ಕೌಲಾಲಂಪುರ (ಮಲೇಷಿಯಾ): ಕರೊನಾ ವೈರಸ್ ಹಿನ್ನೆಲೆಯಲ್ಲಿ, ಈಗ ಎಲ್ಲಾ ಸಭೆ ಸಮಾರಂಭಗಳಿಗೆ ಷರತ್ತುಗಳನ್ನು ಹಾಕಲಾಗಿದೆ. ಭಾರತದಲ್ಲಿ ಈಗ ಸ್ವಲ್ಪ ಷರತ್ತು ಸಡಿಲಿಕೆಯಾಗಿದ್ದು ನೂರಾರು ಮಂದಿಗೆ ಮದುವೆಗಳಿಗೆ ಅವಕಾಶ ನೀಡಲಾಗಿದೆ. ಆದರೆ ಮಲೇಷಿಯಾದಲ್ಲಿ ಈಗಲೂ ಇರುವುದು ಕೇವಲ 20 ಮಂದಿ.
20 ಮಂದಿಗಿಂತ ಹೆಚ್ಚಿಗೆ ಜನರು ಒಂದು ಕಾರ್ಯಕ್ರಮಕ್ಕೆ ಸೇರಿದರೆ, ಅಲ್ಲಿ ನಿಯಮ ಪಾಲನೆ ಆಗಿದ್ದರೆ ಇಡೀ ಕಾರ್ಯಕ್ರಮವನ್ನೇ ಬಂದ್ ಮಾಡಿಸಲಾಗುತ್ತದೆ. ಅದು ಮದುವೆಯಿರಲೀ, ಇನ್ನಾವುದೇ ಇರಲಿ. ನಿಯಮ ಉಲ್ಲಂಘನೆ ಮಾಡಿದರೆ ಬಹು ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
ಆದರೆ ಇಷ್ಟೆಲ್ಲಾ ನಿಯಮಗಳು ಇದ್ದರೂ ಅಪರೂಪದ ಮದುವೆಯೊಂದು ನಡೆದಿದೆ. ಇದು ಟೆಂಗ್ಕು ಮುಹಮ್ಮದ್ ಹಫೀಜ್ ಮತ್ತು ಓಸೀನ್ ಅಲಾಗಿಯಾ ಜೋಡಿಯ ಮದುವೆ. ಈ ಮದುವೆಗೆ ಬಂದದ್ದು ಒಂದು, ಎರಡು ಸಾವಿರ ಮಂದಿಯಲ್ಲ, ಬದಲಿಗೆ 10 ಸಾವಿರಕ್ಕೂ ಅಧಿಕ ಮಂದಿ ಮದುವೆಗೆ ಬಂದು ವಧು-ವರರಿಗೆ ಆಶೀರ್ವಾದ ಮಾಡಿ ಹೋಗಿದ್ದಾರೆ. ಆದರೆ ಎಲ್ಲಿಯೂ ಕರೊನಾ ನಿಯಮ ಉಲ್ಲಂಘನೆಯೂ ಆಗಲಿಲ್ಲ, ಅವರ ಮೇಲೆ ಕೇಸ್ ಕೂಡ ದಾಖಲಾಗಲಿಲ್ಲ.
ಅಷ್ಟಕ್ಕೂ ಕೌಲಾಲಂಪುರದಲ್ಲಿ ನಡೆದ ಈ ಮದುವೆಯಲ್ಲಿ ಇಂಥದ್ದೊಂದು ವಿಶೇಷತೆ ಹೇಗಾಯ್ತು ಎನ್ನುವುದೇ ಕುತೂಹಲದ ವಿಷಯ.
ಕೌಲಾಲಂಪುರದ ದಕ್ಷಿಣ ಭಾಗದಲ್ಲಿರುವ ಪುತ್ರಜಯದಲ್ಲಿರುವ ಭವ್ಯವಾದ ಸರ್ಕಾರಿ ಕಟ್ಟಡದ ಹೊರಗೆ ಮದುಮಕ್ಕಳು ಕುಳಿತಿದ್ದರು. ಇಲ್ಲಿಯ ಪದ್ಧತಿಯ ಪ್ರಕಾರ, ಕರೊನಾ ನಿಯಮಗಳಂತೆಯೇ ಕೆಲವೇ ಕೆಲವು ಅತಿಥಿಗಳ ಸಮ್ಮುಖದಲ್ಲಿ ಆರಂಭದ ಮದುವೆ ಪ್ರಕ್ರಿಯೆ ಮುಗಿಸಿದ ಈ ಮದುಮಕ್ಕಳು ನಂತರ ಹೊರಕ್ಕೆ ಕುಳಿತಿದ್ದರು.
ಇದು ಆಗರ್ಭ ಶ್ರೀಮಂತರ ಮದುವೆ. ಆದ್ದರಿಂದ ಅತಿಥಿಗಳಾಗಿ ಬಂದವರೆಲ್ಲರೂ ಐಷಾರಾಮಿ ಕಾರುಗಳಲ್ಲಿಯೇ ಬಂದವರು. ಅತಿಥಿಗಳು ನಿಧಾನವಾಗಿ ತಮ್ಮ ಕಾರುಗಳನ್ನು ಬಂಗಲೆಯ ಹೊರಗಡೆಯಿಂದ ಚಲಾಯಿಸಿಕೊಂಡು ಬಂದು, ಮದುಮಕ್ಕಳು ಇದ್ದಲ್ಲಿಗೆ ಬಂದು ಅವರನ್ನು ಆಶೀರ್ವದಿಸಿ, ಆತಿಥ್ಯ ಸ್ವೀಕರಿಸಿ ಕಾರಿನಲ್ಲಿ ಹೋಗುತ್ತಿದ್ದರು. ಒಬ್ಬರು ಹೋದ ಮೇಲೆ ಇನ್ನೊಂದು ಕಾರಿನಲ್ಲಿ ಅತಿಥಿಗಳು ಬಂದು ಇದೇ ರೀತಿ ಮಾಡುತ್ತಿದ್ದರು.
ಒಟ್ಟಿನಲ್ಲಿ ಇಡೀ ದಿನ ಮದುಮಕ್ಕಳು ಬಂಗಲೆ ಹೊರಗೆ ಕುಳಿತಿದ್ದರು, ಕಾರಿನಲ್ಲಿ ಅತಿಥಿಗಳು ಸಾಲು ಸಾಲಾಗಿ ಬಂದು ಆಶೀರ್ವದಿಸಿ ಹೋದರು. ಹೀಗೆ 10 ಸಾವಿರಕ್ಕೂ ಅಧಿಕ ಮಂದಿ, ಎಲ್ಲಾ ಕರೊನಾ ನಿಯಮ ಪಾಲನೆಯ ಜತೆ ಬಂದು ಹೋಗಿದ್ದಾರೆ.
ಅಷ್ಟಕ್ಕೂ ಮೊದಲೇ ಹೇಳಿದಂತೆ ಇದು ಆಗರ್ಭ ಸಿರಿವಂತರ ಮದುವೆ. ವರನ ತಂದೆ ಪ್ರಭಾವಿ ರಾಜಕಾರಣಿ ಮತ್ತು ಮಾಜಿ ಸಚಿವ ತೆಂಗ್ಕು ಅಡ್ನಾನ್.
ಅಚ್ಚರಿಯ ವಿಷಯ ಎಂದರೆ, ಮದುವೆಯಾಗಿ ಮಾರನೆಯ ದಿನವೇ ಭ್ರಷ್ಟಾಚಾರದ ಆರೋಪದಲ್ಲಿ ಇದೇ ಸಿರಿವಂತ ಜೈಲು ಪಾಲಾದರು. ಸುಮಾರು 5 ಲಕ್ಷ ಡಾಲರ್ ಭ್ರಷ್ಟಾಚಾರ ಎಸಗಿರುವ ಪ್ರಕರಣದಲ್ಲಿಲ 12 ತಿಂಗಳ ಶಿಕ್ಷೆ ಇವರಿಗೆ ವಿಧಿಸಲಾಗಿದೆ.
400 ವರ್ಷಗಳ ಬಳಿಕ ಆಗಸದಲ್ಲಿ ಇಂದು ಕೌತುಕ- ನೀವೂ ಕಣ್ತುಂಬಿಸಿಕೊಳ್ಳಬಹುದು ಈ ‘ಮಹಾ ಸಂಯೋಗ’
ಅಟಲ್ ಕವನಕ್ಕೆ ನೃತ್ಯದ ಮೆರುಗು; ಅಪೂರ್ವ ನಾಯಕನ ಜನ್ಮದಿನಕ್ಕೆ ಹೀಗೊಂದು ಗೌರವ…
ಈ ಮಗುವಿಗೆ 60 ವರ್ಷ ಎಷ್ಟು ಬೇಕೋ ಅಷ್ಟು ಪಿಜ್ಜಾ ಫ್ರೀ! ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಾ…
VIDEO: ಶೂಟಿಂಗ್ ವೇಳೆ ನಟನನ್ನು ಎಳೆದೊಯ್ದ ಟಿಲ್ಲರ್- ಸ್ವಲ್ಪದರಲ್ಲೇ ತಪ್ಪಿದೆ ಅಪಾಯ