ಬೆಂಗಳೂರು: ಇದೇ 25 ಭಾರತ ಕಂಡ ಅಪರೂಪದ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಕವಿಯೂ ಆಗಿರುವ ಅಟಲ್ ಅವರ ಲೇಖನಿಯಿಂದ ಅಸಂಖ್ಯಾತ ಕವನಗಳೂ ಮೂಡಿ ಬಂದಿವೆ.
ಈ ವರ್ಷದ ಜನ್ಮದಿನವನ್ನು ಅತ್ಯಂತ ವಿಶೇಷವಾಗಿ ಅವರ ಕವನದ ಮೂಲಕವೇ ಆಚರಿಸಲು ಇಂಟರ್ನ್ಯಾಷನಲ್ ಆರ್ಟ್ಸ್ ಆ್ಯಂಡ್ ಕಲ್ಚರಲ್ ಫೌಂಡೇಶನ್ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅಟಲ್ ಕಾವ್ಯ ಕಲಾ ನರ್ತನ ಆಯೋಜಿಸಲಾಗಿದೆ. ವಿವಿಧ ಶಾಸ್ತ್ರೀಯ ನೃತ್ಯಕ್ಷೇತ್ರದ ದಿಗ್ಗಜರು ಅಂದು ವಾಜಪೇಯಿ ಅವರ ಕವನಕ್ಕೆ ತಮ್ಮದೇ ನೃತ್ಯ ಶೈಲಿನಲ್ಲಿ ಹೆಜ್ಜೆ ಹಾಕಲಿದ್ದಾರೆ.
ಭರತನಾಟ್ಯ, ಕಥಕ್, ಒಡಿಸ್ಸಿ, ಕೂಚುಪುಡಿ, ಮೋಹಿನಿಯಾಟ್ಟಂ ಸೇರಿದಂತೆ 15 ನೃತ್ಯ ಪ್ರಕಾರಗಳನ್ನು ವಿವಿಧ ಕಲಾವಿದರು ಅಂದು ಪ್ರದರ್ಶಿಸಲಿದ್ದು, ವಾಜಪೇಯಿ ಅವರ 96ನೇ ಜನ್ಮ ವಾರ್ಷಿಕೋತ್ಸವಕ್ಕೆ ಕವನ-ನೃತ್ಯ ನಮನ ಸಲ್ಲಿಸಲಿದ್ದಾರೆ.
ಕೇಂದ್ರ ಸಂಸ್ಕೃತಿ ಸಚಿವಾಲಯದ ಬೆಂಬಲದೊಂದಿಗೆ, ದೃಶ್ಯ ಪ್ರಸ್ತುತಿ ನಡೆಯಲಿದೆ. ನಂದಿನಿ ಮೆಹ್ತಾ (ಕಥಕ್), ಪ್ರತೀಕ್ಷಾ ಕಾಶಿ (ಕೂಚುಪುಡಿ) ಡಾ. ರೇಖಾ ರಾಜು (ಭರತನಾಟ್ಯ), ಕರಿಷ್ಮಾ ಅಹುಜಾ (ಒಡಿಸ್ಸಿ) ಸೇರಿದಂತೆ ದೇಶದ ವಿವಿಧ ನೃತ್ಯಾಂಗನೆಯರು ಅಂದು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಇಂಟರ್ನ್ಯಾಷನಲ್ ಆರ್ಟ್ಸ್ ಆ್ಯಂಡ್ ಕಲ್ಚರಲ್ ಫೌಂಡೇಶನ್ನ ಶ್ರೀವತ್ಸ ಶಾಂಡಿಲ್ಯ ಮತ್ತು ಅವರ ತಂಡವು ಈ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದಾರೆ. ಅಟಲ್ ಅವರ ನವರಸಗಳ ಅಂಶಗಳನ್ನು ಹೊಂದಿರುವ ಕೃತಿಗಳನ್ನು ಆರಿಸಿರುವ ತಂಡ ರಾಜಕೀಯ, ಪ್ರಕೃತಿ ಮತ್ತು ಪೌರಾಣಿಕ ಕಥೆಗಳು ಸೇರಿದಂತೆ ವಿವಿಧ ಪ್ರಕಾರದ ವಿಷಯ ವಸ್ತುಗಳನ್ನು ಆಯ್ಕೆ ಮಾಡಿದೆ.
ಬೆಂಗಳೂರು, ನವದೆಹಲಿ ಮತ್ತು ಗ್ವಾಲಿಯರ್ ಮೂರು ನಗರಗಳಲ್ಲಿ ಏಕಕಾಲದಲ್ಲಿ ಪ್ರದರ್ಶನಗಳು ನಡೆಯುತ್ತದೆ. ಡಿಸೆಂಬರ್ 25 ರಂದು ನಡೆಯಲಿರುವ ಕಾರ್ಯಕ್ರಮವು ಪ್ರತಿಷ್ಠಾನದ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಲೈವ್ಸ್ಟ್ರೀಮ್ ಆಗುತ್ತದೆ.
ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ‘ಅಟಲ್’ ಇಂದು ಸಂಪೂರ್ಣ: ಏನಿದರ ವಿಶೇಷತೆ?
ಚೀನಾ ರಾಯಭಾರ ಕಚೇರಿಗೆ 800 ಕುರಿ ನುಗ್ಗಿಸಿದ್ದ ಅಟಲ್ ಬಿಹಾರಿ ವಾಜಪೇಯಿ!