More

    ಉ.ಪ್ರದೇಶದ ಮುಂದಿನ ಸಿಎಂ ಯಾರು? ಅಖಿಲೇಶ್‌ ಯಾದವ್‌ ಕನಸಲ್ಲೂ ಬಂದು ಭವಿಷ್ಯ ನುಡಿದ ಶ್ರೀಕೃಷ್ಣ ಪರಮಾತ್ಮ!

    ಲಖನೌ: ಉತ್ತರ ಪ್ರದೇಶದಲ್ಲಿ ಚುನಾವಣೆಯ ಕಾವು ಜೋರಾಗಿದೆ. ತಮ್ಮ ಪಕ್ಷವನ್ನು ಅಧಿಕಾರಕ್ಕೇರಿಸಲು ಎಲ್ಲಾ ಪಕ್ಷಗಳೂ ಸಾಕಷ್ಟು ಕಸರತ್ತು ನಡೆಸುತ್ತಿವೆ. ತಮ್ಮ ಪಕ್ಷದ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ ಪಡುತ್ತಿದ್ದರೆ, ಬಿಜೆಪಿಯನ್ನು ಕೆಳಕ್ಕಿಳಿಸಲು ಉಳಿದ ಪಕ್ಷಗಳು ಭಾರಿ ಬೆವರು ಸುರಿಸುತ್ತಿವೆ.

    ಈ ನಡುವೆಯೇ ಉತ್ತರ ಪ್ರದೇಶದ ರಾಜಕೀಯದಲ್ಲಿ ಶ್ರೀಕೃಷ್ಣ ಪರಮಾತ್ಮನ ಹೆಸರು ಭಾರಿ ಚಾಲ್ತಿಯಲ್ಲಿದೆ! ಕೆಲ ದಿನಗಳ ಹಿಂದಷ್ಟೇ ಬಿಜೆಪಿ ರಾಜ್ಯಸಭಾ ಸದಸ್ಯ ಹರನಾಥ್ ಸಿಂಗ್ ಯಾದವ್, ಶ್ರೀಕೃಷ್ಣ ನನ್ನ ಕನಸಿನಲ್ಲಿ ಬಂದು ಯೋಗಿ ಆದಿತ್ಯನಾಥ್ ಅವರನ್ನು ತಮ್ಮ ಜನ್ಮಭೂಮಿಯಾಗಿರುವ ಮಥುರಾದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿಕೊಂಡರು ಎಂದು ಹೇಳಿದ್ದರು. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದ ಮತದಾರರು ಯೋಗಿ ಜೀ ತಮ್ಮ ಕ್ಷೇತ್ರದಿಂದಲೇ ಗೆಲ್ಲಬೇಕು ಎಂದು ಬಯಸುತ್ತಿದ್ದಾರೆ. ಆದರೆ ಶ್ರೀಕೃಷ್ಣನ ನಗರವಾದ ಮಥುರಾದಿಂದ ಸ್ಪರ್ಧಿಸಬೇಕು ಎಂಬ ವಿಶೇಷ ಆಸೆಯನ್ನು ಬ್ರಜಕ್ಷೇತ್ರದ ಜನರು ಹೊಂದಿದ್ದಾರೆ. ಶ್ರೀಕೃಷ್ಣನ ಇಚ್ಛೆಯೂ ಇದೇ ಆಗಿದೆ ಎಂದಿದ್ದರು. ಈ ಮೂಲಕ ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದ್ದರು.

    ಇದಕ್ಕೆ ಪ್ರತಿಕ್ರಿಯೆ ನೀಡಲು ಎಂಬಂತೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್​ ಯಾದವ್, ಶ್ರೀಕೃಷ್ಣ ಪರಮಾತ್ಮಜೀ ದಿನವೂ ನನ್ನ ಕನಸಿನಲ್ಲಿ ಬರುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದು ನಿನ್ನ ಪಕ್ಷವೇ. ನೀನೇ ಮುಂದಿನ ಮುಖ್ಯಮಂತ್ರಿ. ನಿನ್ನಿಂದ ಖಂಡಿತವಾಗಿಯೂ ರಾಮರಾಜ್ಯ ಸ್ಥಾಪನೆ ಸಾಧ್ಯವಾಗಿದೆ. ನೀನು ರಾಮರಾಜ್ಯ ಸ್ಥಾಪನೆ ಮಾಡಿಯೇ ಮಾಡುತ್ತಿ ಎಂಬ ನಂಬಿಕೆ ಇದೆ. ಆದ್ದರಿಂದ ಏನೇ ಆದರೂ ಮುಂದಿನ ಚುನಾವಣೆಯಲ್ಲಿ ಬಹುಮತದಿಂದ ಗೆದ್ದುಬರುವುದು ಸಮಾಜವಾದಿ ಪಕ್ಷವೇ ಎಂದು ಭವಿಷ್ಯ ನುಡಿದಿದ್ದಾರೆ’ ಎಂದು ಅಖಿಲೇಶ್‌ ಯಾದವ್‌ ಹೇಳಿದರು!

    ಬಹ್ರೈಚ್​​ನ ಬಿಜೆಪಿ ಶಾಸಕಿ ಮಾಧುರಿ ವರ್ಮಾ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಆಗ ಅವರು ಈ ವಿಷಯವನ್ನು ಹೇಳಿದರು. ರಾಮರಾಜ್ಯ ಸ್ಥಾಪನೆಗೆ ಸಮಾಜವಾದ ಮಾರ್ಗದಲ್ಲೇ ಹೋಗಬೇಕು. ಯಾವಾಗ ಸಮಾಜವಾದ ಸ್ಥಾಪನೆಯಾಗುತ್ತದೆಯೋ, ಆಗ ರಾಮರಾಜ್ಯವೂ ಸ್ಥಾಪಿತಗೊಳ್ಳುತ್ತದೆ ಎಂದು ಹೇಳಿದರು.

    ಅಂದಹಾಗೆ, ಉತ್ತರಪ್ರದೇಶದಲ್ಲಿ ಒಟ್ಟಾರೆ 403 ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಚುನಾವಣೆ ಅಂದರೆ 2017ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಕೇವಲ 47 ಕ್ಷೇತ್ರ ಗೆದ್ದಿತ್ತು. ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಒಟ್ಟಾರೆಯಾಗಿ 325 ಕ್ಷೇತ್ರ ಗೆದ್ದುಕೊಂಡಿದ್ದವು.

    ಅಪ್ಪನ ಅಣ್ಣನಿಗೆ ವಾರಸುದಾರರಿಲ್ಲದಿದ್ದರೆ ಆಸ್ತಿ ತಮ್ಮನ ಮಕ್ಕಳಿಗೆ ಬರುತ್ತಾ? ಕಾನೂನು ಏನು ಹೇಳಿದೆ ನೋಡಿ…

    ಮೊದಲ ರಾತ್ರಿ ಆಸೆಯಿಂದ ಪತ್ನಿಯ ಸಮೀಪ ಬಂದವನಿಗೆ ಕಾದಿತ್ತು ಶಾಕ್‌! ಆಕೆಯ ಹೊಟ್ಟೆಯಲ್ಲಿದ್ವು ಅವಳಿ ಮಕ್ಕಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts