ಬೆಂಗಳೂರು: ಮಾರಕ ಕರೊನಾ ವೈರಸ್ ಸಂಹಾರಕ್ಕೆ ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆಯಲ್ಲಿ ತಯಾರಾಗುತ್ತಿರುವ ಲಸಿಕೆ ಬಳಸಿಕೊಳ್ಳಲು ಕೇಂದ್ರೀಯ ಔಷಧ ಮಾನದಂಡ ಹಾಗೂ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ) ಅನುಮತಿ ನೀಡಿದೆ.
ಪರವಾನಗಿ ನೀಡುವ ಸಮಯದಲ್ಲಿ ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲಿಸಿ ಲಸಿಕೆಯನ್ನು 10 ದಿನಗಳ ಕಾಲ ವಿಸ್ತರಿತ ಬಳಕೆಗೆ ಸಿಡಿಎಸ್ಸಿಒ ಅನುಮತಿ ನೀಡಿದೆ ಎಂದು ಹೇಳಲಾಗಿದೆ. ಔಷಧ ನಿಯಂತ್ರಣಕ್ಕೆ ದೇಶದಲ್ಲಿ ಅತ್ಯುಚ್ಛ ಸಂಸ್ಥೆಯಾಗಿರುವ ಸಿಡಿಎಸ್ಸಿಒ ಆ್ಯಂಟಿವೈರಲ್ ಲಸಿಕೆ ‘ರೆಮ್ಡೆಸಿವಿರ್’ಅನ್ನು ಶಂಕಿತ ಹಾಗೂ ಸೋಂಕು ದೃಢಪಟ್ಟು ಗಂಭೀರ ಸ್ಥಿತಿಯಲ್ಲಿರುವ ಮಕ್ಕಳು ಹಾಗೂ ವಯಸ್ಕ ರೋಗಿಗಳ ಚಿಕಿತ್ಸೆಗೆ ಬಳಸಬಹುದು ಎಂದು ತಿಳಿಸಿದೆ.
ಇದನ್ನೂ ಓದಿ; ಜುಬಿಲೆಂಟ್ಗೆ ಅನುಮತಿ ನೀಡಿದ ಗಿಲಿಯಾಡ್ ಸೈನ್ಸ್
ಈ ಮೊದಲು ಈ ಲಸಿಕೆಯನ್ನು ಗರಿಷ್ಠ ಐದು ದಿನಗಳ ಬಳಕೆಗೆ ಭಾರತದ ಔಷಧ ಮಹಾನಿಯಂತ್ರಣಾಧಿಕಾರಿ ಸಂಸ್ಥೆಯ ಡಾ.ವಿ.ಜಿ. ಸೋಮಾನಿ ಅನುಮತಿ ನೀಡಿದ್ದರು. ಇದೀಗ ಹತ್ತು ದಿನಗಳ ಬಳಕೆಗೆ ವಿಸ್ತರಿಸಲಾಗಿದೆ.
ರೆಮ್ಡಿಸಿವಿರ್ ಔಷಧವನ್ನು ಅಮೆರಿಕದ ಗಿಲಿಯಾಡ್ ಸಂಸ್ಥೆ ಸಂಶೋಧಿಸಿದೆ. ಇದರ ಹಿಂದೆಯೂ ರೋಚಕ ಕತೆಯಿದೆ. ಯಾವ ಉದ್ದೇಶಕ್ಕಾಗಿ ಇದನ್ನು ಸಂಶೋಧಿಸಲಾಗಿತ್ತೋ ಅದರಲ್ಲಿ ಇದು ಯಶಸ್ವಿಯಾಗಿರಲಿಲ್ಲ. ಬದಲಾಗಿ ಕರೊನಾಗೆ ಪರಿಣಾಮಕಾರಿ ಎನಿಸಿದೆ.
ಇದನ್ನೂ ಓದಿ; ರೆಮ್ಡೆಸಿವಿರ್ ಸಂಶೋಧನೆ ಹಿಂದಿನ ರೋಚಕ ಕತೆ
ಸದ್ಯ ಈ ಔಷಧವನ್ನು ಭಾರತವೂ ಸೇರಿ 123 ದೇಶಗಳಲ್ಲಿ ಉತ್ಪಾದಿಸಿ ಮಾರಾಟ ಮಾಡಲು ನಂಜನಗೂಡಿನ ಜುಬಿಲೆಂಟ್ ಸಂಸ್ಥೆ ಅನುಮತಿ ಪಡೆದಿದೆ. ಈಗಾಗಲೇ ಈ ಲಸಿಕೆಯ ಉತ್ಪಾದನೆಗೆ ಚಾಲನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೇರೆ ಬೇರೆ ದೇಶಗಳಲ್ಲಿ ರೆಮ್ಡೆಸಿವಿರ್ ಬಳಕೆಗೆ ಶಿಫಾರಸು ಮಾಡಲಾಗಿತ್ತದರೂ, ಭಾರತ ಇನ್ನೂ ಅವಕಾಶ ನೀಡಿರಲಿಲ್ಲ. ಇದೀಗ ಭಾರತವೂ ಈ ಲಸಿಕೆ ಬಳಕೆಗೆ ಮುಂದಾಗಿದೆ. ಕರೊನಾ ರೋಗಿ ಚೇತರಿಸಿಕೊಳ್ಳುವ ಅವಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುವಲ್ಲಿ ಈ ಔಷಧ ಪರಿಣಾಮಕಾರಿ ಎಂದು ಚೀನಾ, ಜಪಾನ್, ಅಮೆರಿಕ ಸೇರಿ ಹಲವು ದೇಶಗಳಲ್ಲಿ ನಡೆಸಿದ ಅಧ್ಯಯನದಿಂದ ಸಾಬೀತಾಗಿದೆ.