ಸಾಗರ: ಬಲಿಷ್ಠ ಭಾರತ ನಿರ್ಮಾಣ ಪ್ರತಿಯೊಬ್ಬ ಭಾರತೀಯನ ಕನಸು. ಈ ಕುರಿತು ಚಿಂತನೆ ಅಗತ್ಯವಿದೆ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಇಲ್ಲಿನ ಮರ್ಕಝುಲ್ ಉಲೂಂ ಎಜುಕೇಶನ್ ಅಕಾಡೆಮಿಯ ಮರ್ಕಜ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಿಧಾನಸಭೆ, ಲೋಕಸಭೆಯಲ್ಲಿ ಸಚಿವರು, ಸಂಸದರು, ಶಾಸಕರು ಬಲಿಷ್ಠರಾಗಿಬಿಟ್ಟರೆ ದೇಶ ಸದೃಢವಾಗುವುದಿಲ್ಲ. ಅಧಿಕಾರಿಗಳು ಎಸಿ ರೂಮಿನಲ್ಲಿ ಕುಳಿತು ಕಾನೂನು ರೂಪಿಸಿದರೆ ದೇಶ ಬಲವಾಗುವುದಿಲ್ಲ. ಕ್ಲಾಸ್ರೂಮಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬಲಿಷ್ಠವಾದರೆ ಮಾತ್ರ ಭಾರತ ನಂ.1 ಸ್ಥಾನಕ್ಕೆ ತಲುಪಲು ಸಾಧ್ಯ. ಸಚಿವರು, ಸಂಸದರು, ಶಾಸಕರದ್ದು ಕೇವಲ ಐದು ವರ್ಷದ ತಾತ್ಕಾಲಿಕ ಶಕ್ತಿ. ಆದರೆ ಶ್ರದ್ಧೆಯಿಂದ ವಿದ್ಯೆ ಕಲಿತರೆ ಅದು ನಿಮ್ಮ ಶಾಶ್ವತ ಶಕ್ತಿಯಾಗಿ ನಿಮ್ಮನ್ನು ಬೆಳಗಿಸುತ್ತದೆ. ಅಲ್ಪಸಂಖ್ಯಾತ ಸಮುದಾಯ ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಬಡತನ ಇದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರೆ ಅವರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಾರೆ. ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡಿದರೆ ಮಕ್ಕಳು ಸರ್ವಾಂಗೀಣ ಪ್ರಗತಿ ಹೊಂದುತ್ತಾರೆ ಎಂದರು.
ವಿಶ್ವದ ಅನೇಕ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಅತ್ಯಂತ ಶ್ರೇಷ್ಠವಾದ ದೇಶ. ಅನ್ಯ ರಾಷ್ಟ್ರಗಳು ಆರ್ಥಿಕತೆ, ಹಣ ಇನ್ನಿತರ ಅಂಶಗಳ ಮೇಲೆ ರೂಪುಗೊಂಡಿದ್ದರೆ ನಮ್ಮ ದೇಶ ಮಾನವೀಯತೆ, ಕರುಣೆ ಮೇಲೆ ರೂಪುಗೊಂಡಿದೆ. ನಮ್ಮ ಸಂವಿಧಾನ ನಮಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.
ಸಂಸ್ಥೆ ನಿರ್ದೇಶಕ ಎಸ್.ಮಹಮದ್ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಇಕ್ಬಾಲ್ ಸಾಬ್, ಕೆ.ಎಸ್.ಅಟಕೋಯ, ಸಯ್ಯದ್ ಅಬೂಬಕರ್, ಎ.ಸಿ.ಮಹಮದ್ ಫೈಝಿ, ಪಿ.ಪಿ.ಮಹ್ಮದ್ ಸಖಾಫಿ, ಮಹ್ಮದ್ ಇರ್ಶಾದ್ ಮದನಿ, ಮಹ್ಮದ್ ಶರೀಫ್ ಮುಸ್ಲಿಯಾರ್, ಫರೂಝ್ ಹಜರತ್ ಮಹ್ಮದ್ ಮುನಾವರ್, ಮಹ್ಮದ್ ಶರೀಫ್ ಸಖಾಫಿ, ಸಂತೋಷ್ ಇತರರಿದ್ದರು.