ಮುಂಬೈ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದ ಸ್ಲಮ್ ಡಾಗ್ ಮಿಲಿಯನೇರ್ ಚಿತ್ರದ “ಜೈ ಹೋ” ಹಾಡಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಖ್ಯಾತ ನಿರ್ದೇಶಕ ಎ.ಆರ್. ರೆಹಮಾನ್ ಅವರಲ್ಲ ಎನ್ನುವ ಮೂಲಕ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (ಆರ್ಜಿವಿ) ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಫಿಲ್ಮ್ ಕಂಪಾನಿಯನ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಆರ್ಜಿವಿ, ಜೈ ಹೋ ಹಾಡನ್ನು ಕಂಪೋಸ್ ಮಾಡಿದ್ದು, ರೆಹಮಾನ್ ಅಲ್ಲ, ಗಾಯಕ ಸುಖ್ವಿಂದರ್ ಸಿಂಗ್ ಎಂದು ಹೇಳಿದ್ದಾರೆ. ಆರ್ಜಿವಿ ಅವರ ಈ ಮಾತು ಇದೀಗ ಬಾಲಿವುಡ್ ಸಿನಿ ಅಂಗಳದಲ್ಲಿ ಭಾರಿ ವಿವಾದವನ್ನು ಹುಟ್ಟು ಹಾಕಿದೆ.
ಆರ್ಜಿವಿ ಹೇಳಿದ್ದೇನು?
ಆರಂಭದಲ್ಲಿ ಜೈ ಹೋ ಹಾಡನ್ನು ಸುಭಾಷ್ ಘಾಯ್ ಅವರು ನಿರ್ದೇಶನ ಮಾಡಿದ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಯುವರಾಜ್ ಸಿನಿಮಾಗಾಗಿ 2008ರಲ್ಲಿ ಜೈ ಹೋ ಹಾಡನ್ನು ಕಂಪೋಸ್ ಮಾಡಲಾಯಿತು. ಆದಾಗ್ಯೂ, ಆ ಸಿನಿಮಾಗೆ ಜೈ ಹೋ ಹಾಡು ಹೊಂದುವುದಿಲ್ಲ ಅಂತ ಅದನ್ನು ಬಿಡಲಾಯಿತು. ಕೊನೆಗೆ ಆ ಹಾಡನ್ನು ಅದೇ ವರ್ಷ ಬಿಡುಗಡೆಯಾದ ಆಸ್ಕರ್ ವಿನ್ನಿಂಗ್ “ಸ್ಲಮ್ ಡಾಗ್ ಮಿಲಿಯನೇರ್” ಸಿನಿಮಾಗೆ ರೆಹಾಮನ್ ಬಳಸಿಕೊಂಡರು ಎಂದು ಆರ್ಜಿವಿ ಹೇಳಿದರು.
ಯುವರಾಜ್ ಸಿನಿಮಾಗೆ ರೆಹಮಾನ್ ಮ್ಯೂಸಿಕ್ ನೀಡಬೇಕಿತ್ತು. ಅಲ್ಲದೆ, ಸುಭಾಷ್ ಘಾಯ್ ಜತೆ ಒಪ್ಪಂದಕ್ಕೆ ಸಹಿ ಕೂಡ ಹಾಕಿದರು. ಆ ಸಂದರ್ಭದಲ್ಲಿ ರೆಹಮಾನ್ ಲಂಡನ್ನಲ್ಲಿದ್ದರು. ಆದರೆ, ಸಿನಿಮಾ ಬೇಗ ಶುರುವಾಗಬೇಕಿದ್ದರಿಂದ ರೆಹಮಾನ್ ಅವರು ಆ ಸಂದರ್ಭದಲ್ಲಿ ಸುಖ್ವಿಂದರ್ ಸಿಂಗ್ ಅವರ ಸಹಾಯವನ್ನು ಪಡೆದು ಜೈ ಹೋ ಹಾಡಿಗೆ ಕಂಪೋಸ್ ಮಾಡಿದರು. ಈ ವಿಚಾರ ಸುಭಾಷ್ ಅವರಿಗೆ ತಿಳಿದಾಗ ರೆಹಮಾನ್ ಮೇಲೆ ಕೋಪಗೊಂಡರು. ಸಂಗೀತ ನಿರ್ದೇಶಕ ನೀನು ಎಂಬ ಕಾರಣಕ್ಕೆ ನಾನು ಕೋಟ್ಯಂತರ ರೂಪಾಯಿಗಳನ್ನು ನಿನಗೆ ಪಾವತಿಸಿದೆ. ಆದರೆ, ನೀನು ಸುಖ್ವಿಂದರ್ ಸಿಂಗ್ ಕೈಯಲ್ಲಿ ಮ್ಯೂಸಿಕ್ ಕಂಪೋಸ್ ಮಾಡಿಸಿದ್ದೀಯಾ. ನನಗೆ ಸುಖ್ವಿಂದರ್ ಸಿಂಗ್ ಬೇಕು ಅಂದಿದ್ದರೆ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕುತ್ತಿದೆ. ನನ್ನ ಹಣವನ್ನು ತೆಗೆದುಕೊಂಡು ಸುಖ್ವಿಂದರ್ ಸಿಂಗ್ ಕೈಯಲ್ಲಿ ಮ್ಯೂಸಿಕ್ ಮಾಡಿಸಲು ನೀನು ಯಾರು? ಎಂದು ಸುಭಾಷ್ ಅವರು ರೆಹಮಾನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು ಎಂದು ಆರ್ಜಿವಿ ಸ್ಫೋಟಕ ಸಂಗತಿಯನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
ಆ ಸಂದರ್ಭದಲ್ಲಿ ಸುಭಾಷ್ ಅವರಿಗೆ ರೆಹಮಾನ್ ಉತ್ತರ ಸಹ ನೀಡಿದ್ದರು. ಸರ್, ನೀವು ನನ್ನ ಹೆಸರಿಗೆ ಮಾತ್ರ ಪಾವತಿಸುತ್ತಿದ್ದೀರಿ ಹೊರತು ನನ್ನ ಸಂಗೀತಕ್ಕಲ್ಲ. ನಾನು ಒಪ್ಪಿದರೆ ಮಾತ್ರ ಅದು ನನ್ನದಾಗುತ್ತದೆ. ಈಗ ನೀವು ಇಲ್ಲಿದ್ದೀರಿ, ನಾನು ತಾಲ್ ಸಂಗೀತವನ್ನು ಎಲ್ಲಿಂದ ತೆಗೆದುಕೊಂಡೆ ಎಂದು ನಿಮಗೆ ಹೇಗೆ ಗೊತ್ತು? ಎಂದು ಪ್ರಶ್ನೆ ಮಾಡಿದ್ದರು.
