ಚೆನ್ನೈ : ಆನ್ಲೈನ್ ಗೇಮಿಂಗ್ ಆ್ಯಪ್ಗಳ ಪರ ಜಾಹೀರಾತು ನೀಡುವ ಮೂಲಕ ಆನ್ಲೈನ್ ಜೂಜಾಟಕ್ಕೆ ಉತ್ತೇಜನ ನೀಡುತ್ತಿರುವ ಆರೋಪ ಹೊತ್ತ ಹಲವಾರು ಚಿತ್ರನಟ-ನಟಿಯರು ಹಾಗೂ ಕ್ರಿಕೆಟ ತಾರೆಯರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಚಿತ್ರನಟರಾದ ಸುದೀಪ್, ಪ್ರಕಾಶ್ ರಾಜ್, ತಮನ್ನಾ, ರಾಣಾ ದಗ್ಗುಬಾಟಿ, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ ಸೇರಿದಂತೆ ಹಲವರಿಗೆ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ನೋಟಿಸ್ ನೀಡಿದೆ. ಈ ನೋಟಿಸ್ಗೆ ವಕೀಲರ ಮೂಲಕ ಸ್ಪಷ್ಟನೆ ನೀಡುವಂತೆ ತಿಳಿಸಲಾಗಿದೆ.
ಮೊಹಮ್ಮದ್ ರಿಜ್ವಿ ಎಂಬುವವರು ಇವರ ವಿರುದ್ಧ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಬಿದ್ದಿದೆ. ಜನರಿಗೆ ಅದರಲ್ಲಿಯೂ ಯುವಜನತೆಗೆ ಮಾದರಿಯಾಗಬೇಕಿರುವ ಇಂಥ ತಾರೆಯರು ಅವರನ್ನು ತಪ್ಪು ಹಾದಿಗೆ ತಳ್ಳುತ್ತಿದ್ದಾರೆ. ಈ ಜೂಜಾಟ ಆಡಿ ಅನೇಕ ಮಂದಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಕೆಲವು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವುದು ನಾನೇ: ಇಲ್ಲದಿದ್ದರೆ ಸುಪ್ರೀಂಕೋರ್ಟ್ಗೆ ಹೋಗುವೆ…
ಅರ್ಜಿದಾರರು ಸಲ್ಲಿಸಿರುವ ಅರ್ಜಿಯಲ್ಲಿ ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ಕಾರ್ಯದರ್ಶಿ, ಎಂಇಐ, ಕಾರ್ಯದರ್ಶಿ ಯುಒಐ (ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ), ತಮಿಳುನಾಡು ರಾಜ್ಯ, ಡಿಜಿಪಿ ಸೇರಿದಂತೆ ಸಿನಿ ಮತ್ತು ಕ್ರಿಕೆಟಿಗರನ್ನು ಪ್ರತಿವಾದಿಯಾಗಿಸಿದ್ದಾರೆ.
ವಿಚಾರಣೆ ವೇಳೆ ಇಂಥ ಸೆಲೆಬ್ರಿಟಿ ಎನಿಸಿಕೊಂಡವರು ಈ ರೀತಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡು ಏಕೆ ಯುವಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು. ಜನರು ತಮ್ಮನ್ನು ಹಿಂಬಾಲಿಸುತ್ತಾರೆ ಎಂದು ತಿಳಿದಿದ್ದರೂ ಸೆಲೆಬ್ರಿಟಿಗಳು ಇಂತಹ ಆಟಗಳನ್ನು ಏಕೆ ಅನುಮೋದಿಸುತ್ತಿದ್ದಾರೆ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ವಿಚಾರಣೆಯನ್ನು ನವೆಂಬರ್ 19ಕ್ಕೆ ಮುಂದೂಡಲಾಗಿದ್ದು, ಅಷ್ಟರ ಒಳಗೆ ಇದಕ್ಕೆ ಪ್ರತಿಕ್ರಿಯಿಸಲು ಆದೇಶಿಸಲಾಗಿದೆ ಎಂದು ಹೇಳಲಾಗಿದೆ.
ಅಕ್ರಮ ಆಸ್ತಿ ವಿವಾದ: 3 ಕೇಸ್ ವಾಪಸ್ ಪಡೆದ ವಕೀಲ- ಬಿಎಸ್ವೈ ಫುಲ್ ಖುಷ್