ಬೆಂಗಳೂರು: ಹೊಸ ಅಧ್ಯಾಯವನ್ನು ಸತತ ಸೋಲುಗಳಿಂದ ಶುರು ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 17ನೇ ಆವೃತ್ತಿಯ ಐಪಿಎಲ್ನಲ್ಲಿ ಆಡಿರುವ ಏಳು ಪಂದ್ಯಗಳ ಪೈಕಿ 6ರಲ್ಲಿ ಸೋತು ಒಂದರಲ್ಲಿ ಮಾತ್ರ ಗೆದ್ದಿದೆ. ಹಾಲಿ ಟೂರ್ನಿಯಲ್ಲಿ ಪ್ಲೇಆಫ್ ಹಾದಿಯನ್ನು ದುರ್ಗಮವಾಗಿರಿಸಿಕೊಂಡಿರುವ ಆರ್ಸಿಬಿಗೆ ಮುಂಬರುವ ಎಲ್ಲಾ ಪಂದ್ಯಗಳನ್ನು ಸೆಮಿಫಿನಾಲೆ ಎಂದು ಪರಿಗಣಿಸಿ ಆಟವಾಡಬೇಕಿದೆ.
ಸತತ ಸೋಲುಗಳ ನಡುವೆಯೇ ಆರ್ಸಿಬಿ ತಂಡ ಘೋಷಣೆ ಒಂದನ್ನು ಮಾಡಿದೆ. ಅದರಂತೆ ಪ್ರತಿಬಾರಿಯಂತೆ ಈ ಬಾರಿಯೂ ಗೋ ಗ್ರೀನ್ ಡೇ ಸಂಪ್ರದಾಯವನ್ನು ಮುಂದುವರಿಸಲಿದೆ. ಮುಂಬರುವ ಪಂದ್ಯದಲ್ಲಿ ಆರ್ಸಿಬಿ ಹಸಿರು ಜೆರ್ಸಿ ಧರಿಸಿ ಮೈದಾನಕ್ಕಿಳಿಯಲಿದೆ. ಈ ವಿಚಾರವನ್ನು ಆರ್ಸಿಬಿ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪ್ರಕಟಿಸಿದೆ.
ಇದನ್ನೂ ಓದಿ: ರಾಜ್ಯದ ವಿವಿಧೆಡೆ ತಂಪೆರೆದ ವರುಣ; ಸಿಡಿಲಿನ ಹೊಡೆತಕ್ಕೆ ನೆಲಕುರುಳಿದ ಐತಿಹಾಸಿಕ ಮೆಹೆತರ್ ಮಹಲ್
ಸತತ ಸೋಲುಗಳಿಂದ ಈಗಾಗಲೇ ತೀವ್ರ ಟೀಕೆಗೆ ಗುರಿಯಾಗಿರುವ ಆರ್ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಕಲ್ಕತ್ತಾ ನೈಟ್ರೈಡರ್ಸ್ ತಂಡವನ್ನು ಎದುರಿಸಲಿದೆ. ವಾಡಿಕೆಯಂತೆ ಈ ಪಂದ್ಯದಲ್ಲಿ ಆರ್ಸಿಬಿ ತಂಡ ಗೋ ಗ್ರೀನ್ ಡೇ ಸಂಪ್ರದಾಯವನ್ನು ಮುಂದುವರಿಸಲಿದೆ. ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ತಂಡ ಹಸಿರು ಜೆರ್ಸಿ ಧರಿಸಿ ಮೈದಾನಕ್ಕಿಳಿಯಲಿದೆ.
2011ರಿಂದಲೂ ಆರ್ಸಿಬಿ ಟೂರ್ನಿಯಲ್ಲಿ ಆಡುವ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ತನ್ನ ಅಭಿಮಾನಿಗಳಲ್ಲಿ ಸ್ವಚ್ಛ ಮತ್ತು ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್ಸಿಬಿ ಈ ಹಸಿರು ಜೆರ್ಸಿಯನ್ನು ಧರಿಸಲಿದೆ. ಅದರಂತೆ ಈ ಬಾರಿಯೂ ಆರ್ಸಿಬಿ ತಂಡ ಕೆಕೆಆರ್ ವಿರುದ್ಧ ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಆಡಲಿದೆ.