ಕೀವ್: ಯುದ್ಧದ ಭೀತಿಯಿಂದ ಯೂಕ್ರೇನ್ ನಿವಾಸಿಗಳು ತತ್ತರಿಸಿ ಹೋಗುತ್ತಿದ್ದಾರೆ. ಬೇರೆ ಬೇರೆ ದೇಶದ ವಾಸಿಗಳು ಅದರಲ್ಲಿಯೂ ಹೆಚ್ಚಾಗಿ ವಿದ್ಯಾರ್ಥಿಗಳು ತಾಯ್ನಾಡನ್ನು ತಲುಪಲು ಹಪಹಪಿಸುತ್ತಿದ್ದಾರೆ. ತಮ್ಮ ಪ್ರಾಣ ಕಾಪಾಡಿಕೊಂಡರೆ ಸಾಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಇಂಥ ಸ್ಥಿತಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಅತ್ಯಂತ ಜೀವದ ಗೆಳೆಯ ಅನ್ನಿಸಿಕೊಂಡಿರುವ ನಾಯಿಗಾಗಿ ಯೂಕ್ರೇನ್ ಬಿಡಲು ಸಾಧ್ಯವಾಗದೇ ಪರದಾಡುತ್ತಿದ್ದಾನೆ. ನನ್ನ ನಾಯಿಯನ್ನು ನನ್ನ ಜತೆಗೆ ವಾಪಸ್ ತಾಯ್ನಾಡನ್ನು ತಲುಪಿಸುವಂತೆ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಗೋಗರೆದಿದ್ದಾನೆ.
ಪೂರ್ವ ಉಕ್ರೇನ್ನ ಖಾರ್ಕಿವ್ ನ್ಯಾಷನಲ್ ಯೂನಿವರ್ಸಿಟಿ ಆಫ್ ರೇಡಿಯೋ ಇಲೆಕ್ಟ್ರಾನಿಕ್ಸ್ನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ಓದುತ್ತಿರುವ ರಿಷಭ್ ಕೌಶಿಕ್, ನಾಯಿಮರಿಯೊಂದನ್ನು ಸಾಕಿದ್ದಾನೆ. ಈಗ ಯೂಕ್ರೇನ್ ಬಿಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತನ್ನ ಜತೆ ನಾಯಿಯನ್ನೂ ಕರೆದುಕೊಂಡು ಹೋಗಬೇಕಿದೆ. ಆದರೆ ಅದಕ್ಕೆ ಅನುಮತಿ ಸಿಗುತ್ತಿಲ್ಲ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿರುವ ರಿಷಭ್ ‘ಕಳೆದ ಫೆಬ್ರವರಿಯಲ್ಲಿ ಖಾರ್ಕಿವ್ನಲ್ಲಿ ನಾಯಿಮರಿ ‘ಮಾಲಿಬು’ ನನಗೆ ಸಿಕ್ಕಿದೆ. ಅದು ನನ್ನ ಜೊತೆಗೆ ಇದೆ. ನಾನು ವಿಮಾನದಲ್ಲಿ ಪ್ರಯಾಣ ಮಾಡುವಾಗ ಮಾಲಿಬು ತನ್ನೊಂದಿಗೆ ಬರಲು ಎಲ್ಲಾ ದಾಖಲೆಗಳು ಮತ್ತು ಅನುಮತಿಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇನೆ. ಆದರೆ ಸಾಧ್ಯವಾಗುತ್ತಿಲ್ಲ. ನನ್ನ ಜೊತೆಗೆ ನಾಯಿಯನ್ನು ಕರೆದುಯಕೊಂಡು ಬರಲು ವಿಮಾನ ಟಿಕೆಟ್ ಕೇಳುತ್ತಿದ್ದಾರೆ. ಯೂಕ್ರೇನ್ನಲ್ಲಿ ನಾವು ಹೊರಗೆ ಹೋಗುವ ಪರಿಸ್ಥಿತಿ ಇಲ್ಲ. ವಿಮಾನ ನಿಲ್ದಾಣವನ್ನು ಮುಚ್ಚಿದ್ದಾರೆ. ನಾನು ಹೇಗೆ ಟಿಕೆಟ್ ತೆಗೆದು ಕೊಳ್ಳಬೇಕು. ದೆಹಲಿಯಲ್ಲಿರುವ ಭಾರತೀಯ ಸರ್ಕಾರದ ಎನಿಮಲ್ ಕ್ವಾರಂಟೈನ್ ಮತ್ತು ಪ್ರಮಾಣೀಕರಣ ಸೇವೆ (ಎಕ್ಯೂಸಿಎಸ್) ಮತ್ತು ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ, ಯಾರಾದರೂ ಸಹಾಯ ಮಾಡಿ’ ಎನ್ನುತ್ತಿದ್ದಾನೆ.
ನಿಯಮದ ಪ್ರಕಾರ, ಭಾರತ ಸರ್ಕಾರವು ನನಗೆ ಅಗತ್ಯವಿರುವ ಎನ್ಒಸಿ (ನಿರಾಕ್ಷೇಪಣೆ ಪ್ರಮಾಣಪತ್ರ) ನೀಡಿದ್ದರೆ ನಾನು ಈಗ ಭಾರತದಲ್ಲಿರುತ್ತಿದ್ದೆ. ರಷ್ಯಾದ ಪಡೆಗಳು ಗುಂಡಿನ ದಾಳಿ ಮಾಡಿದಾಗ, ಸೈರನ್ಗಳು ಮತ್ತು ಬಾಂಬ್ಗಳ ಶಬ್ದ ಕೇಳಿದ ಕೂಡಲೆ ನಾವು ನಾವು ಬಂಕರ್ನಲ್ಲಿ ಅಡಗಿ ಕುಳಿತ್ತಿದ್ದೇವೆ. ನಾಯಿ ಬಾಂಬ್ ಶಬ್ದ ಕೇಳಿದರೆ ಹೆದರಿ ಕಿರುಚುತ್ತದೆ. ನೆಲದಡಿಯಲ್ಲಿ ನಾವು ಪ್ರೀಜ್ ಆಗುತ್ತಿದ್ದೇವೆ. ನಾಯಿ ಬೆಚ್ಚಗಾಗಲು ಬಂಕರ್ನಿಂದ ಮೇಲಕ್ಕೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ, ವಾಪಸ್ ಬರಬೇಕು ಎಂದರೆ ನಾಯಿಯನ್ನು ಕರೆತರಲಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾನೆ.
VIDEO: ‘ಭಾರತದ ಧ್ವಜ ಪ್ರಾಣ ಕಾಪಾಡಿತು, ಚೆಕ್ ಮಾಡದೇ ಬಿಟ್ಟುಬಿಟ್ಟರು- ಭಾರತೀಯ ಎನ್ನಲು ಹೆಮ್ಮೆ ಆಗ್ತಿದೆ’