ಸೋನ್ಭದ್ರ (ಉತ್ತರ ಪ್ರದೇಶ); ಮತದಾರರನ್ನು ಓಲೈಸಲು ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ಮಾಡುವ ವೈಖರಿಗಳು, ಆಡುವ ಮಾತುಗಳು, ನೀಡುವ ಭರವಸೆಗಳು ಅಷ್ಟಿಷ್ಟಲ್ಲ. ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಸೋನ್ಭದ್ರದ ರಾಬರ್ಟ್ಸ್ಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದು, ಬಿಜೆಪಿ ಶಾಸಕ ಭೂಪೇಶ್ ಚೌಬೆ ಅವರು ಮಾಡಿರುವ ರೀತಿಗೆ ಮತದಾರರು ಕಣ್ ಕಣ್ ಬಿಟ್ಟಿದ್ದಾರೆ.
ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಭೂಪೇಶ್ ಚೌಬೆ, ತಮ್ಮ ಕುರ್ಚಿಯ ಮೇಲೆ ನಿಂತು, ತಮ್ಮ ಕಿವಿಗಳನ್ನು ಹಿಡಿದುಕೊಂಡು, ಕಳೆದ ಐದು ವರ್ಷಗಳಲ್ಲಿ ತಾವು ಏನಾದರೂ ತಪ್ಪು ಮಾಡಿದ್ದರೆ ಅದನ್ನು ಕ್ಷಮಿಸಿ ಎಂದು ವೇದಿಕೆಯ ಮೇಲೆ ಬಸ್ಕಿ ಹೊಡೆದಿದ್ದಾರೆ. ‘ನಾನು ಕೈ ಜೋಡಿಸಿ, ನಿಮ್ಮ ಕ್ಷಮೆಯನ್ನು ಕೇಳುತ್ತಿದ್ದೇನೆ. 2017ರ ಚುನಾವಣೆಯಲ್ಲಿ ನನಗೆ ನೀವೆಲ್ಲರೂ ಆಶೀರ್ವಾದ ನೀಡಿದ್ದೀರಿ. ಅದೇ ರೀತಿ ಈ ಬಾರಿಯೂ ರಾಬರ್ಟ್ಸ್ಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅರಳಲು ನಿಮ್ಮ ಆಶೀರ್ವಾದ ಬೇಕಿದೆ’ ಎಂದು ಭೂಪೇಶ್ ಚೌಬೆ ಹೇಳಿದ್ದಾರೆ. ಅವರು ಹೀಗೆ ಮಾಡುತ್ತಿದ್ದಂತೆಯೇ ಅವರ ಬೆಂಬಲಿಗರು ಹರ್ಷೋದ್ಘಾರ ಹಾಕಿದ್ದಾರೆ.
ಅಷ್ಟಕ್ಕೂ ಭೂಪೇಶ್ ಚೌಬೆ ಅವರು ಈ ರೀತಿ ಮಾಡಲು ಕಾರಣ ಏನೆಂದರೆ, ಅವರು ಹಲವಾರು ಬಾರಿ ಯಾರದ್ದೇ ಫೋನ್ ಕರೆ ಬಂದರೂ ಸ್ವೀಕರಿಸುತ್ತಿರಲಿಲ್ಲ. ತಮ್ಮ ಕ್ಷೇತ್ರದಲ್ಲಿ ಇವರು ನಿಷ್ಕ್ರಿಯರಾಗಿದ್ದರು ಎಂಬ ಅಪವಾದವಿದೆ. ಆದ್ದರಿಂದ ಮತದಾರರಲ್ಲಿ ಈ ರೀತಿಯಾಗಿ ಕ್ಷಮೆ ಕೋರಿದ್ದಾರೆ. ಅಂದಹಾಗೆ ಇವರು, 2017ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅವಿನಾಶ್ ಕುಶ್ವಾಹಾ ಅವರನ್ನು ಸೋಲಿಸಿ, ಮೊದಲ ಬಾರಿಗೆ ಶಾಸಕರಾಗಿದ್ದರು.
ಇಲ್ಲಿದೆ ನೋಡಿ ಶಾಸಕರ ಪರಿ
राजनीति जो न कराए सो कम! राबर्ट्सगंज से BJP विधायक भूपेश चौबे ने कान पकड़कर लगाई उठक-बैठक, जनता से 5 साल में हुई गलतियों की मांगी माफी 😂😂
— Wg Cdr Anuma Acharya (Retd) (@AnumaVidisha) February 23, 2022
जनतंत्र में जनता से डरना जायज़ है. #UPElections2022 pic.twitter.com/8JYDrykrYG