ಹೈದರಾಬಾದ್: ದುಲ್ಕರ್ ಸಲ್ಮಾನ್ ಅಭಿನಯದ ಮತ್ತು ಹನು ರಾಘವಪುಡಿ ನಿರ್ದೇಶನದ ಹೊಸ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿಯಾಗಿದ್ದು ಮತ್ತು ಅದಕ್ಕಾಗಿ ತಮ್ಮ ಸಂಭಾವನೆಯನ್ನು ಕಡಿತಗೊಳಿಸಿದ್ದು ಕಳೆದ ವಾರ ಟಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.
ಇದನ್ನೂ ಓದಿ: ನಾಯಕ-ಖಳನಾಯಕರ ನಡುವಿನ ಖೇಲ್ …
ಈಗ ಅದೇ ಚಿತ್ರದಿಂದ ಇನ್ನೊಂದು ಸುದ್ದಿ ಬಂದಿದ್ದು, ಈ ಬಾರಿ ಚಿತ್ರಕ್ಕೆ ಮತ್ತೊಬ್ಬ ನಾಯಕಿಯಾಗಿ ರಾಶಿ ಖನ್ನಾ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನೂ ಹೆಸರಿಡದ ಈ ಚಿತ್ರಕ್ಕೆ, ಈ ಮುನ್ನ ರಶ್ಮಿಕಾ ಮಂದಣ್ಣ ಮತ್ತೊಬ್ಬ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಬಂದಿರುವ ಸುದ್ದಿಯ ಪ್ರಕಾರ, ಈ ಚಿತ್ರದಿಂದ ರಶ್ಮಿಕಾ ಹೊರನಡೆದಿದ್ದಾರೆ ಎಂದು ಹೇಳಲಾಗಿದ್ದು, ರಶ್ಮಿಕಾ ಬದಲಿಗೆ ರಾಶಿ ಖನ್ನಾ ನಟಿಸುತ್ತಿದ್ದಾರೆ ಎಂಬ ವರ್ತಮಾನವೊಂದು ಕೇಳಿಬರುತ್ತಿದೆ.
ಹೌದು, ಸದ್ಯಕ್ಕೆ ಟಾಲಿವುಡ್ನ ಬಹುಬೇಡಿಕೆಯ ನಟಿಯಾಗಿದ್ದಾರೆ ರಶ್ಮಿಕಾ. ಅಲ್ಲದೆ, ಹಲವು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಈ ಮಧ್ಯೆ, ದುಲ್ಕರ್ ಅಭಿನಯದ ಈ ಹೊಸ ಚಿತ್ರಕ್ಕೆ ಅವರಿಗೆ ಅವಕಾಶ ಬಂದಿದೆ. ಆದರೆ, ಈಗಾಗಲೇ ಹಲವು ಚಿತ್ರಗಳನ್ನು ಒಪ್ಪಿಕೊಂಡಿರುವ ರಶ್ಮಿಕಾಗೆ ಈ ಚಿತ್ರಕ್ಕೆ ಡೇಟ್ಸ್ ಹೊಂದಿಸುವುದಕ್ಕೆ ಸಾಧ್ಯವಾಗಲಿಲ್ಲವಂತೆ. ಆ ಕಾರಣಕ್ಕೆ ಅವರು ಈ ಚಿತ್ರದಿಂದ ಹೊರನಡೆದಿದ್ದು, ಅವರ ಬದಲು ರಾಶಿ ಖನ್ನಾ ನಟಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪ್ರಶಸ್ತಿ ಗಳಿಸುವುದು ಈ ಚಿತ್ರದ ಉದ್ದೇಶ ಅಲ್ಲ: ಶಕೀಲಾ
ಯುದ್ಧದ ಹಿನ್ನೆಲೆಯಿರುವ ಈ ಚಿತ್ರದಲ್ಲಿ ಸೈನ್ಯದ ಲೆಫ್ಟಿನೆಂಟ್ ಪಾತ್ರದಲ್ಲಿ ದುಲ್ಕರ್ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ಚಿತ್ರದ ಮುಂದಿನ ವರ್ಷದ ಆರಂಭದಲ್ಲಿ ಶುರುವಾಗಲಿದೆ.