ಯಾವಾಗ ‘ಕ್ಲೈಮ್ಯಾಕ್ಸ್’, ‘ನಗ್ನಂ’ ಮತ್ತು ‘ಪವರ್ ಸ್ಟಾರ್’ ಚಿತ್ರಗಳಿಗೆ ಆಪ್ಗಳಲ್ಲಿ ಯಶಸ್ಸು ಸಿಕ್ಕಿತೋ, ಇದರಿಂದ ಉತ್ಸುಕರಾಗಿ ರಾಮ್ಗೋಪಾಲ್ ವರ್ಮಾ ತಮ್ಮ ಹೊಸ ಚಿತ್ರ ‘ಮರ್ಡರ್’ ಬಿಡುಗಡೆ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಆದರೆ, ನ್ಯಾಯಾಲಯ ಮಾತ್ರ ಚಿತ್ರವನ್ನು ಸದ್ಯಕ್ಕೆ ಬಿಡುಗಡೆ ಮಾಡುವಂತಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ಲೈಫೇ ಮಿರಾಕಲ್ ಅಂದಿದ್ದ ಪೃಥ್ವಿ ಈಗ ‘ಲೈಫ್ ಈಸ್ ಬ್ಯೂಟಿಫುಲ್’ ಅಂತಿರೋದೇಕೆ?
‘ಮರ್ಡರ್’ ಒಂದು ನೈಜ ಘಟನೆಯನ್ನಾಧರಿಸಿದ ಸಿನಿಮಾ. ಕೆಲವು ವರ್ಷಗಳ ಹಿಂದೆ, ಆಂಧ್ರದ ಅಮೃತಾ ಮತ್ತು ಪ್ರಣಯ್ ಕೆಲವು ವರ್ಷಗಳ ಹಿಂದೆ ಮನೆಯವರ ಆಸೆಯ ವಿರುದ್ಧವಾಗಿ ಮದುವೆಯಾಗಿದ್ದರು. ಇಬ್ಬರೂ ಬೇರೆಬೇರೆ ಜಾತಿಯವರದ್ದಾರಿಂದ, ಎರಡೂ ಕುಟುಂಬದವರು ಈ ಮದುವೆಗೆ ಒಪ್ಪಿರಲಿಲ್ಲ. ಈ ಮಧ್ಯೆ, ಅಮೃತಾ ಮನೆಯವರು ಎರಡು ವರ್ಷಗಳ ಹಿಂದೆ ಪ್ರಣಯ್ನನ್ನು ಕೊಂದಿದ್ದರು. ಈ ವರ್ಷ ಅಮೃತಾ ಅವರ ತಂದೆ ಮಾರುತಿ ರಾವ್ ಸಹ ನಿಧನರಾಗಿದ್ದರು.
ಈ ಘಟನೆಯನ್ನೇ ಬೇಸ್ ಮಾಡಿ, ವರ್ಮಾ ಮರ್ಡರ್ ಚಿತ್ರವನ್ನು ಮಾಡಿದ್ದಾರೆ. ಆದರೆ, ತಮ್ಮ ಅನುಮತಿಯನ್ನೇ ಪಡೆಯದೇ ತಮ್ಮ ಜೀವನವನ್ನಾಧರಿಸಿ ಚಿತ್ರ ಮಾಡುವುದಕ್ಕೆ ಹೇಗೆ ಸಾಧ್ಯ ಎಂದು ಅಮೃತಾ, ನಲಗೊಂಡಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಕುರಿತು ಮಾತನಾಡಿದ್ದ ಅಮೃತಾ, ‘ಕಳೆದ ಕೆಲವು ವರ್ಷಗಳಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ. ನನ್ನ ಗಂಡನ ಮರ್ಡರ್ ಆಗಿದೆ. ನನ್ನ ತಂದೆ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುಃಖದಲ್ಲಿರುವಾಗ ವರ್ಮಾ, ನಮ್ಮ ಜೀವನದಲ್ಲಾದ ಘಟನೆ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ. ಅವರಿಗೆ ಅನುಮತಿ ಕೊಟ್ಟಿದ್ದು ಯಾರು? ಹಾಗಾಗಿ ಅವರ ವಿರುದ್ಧ ದಾವೆ ಹೂಡಿದ್ದೇನೆ’ ಎಂದು ಅಮೃತಾ ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ: ‘ಆಡಿಸಿದಾತ’ನ ಕೈಚಳಕದಲಿ ಮೂಡಿ ಬಂತು ಟೀಸರ್ …
ಈ ವಿಷಯವಾಗಿ ನ್ಯಾಯಾಲಯವು ವರ್ಮಾ ಮತ್ತು ತಂಡದವರಿಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಅದರಂತೆ ಇಂದು ವಿಚಾರಣೆ ನಡೆದಿದ್ದು, ಪೂರ್ತಿ ವಿಚಾರಣೆಯಾಗುವವರೆಗೂ ಚಿತ್ರವನ್ನು ಬಿಡುಗಡೆ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಚಿತ್ರವನ್ನು ತಕ್ಷಣ ಬಿಡುಗಡೆ ಮಾಡಿ ಒಂದಿಷ್ಟು ದುಡ್ಡು ಮಾಡಿಕೊಳ್ಳಬೇಕು ಎಂದು ಕಾದಿದ್ದ ಆರ್ಜಿವಿ ಕನಸಿಗೆ ಇದೀಗ ತಣ್ಣೀರೆರಚಿದಂತಾಗಿದೆ.
ನ್ಯಾಯಾಲಯವು ಈ ವಿಚಾರವಾಗಿ ಪೂರ್ತಿ ವಿಚಾರಣೆ ಮುಗಿಸಿದ ನಂತರ, ಚಿತ್ರ ಬಿಡುಗಡೆ ಮಾಡಬೇಕೋ, ಬೇಡವೋ ಎಂದು ತೀರ್ಪು ನೀಡಲಿದೆ. ಅಲ್ಲಿಯವರೆಗೂ ವಮಾರ್ ಸುಮ್ಮನೆ ಕಾಯದೇ ಬೇರೆ ವಿಧಿಯಿಲ್ಲ.