ನವದೆಹಲಿ: ಕೋವಿಡ್-19 ಲಾಕ್ಡೌನ್ನಿಂದಾಗಿ ತೊಂದರೆಗೆ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ಶ್ರಮಿಕ್ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿತ್ತು. ದೇಶದ ವಿವಿಧ ಭಾಗಗಳಿಂದ ಸಂಚರಿಸಿದ ಈ ರೈಲುಗಳಿಗಾಗಿ ಕೇಂದ್ರ ಸರ್ಕಾರ 2,400 ಕೋಟಿ ರೂ. ವೆಚ್ಚ ಮಾಡಿತ್ತು. ಇದರಿಂದ ರೈಲ್ವೆ ಇಲಾಖೆಗೆ 429.90 ಕೋಟಿ ರೂ. ಆದಾಯವೂ ಬಂದಿದೆ. ಇಷ್ಟು ಅತ್ಯಲ್ಪ ಆದಾಯ ಬಂದಿದ್ದರೂ ಬಡವರಿಗೆ ಸೌಕರ್ಯ ಕಲ್ಪಿಸಲು ಹಣ ಪಡೆಯುವ ಮೂಲಕ ಸರ್ಕಾರ ಭರ್ಜರಿ ಲಾಭ ಮಾಡಿಕೊಂಡಿದೆ. ತನ್ಮೂಲಕ ಅದು ಬಡವರ ವಿರೋಧಿ ನೀತಿ ಅನುಸರಿಸಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹುಯ್ಯಲೆಬ್ಬಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಜುಲೈ 9ರವರೆಗೆ ಶ್ರಮಿಕ್ ವಿಶೇಷ ರೈಲುಗಳು ಸಂಚರಿಸಿವೆ. ಇದರಿಂದ ಸರ್ಕಾರ 429.90 ಕೋಟಿ ರೂ. ಆದಾಯ ಬಂದಿದ್ದು ಸರ್ಕಾರಕ್ಕೆ ಲಾಭವಾಗಿದೆ ಎಂದು ದೂರಿದ್ದಾರೆ.
बीमारी के ‘बादल’ छाए हैं, लोग मुसीबत में हैं, बेनिफ़िट ले सकते हैं – आपदा को मुनाफ़े में बदल कर कमा रही है ग़रीब विरोधी सरकार। pic.twitter.com/YSUsxIpSvC
— Rahul Gandhi (@RahulGandhi) July 25, 2020
ದೇಶಾದ್ಯಂತ ಸೋಂಕಿನ ಕರಿಛಾಯೆ ಹಬ್ಬಿದೆ. ಜನರು ತೊಂದರೆಯಲ್ಲಿದ್ದಾರೆ. ಅವರ ಅಸಹಾಯಕತೆಯನ್ನು ಲಾಭಕ್ಕಾಗಿ ಬಳಸಿಕೊಳ್ಳಲಾಗಿದೆ. ಈ ಬಡವರ ವಿರೋಧಿ ಸರ್ಕಾರ ಪಿಡುಗನ್ನು ಲಾಭವನ್ನಾಗಿ ಪರಿವರ್ತಿಸಿಕೊಂಡಿದೆ ಎಂದು ಟ್ವೀಟ್ನಲ್ಲಿ ಆಕ್ಷೇಪಿಸಿದ್ದಾರೆ. ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಖರ್ಚು-ಆದಾಯದ ತಃಖ್ತೆಯನ್ನು ತಮ್ಮ ಟ್ವೀಟ್ಗೆ ಲಗತ್ತಿಸಿದ್ದಾರೆ.
ಇದನ್ನೂ ಓದಿ: ಆತ್ಮನಿರ್ಭರ ಭಾರತ ಪ್ಯಾಕೇಜ್ ವ್ಯಾಪ್ತಿಯಲ್ಲಿ ಇದುವರೆಗೆ 5 ಪ್ರಸ್ತಾವನೆಗಳಿಗೆ ಅಂಕಿತ
ಕೋವಿಡ್-19 ಲಾಕ್ಡೌನ್ನಿಂದ ಕೆಲಸ ಕಳೆದುಕೊಂಡಿದ್ದ ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಸರ್ಕಾರ ಮೇ 1ರಿಂದ ಶ್ರಮಿಕ್ ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಿತ್ತು. ಮೇ 1ರಿಂದ ಜುಲೈ 9ರವರೆಗೆ 4,496 ಶ್ರಮಿಕ್ ವಿಶೇಷ ರೈಲುಗಳ ಸಂಚಾರ ಏರ್ಪಡಿಸಿತ್ತು. ಇದಕ್ಕಾಗಿ ಸರ್ಕಾರ 2,400 ಕೋಟಿ ರೂ. ವ್ಯಯಿಸಿತ್ತು. ಈಗ ಬಂದಿರುವ 429.90 ಕೋಟಿ ರೂಪಾಯಿ ಆದಾಯವೂ ಅಲ್ಲ, ಲಾಭವೂ ಅಲ್ಲ. ಮಾಡಿದ ಖರ್ಚಿನ ಭಾರವನ್ನು ಈ ಮೊತ್ತ ತಗ್ಗಿಸಿದೆ ಅಷ್ಟೇ. ಇದನ್ನು ಹಾಗೆಯೇ ಭಾವಿಸಬೇಕಾಗುತ್ತದೆಯೇ ಹೊರತು, ಲಾಭವಾಗಿ ಅಲ್ಲ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ವಿವರ ನೀಡಿರುವ ಅವರು, ಶ್ರಮಿಕ್ ವಿಶೇಷ ರೈಲುಗಳಲ್ಲಿ ಒಟ್ಟು 6.3 ದಶಲಕ್ಷ ಜನರು ಪ್ರಯಾಣಿಸಿದ್ದಾರೆ. ಈ ರೈಲುಗಳ ಪ್ರಯಾಣಿಕರಿಂದ ಸರಾಸರಿ ತಲಾ 600 ರೂ. ಶುಲ್ಕ ವಸೂಲಿ ಮಾಡಲಾಗಿದೆ. ಆದರೆ, ಈ ರೈಲುಗಳ ಸಂಚಾರ ಏರ್ಪಡಿಸಲು ಇಲಾಖೆ ಪ್ರತಿ ಪ್ರಯಾಣಿಕರಿಗೆ ಸರಾಸರಿ 3,400 ರೂ. ವ್ಯಯಿಸಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಕೇರಳದಲ್ಲಿದ್ದಾರೆ 200 ಐಎಸ್ ಉಗ್ರರು : ವಿಶ್ವಸಂಸ್ಥೆ ವರದಿ ಎಚ್ಚರಿಕೆ