ಸುಶಾಂತ್ ಸಾವಿನ ಬೆನ್ನಲ್ಲೇ ಬಾಲಿವುಡ್ನಲ್ಲಿನ ನೆಪೋಟಿಸಂ ಬಗ್ಗೆ ಹಲವಾರು ಕಲಾವಿದರು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಹೊರಗಿನ ಪ್ರತಿಭೆಗಳಿಗೆ ಬಾಲಿವುಡ್ನಲ್ಲಿ ಮನ್ನಣೆ ನೀಡುವುದಿಲ್ಲ ಎಂಬ ಮಾತುಗಳು ಹೇಳಿಬರುತ್ತಿವೆ. ಒಂದಷ್ಟು ಸಂಸ್ಥೆಗಳು ಇಡೀ ಬಾಲಿವುಡ್ನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ದರ್ಬಾರ್ ಮಾಡುತ್ತಿವೆ ಎಂದೂ ಆರೋಪಗಳು ಹೇಳಿಬರುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಎಂಎನ್ಸಿ ಪಕ್ಷ, ಸಿನಿಮಾ ವಿಚಾರದಲ್ಲಿ ನೆಪೋಟಿಸಂ ಎದುರಾದರೆ, ನಮ್ಮ ಗಮನಕ್ಕೆ ತನ್ನಿ, ಅಂಥವರಿಗೆ ನಾವು ತಕ್ಕ ಪಾಠ ಕಲಿಸುತ್ತೇವೆ ಎಂದಿತ್ತು. ಇದೀಗ ಆ ಹೇಳಿಕೆ ಉಲ್ಟಾ ಹೊಡೆದಿದೆ.
ಇದನ್ನೂ ಓದಿ: ‘ಮರ್ಡರ್’ ಸಿನಿಮಾ ವಿವಾದದ ಬೆನ್ನಲ್ಲೇ ಆರ್ಜಿವಿ ಕೊಟ್ಟರು ಹೀಗೊಂದು ಸ್ಪಷ್ಟನೆ
ಅಂದರೆ, ನಮಗೂ ಮತ್ತು ಬಾಲಿವುಡ್ಗೂ ಯಾವುದೇ ಸಂಬಂಧವಿಲ್ಲ. ನಮ್ಮ ಪಕ್ಷ ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತಲೆ ಹಾಕುವುದಿಲ್ಲ ಎಂದು ರಾಜ್ ಠಾಕ್ರೆ ಹೇಳಿಕೊಂಡಿದ್ದಾರೆ. ಅಂದಹಾಗೆ, ಎಂಎನ್ಎಸ್ ಪಕ್ಷದ ಉಪಾಧ್ಯಕ್ಷ ವಾಗಿಶ್ ಸರಸ್ವತ್, ರಾಜ್ ಠಾಕ್ರೆ ಗಮನಕ್ಕೆ ತರದೆ, ‘ಬಾಲಿವುಡ್ನಲ್ಲಿ ನೆಪೋಟಿಸಂ ರೀತಿಯ ಘಟನೆಗಳು ನಡೆದರೆ, ಶೀಘ್ರ ನಮ್ಮ ಗಮನಕ್ಕೆ ತನ್ನಿ. ಸರಿಯಾದ ಪಾಠ ಕಲಿಸಲಾಗುವುದೆಂದು‘ ಹೇಳಿದ್ದರು. ಇದೀಗ ಆ ಸುದ್ದಿಗೆ ಸ್ವತಃ ರಾಜ್ ಠಾಕ್ರೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಕೋವಿಡ್ ಸೋಂಕಿತರಿಗೆ ರಿಷಿ ಕಪೂರ್ ಅಳಿಯನಿಂದ ಪ್ಲಾಸ್ಮಾ ದಾನ
ಇನ್ನು ನೆಪೋಟಿಸಂನ ಶಾಶ್ವತವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಸುಶಾಂತ್ ಕುಟುಂಬದಿಂದ ನೆಪೋಮೀಟರ್ ಹೆಸರಿನ ಆ್ಯಪ್ ಅಭಿವೃದ್ಧಿಪಡಿಸಲಾಗಿತ್ತು. ನೆಪೋಮೀಟರ್ ಆ್ಯಪ್ನಲ್ಲಿ ಒಟ್ಟು 5 ಕೆಟಗೆರಿ ಮಾಡಲಾಗಿದೆ. ಆ ಪೈಕಿ ನಿರ್ಮಾಪಕರು, ಮುಖ್ಯ ಪಾತ್ರಧಾರಿಗಳು, ಪೋಷಕ ಕಲಾವಿದರು, ನಿರ್ದೇಶಕರು, ಬರಹಗಾರರು. ಇದರಲ್ಲಿ ಅವರವರ ಹಿನ್ನೆಲೆಯನ್ನೂ ನೀಡಲಾಗುತ್ತಿದ್ದು, ಎಷ್ಟು ಪ್ರಮಾಣದಲ್ಲಿ ಹೊರಗಿನ ಕಲಾವಿದರನ್ನು, ತಾಂತ್ರಿಕ ವರ್ಗದವರನ್ನು ಬಳಸಿಕೊಂಡಿದ್ದಾರೆಂಬುದು ಗೊತ್ತಾಗುತ್ತದೆ. ನೆಪೋಮೀಟರ್ ಆ್ಯಪ್ ಅಭಿವೃದ್ಧಿಪಡಿಸಿದ್ದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸುಶಾಂತ್ ಸಿಂಗ್ಗೆ ಆದ ಸ್ಥಿತಿ ಇನ್ಯಾರಿಗೂ ಬರುವುದು ಬೇಡ ಎಂದು ನೆಟ್ಟಿಗರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)