ನಾಸಿಕ್ (ಮಹಾರಾಷ್ಟ್ರ): ಕರೊನಾ ನಿಯಂತ್ರಣ ಮಾಡಲು ಲಸಿಕೆಯನ್ನು ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಆದೆ ಲಸಿಕೆ ಪಡೆದು ಸ್ವಲ್ಪ ಎಚ್ಚರ ತಪ್ಪಿದರೂ ಕರೊನಾ ಮತ್ತೆ ಒಕ್ಕರಿಸಿಕೊಳ್ಳುವುದು ಉಂಟು. ಇದಕ್ಕೆ ಸಾಕ್ಷಿಯಾಗಿದೆ ಮಹಾರಾಷ್ಟ್ರ.
ಮಹಾರಾಷ್ಟ್ರದ 10 ಸಚಿವರು ಮತ್ತು 20ಕ್ಕೂ ಹೆಚ್ಚು ಶಾಸಕರಿಗೆ ಕರೊನಾ ತಗುಲಿದೆ. ಈ ಕುರಿತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಮಾಹಿತಿ ನೀಡಿದ್ದಾರೆ. ಅಧಿವೇಶನದಲ್ಲಿ ಇವರೆಲ್ಲಾ ಭಾಗಿಯಾಗಿದ್ದರಿಂದ ಕರೊನಾ ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇಷ್ಟೇ ಅಲ್ಲದೇ ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದ ವೇಳೆ ನಿಯೋಜಿಸಲಾದ 35 ಪೊಲೀಸರು ಮತ್ತು ಸರ್ಕಾರಿ ನೌಕರರಿಗೆ ಕೋವಿಡ್ ದೃಢಪಟ್ಟಿದೆ.
ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 1431ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 454 ಪ್ರಕರಣಗಳು ಮಹಾರಾಷ್ಟ್ರದಲ್ಲಿವೆ. ಕರೊನಾ ಪ್ರಕರಣಗಳ ಸಂಖ್ಯೆ ಶೇ.35ರಷ್ಟು ಏರಿಕೆಯಾಗಿದೆ.
ರಾಜ್ಯದಲ್ಲಿ ಕೋವಿಡ್ ಏರುತ್ತಲೇ ಸಾಗಿದೆ. ಇದು ಕರೊನಾ ಹಾಟ್ಸ್ಪಾಟ್ ಆಗುತ್ತಲಿದೆ. ಇದೇ ರೀತಿ ಮುಂದುವರೆದರೆ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ಹೇರಬೇಕಾಗಬಹುದು ಎಂದು ಸರ್ಕಾರ ಹೇಳಿದೆ. ಇದಾಗಲೇ ಮುಂಬೈನಲ್ಲಿ ಈಗಾಗಲೇ ಸೆಕ್ಷನ್-144 ಜಾರಿಗೊಳಿಸಲಾಗಿದೆ. ಡಿಸೆಂಬರ್ 30 ರಿಂದ ಜನವರಿ 7ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸೇರುವುದನ್ನು ನಿಷೇಧಿಸಲಾಗಿದೆ.
ಇದೇ ವೇಳೆ ಎಚ್ಚರಿಕೆ ನೀಡಿರುವ ಆರೋಗ್ಯ ಇಲಾಖೆ, ಲಸಿಕೆ ಹಾಕಿಸಿಕೊಂಡ ಮಾತ್ರಕ್ಕೆ ಕರೊನಾ ಬರುವುದಿಲ್ಲ ಎಂದರ್ಥವಲ್ಲ. ಎಲ್ಲಾ ರೀತಿಯ ಮುಂಜಾಗರೂಕತೆಯನ್ನು ತೆಗೆದುಕೊಳ್ಳಬೇಕು ಎಂದಿದೆ.
ಹೊಸವರ್ಷಕ್ಕೆ ಭರ್ಜರಿ ಗಿಫ್ಟ್: 10 ಕೋಟಿ ರೈತರಿಗೆ 20 ಸಾವಿರ ಕೋಟಿ ರೂ ಪಾವತಿ- ಕರ್ನಾಟಕಕ್ಕೂ ಸಿಂಹ ಪಾಲು