಗಳಲ್ಲಿ ತುಂತುರು ಮಳೆ ಬಿದ್ದಿದ್ದು, ಇದು ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದಾಗಲೇ ರಾಜ್ಯ ವಿಪರೀತ ಚಳಿಯನ್ನು ಕಂಡಿದ್ದು, ಈಗ ಕೂಡ ಹಲವು ಊರುಗಳಲ್ಲಿ ಶೀತಲಗಾಳಿಯಿಂದಾಗಿ ಕೆಮ್ಮು, ನೆಗಡಿ ಸಾಮಾನ್ಯ ಎನಿಸಿಬಿಟ್ಟಿದೆ. ಈ ರೀತಿ ಋತುಮಾನದಲ್ಲಿ ಏರುಪೇರಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಕೆಲವು ದಿನಗಳು ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಮುಂದಿನ ತಿಂಗಳ ಮಧ್ಯ ಭಾಗದವರೆಗೂ ಮಳೆ, ಚಳಿಯ ಕಣ್ಣಾಮುಚ್ಚಾಲೆ ಆಟ ಮುಂದುವರೆಯಲಿರುವ ಕಾರಣ, ಈ ಸಂದರ್ಭದಲ್ಲಿ ಎಚ್ಚರಿಕೆ ಅಗತ್ಯ ಎಂದಿದ್ದಾರೆ.
ಯಾವ ಯಾವ ಕಾಲಕ್ಕೆ ಏನೇನು ಆಗಬೇಕೋ, ಅದು ಸದ್ಯ ಆಗುತ್ತಿಲ್ಲ. ಮಳೆಗಾಲ ಮುಗಿದು ತಿಂಗಳುಗಳೇ ಕಳೆದರೂ ಈ ಬಾರಿ ವರುಣನ ಆರ್ಭಟದಿಂದ ಹಲವರು ರಾಜ್ಯಗಳ ಅಲ್ಲೋಲ ಕಲ್ಲೋಲ ಆಗಿವೆ. ಕರ್ನಾಟಕ ಮತ್ತು ಕೇರಳದಲ್ಲಿ ಬರಬೇಕಾದಷ್ಟು ಪ್ರಮಾಣದಲ್ಲಿ ಕಾಲಕ್ಕೆ ಸರಿಯಾಗಿ ಮಳೆಯಾಗಿಲ್ಲ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಸರಾಸರಿಗಿಂತ ಎರಡು ಪಟ್ಟು ಹೆಚ್ಚು ಮಳೆಯಾಗಿ ಪ್ರವಾಹ ಸೃಷ್ಟಿಸಿದೆ. ಅದೇ ರೀತಿ ಚಳಿ ಕೂಡ ಈ ಬಾರಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ನಡುವೆಯೇ ಪ್ರವಾಹ, ಭೂಕಂಪಗಳು ಕೂಡ ಸರ್ವೇ ಸಾಮಾನ್ಯ ಎನಿಸಿವೆ.
ಅದೇ ಇನ್ನೊಂದೆಡೆ ಕರೊನಾ ಭೀತಿ. ಆದ್ದರಿಂದ ಜನರು ತಮ್ಮ ಆರೋಗ್ಯದ ಬಗ್ಗೆ ಎಲ್ಲ ರೀತಿಯ ಮುಂಜಾಗರೂಕತೆಯನ್ನು ತೆಗೆದುಕೊಳ್ಳಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಮತ್ತು ರಾಯಲಸೀಮಾದಲ್ಲಿ ಕೆಲ ದಿನಗಳವರೆಗೆ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ವಾಯುವ್ಯ ಮತ್ತು ಮಧ್ಯ ಭಾರತದ ಹಲವಾರು ರಾಜ್ಯಗಳಲ್ಲಿ ತೀವ್ರ ಶೀತಗಾಳಿ ಬೀಸಲಿವೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್ನಲ್ಲಿ ಮಳೆ ಅಥವಾ ಹಿಮ ಉಂಟಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕೂಡ ಮಳೆಯಾಗಲಿದೆ. ಪೂರ್ವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ, ಬಿಹಾರ ಮತ್ತು ಒಡಿಶಾದಲ್ಲಿ ಶೀತ ಅಲೆಗಳ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಆನ್ಲೈನ್ ಗೇಮ್ ಕೊಟ್ಟ ಚಾಲೆಂಜ್ ಸ್ವೀಕರಿಸಿ ತಾಯಿ, ಅಣ್ಣ ಮತ್ತು ಇಬ್ಬರು ಅಕ್ಕಂದಿರನ್ನು ಕೊಂದ ಬಾಲಕ!
‘ಪದ್ಮಶ್ರೀ’ ಸ್ವೀಕರಿಸುವ ಮುನ್ನವೇ ಕೊನೆಯುಸಿರೆಳೆದ ಇಕ್ಬಾಲ್ ಸಿಂಗ್: ಸಮಾಜ ಸೇವೆಯಲ್ಲಿ ಇವರ ಸಾಧನೆ ಅಪಾರ