ಸುಖ್ವಿಂದರ್ ಸಿಂಗ್ ಸ್ಪಷ್ಟನೆ
ಆರ್ಜಿವಿ ಹೇಳಿಕೆ ತೀವ್ರ ವಿವಾದ ಹುಟ್ಟು ಹಾಕುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಸುಖ್ವಿಂದರ್ ಸಿಂಗ್, ಆರ್ಜಿವಿ ಹೇಳಿದ್ದು ಸುಳ್ಳು ಎಂದಿದ್ದಾರೆ. ನಾನು ಹಾಡಿಗೆ ಮ್ಯೂಸಿಕ್ ಕಂಪೋಸ್ ಮಾಡಿಲ್ಲ. ಬದಲಾಗಿ ಹಾಡಿದ್ದೇನೆ ಅಷ್ಟೇ ಎಂದಿದ್ದಾರೆ. ಹಾಡನ್ನು ಕಂಪೋಸ್ ಮಾಡಿದ್ದು ರೆಹಮಾನ್ ಅವರೇ ನಾನು ಧ್ವನಿ ನೀಡಿದ್ದೇನೆ. ಗುಲ್ಜರ್ ಸಾಹೇಬ್ ಎಂಬುವರು ಈ ಹಾಡನ್ನು ಬರೆದರು. ಅದನ್ನು ರೆಹಮಾನ್ ಇಷ್ಟಪಟ್ಟರು. ಬಳಿಕ ಮುಂಬೈನ ಜುಹುನಲ್ಲಿರುವ ನನ್ನ ಸ್ಟುಡಿಯೋದಲ್ಲಿ ಹಾಡನ್ನು ರೆಹಮಾನ್ ಅವರು ಕಂಪೋಸ್ ಮಾಡಿದರು. ಅದನ್ನು ಸುಭಾಷ್ ಜೀ ಕೇಳಿದರು. ಆರಂಭದಲ್ಲಿ ನಾನು ಆ ಹಾಡಿಗೆ ಧ್ವನಿ ನೀಡಿರಲಿಲ್ಲ. ಯುವರಾಜ್ ಸಿನಿಮಾಗೆ ರಿಜೆಕ್ಟ್ ಆದ ಬಳಿಕ ಸ್ಲಮ್ ಡಾಗ್ ಮಿಲಿಯನೇರ್ ಚಿತ್ರಕ್ಕೆ ಹಾಡಲಾಯಿತು. ಈ ವೇಳೆ ನಾನು ಧ್ವನಿ ನೀಡಿದೆ ಎಂದು ಸುಖ್ವಿಂದರ್ ಸಿಂಗ್ ಹೇಳಿದ್ದಾರೆ. ಈ ಮೂಲಕ ಆರ್ಜಿವಿ ಹುಟ್ಟುಹಾಕಿದ್ದ ವಿವಾದಕ್ಕೆ ತೆರೆ ಎಳೆದಿದ್ದಾರೆ. (ಏಜೆನ್ಸೀಸ್)
ಯಾವಾಗ ವರ್ಜಿನಿಟಿ ಕಳೆದುಕೊಂಡೆ? ಮಲೈಕಾ ಕೇಳಿದ ಪ್ರಶ್ನೆಗೆ ಪುತ್ರ ಅರ್ಹಾನ್ ಕೊಟ್ಟ ಉತ್ತರ ವೈರಲ್
ಅತ್ತೆ ಜತೆ ಅಳಿಯನ ಲಿಪ್ಲಾಕ್! ಕೊನೆಗೂ ಮೌನ ಮುರಿದ ಬಿಗಿಲ್ ಪಾಂಡಿಯಮ್ಮಳ ಪತಿ