ಲಖನೌ: ಮಹತ್ತರ ಬೆಳವಣಿಗೆ ಒಂದರಲ್ಲಿ ವಿಪಕ್ಷಗಳ ಮೈತ್ರಿಕೂಟ ಇಂಡಿಯಾವನ್ನು ತೊರೆದು ಎನ್ಡಿಎ ಸೇರುವುದಾಗಿ ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಹಾಗೂ ಉತ್ತರಪ್ರದೇಶದ ಪ್ರಭಾವಿ ಜಾಟ್ ನಾಯಕ ಜಯಂತ್ ಚೌಧರಿ ಘೋಷಿಸಿದ್ದಾರೆ.
ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಈ ಬೆಳವಣಿಗೆ ನಡೆದಿದ್ದು, ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಹೇಳಬಹುದಾಗಿದೆ.
ಇದನ್ನೂ ಓದಿ: ಮಾಂಸಹಾರ ಸೇವಿಸಿ ಸುತ್ತೂರು ಮಠಕ್ಕೆ ಭೇಟಿ; ಸಿಎಂ ಸಿದ್ದರಾಮಯ್ಯ ಕೊಟ್ಟ ಸ್ಪಷ್ಟನೆ ಹೀಗಿದೆ
ಈ ಕುರಿತು ಮಾತನಾಡಿರುವ ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ, ನನ್ನ ಪಾಲಿಗೆ ಇದು ಭಾವನಾತ್ಮಕ ಕ್ಷಣವಾಗಿದ್ದು, ರಾಷ್ಟ್ರಪತಿ, ಭಾರತ ಸರ್ಕಾರ ಮತ್ತು ವಿಶೇಷವಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಏಕೆಂದರೆ ಈ ನಿರ್ಧಾರವು ಅವರ ದೂರದೃಷ್ಟಿಯ ಒಂದು ಭಾಗವಾಗಿದೆ. ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ದೇಶದಾದ್ಯಂತ ದೊಡ್ಡ ಸಂದೇಶವನ್ನು ರವಾನಿಸಿದೆ ಎಂದು ಹೇಳಿದ್ದಾರೆ.
ನಮ್ಮ ತಾತನವರಿಗೆ (ಚೌಧರಿ ಚರಣ್ ಸಿಂಗ್) ಭಾರತ ರತ್ನ ಘೋಷಿಸುವ ಮೂಲಕ ಬಿಜೆಪಿ ನಮ್ಮ ಮನ ಗೆದ್ದಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಕೈ ಜೋಡಿಸಲು ನಾವು ಸಿದ್ದರಿದ್ದು, ಬೇಡ ಎಂದು ಹೇಳಲು ಸಾಧ್ಯವಿಲ್ಲ. ಅದರಂತೆ ಉತ್ತರಪ್ರದೇಶದಲ್ಲಿ 2 ಲೋಕಸಭೆ ಹಾಗೂ ಒಂದು ರಾಜ್ಯಸಭೆ ಸ್ಥಾನವನ್ನು ನೀಡಲು ಬಿಜೆಪಿ ನಾಯಕರು ಸಿದ್ದರಿದ್ದು, ಮತ್ತೊಂದು ಸುತ್ತಿನ ಮಾತುಕತೆ ನಡೆದ ಬಳಿಕ ಘೋಷಣೆ ಮಾಡಲಾಗುವುದು ಎಂದು ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ ತಿಳಿಸಿದ್ದಾರೆ.