ನವದೆಹಲಿ: ಬೇರೆ ಕೆಲವು ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕರೊನಾ ಅಬ್ಬರ ಸ್ವಲ್ಪ ತಣ್ಣಗಾಗುತ್ತಾ ಸಾಗಿದ್ದರೂ, ಕೆಲವು ರಾಜ್ಯಗಳಲ್ಲಿ ಮಾತ್ರ ಈ ವೈರಸ್ ಇನ್ನೂ ಭೀತಿ ಹುಟ್ಟಿಸುತ್ತಲೇ ಸಾಗಿದೆ.
ಹಲವೆಡೆಗಳಲ್ಲಿ ಕರೊನಾ ಎರಡನೆಯ ಅಲೆ ಶುರುವಾಗಿರುವ ನಡುವೆಯೇ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 3ನೇ ಅಲೆ ಆರಂಭವಾಗಿದೆ ಎಂಬುದಾಗಿ ವರದಿಯಾಗಿದೆ. ಈ ಕುರಿತು ಖುದ್ದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಹೆಚ್ಚುತ್ತಿವೆ. ಇದನ್ನು ಮೂರನೇ ಅಲೆ ಎಂದು ಕರೆಯಬಹುದು. ಇನ್ನು ಒಂದು ವಾರದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಏನೇ ಇದ್ದರೂ ಆದರೆ ಜನತೆ ಆತಂಕ ಪಡುವ ಅಗತ್ಯ ಇಲ್ಲ. ಸರ್ಕಾರವು ನಿಯಮಿತವಾಗಿ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದೆ. ವೈರಸ್ ನಿಯಂತ್ರಿಸಲು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ನಿನ್ನೆ ಒಂದೇ ದಿನದಲ್ಲಿ ದೆಹಲಿಯಲ್ಲಿ 6,725 ಹೊಸ ಕೋವಿಡ್-19 ಪ್ರಕರಣಗಳನ್ನ ವರದಿಯಾಗಿವೆ. ಈ ವರದಿ ಪರಿಶೀಲನೆ ನಂತರ ಕೇಜ್ರಿವಾಲ್ ಅವರು ಈ ಮಾಹಿತಿ ನೀಡಿದ್ದಾರೆ.
‘ಕಳೆದ ಕೆಲವು ದಿನಗಳಿಂದ ದೆಹಲಿಯು ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೆಪ್ಟೆಂಬರ್ ಅಂತ್ಯ ಮತ್ತು ಅಕ್ಟೋಬರ್ ಆರಂಭದಲ್ಲಿ ದಿನನಿತ್ಯ ಕರೊನಾ ಪ್ರಕರಣಗಳು 3,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇಳಿಕೆಯಾಗುತ್ತಿತ್ತು. ಆದರೆ ಇದೀಗ ಪುನಃ
ಹೆಚ್ಚಾಗುವುದನ್ನು ನೋಡಿದರೆ ಮೂರನೆಯ ಅಲೆ ಶುರುವಾಗಿದೆ ಎನ್ನಿಸುತ್ತಿದೆ ಎಂದರು.
ಇದನ್ನೂ ಓದಿ: ನೀನೂ ಬೇಡ, ಡಿವೋರ್ಸೂ ಕೊಡಲ್ಲ ಅಂತಿದ್ದಾಳೆ… ನನಗೇನು ಪರಿಹಾರವಿದೆ?
ಇಲ್ಲಿಯವರೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ
‘ಸದ್ಯ ದೆಹಲಿಯಲ್ಲಿ ಬೆಡ್ಗಳ ಕೊರತೆ ಇಲ್ಲ. ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ರೀತಿಯ ಆರೋಗ್ಯ ಮೂಲಸೌಕರ್ಯಗಳ ಕೊರತೆ ಇಲ್ಲ. ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇರುವ ಕೆಲವು ಐಸಿಯು ಹಾಸಿಗೆಗಳು ಮಾತ್ರ ಖಾಲಿಯಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ದೆಹಲಿಯಲ್ಲಿ ಕೋವಿಡ್-19 ರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಆರೋಗ್ಯ ಸೌಲಭ್ಯಗಳನ್ನು ನೀಡುವುದು ಮತ್ತು ಸಾವಿನ ಪ್ರಮಾಣವನ್ನು ಸಾಧ್ಯವಾದಷ್ಟು ಕಡಿಮೆ ಇಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ, ವಾಯು ಮಾಲಿನ್ಯದಿಂದ ತುಂಬಿಹೋಗಿರುವ ದೆಹಲಿಯಲ್ಲಿ ದೀಪಾವಳಿಯಲ್ಲಿ ಪಟಾಕಿಗೆ ಅವಕಾಶ ನೀಡಬೇಕೇ ಬೇಡವೇ ಎಂಬ ಬಗ್ಗೆ ದೆಹಲಿ ಸರ್ಕಾರ ಗುರುವಾರ ನಿರ್ಧಾರ ಕೈಗೊಳ್ಳಲಿದೆ.
ಜೂಜಾಟಕ್ಕೆ ಪ್ರೇರಣೆ: ಹೈಕೋರ್ಟ್ ನೋಟಿಸ್ ಕುಣಿಕೆಯಲ್ಲಿ ಸಿನಿ, ಕ್ರಿಕೆಟ್ ತಾರೆಯರು