ನವದೆಹಲಿ: ಪ್ರತಿಪಕ್ಷಗಳ ಬಹಿಷ್ಕಾರದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 28) ಹೊಸ ಸಂಸತ್ ಭವನವನ್ನು ಉದ್ಘಾಟಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೆ ಅವರನ್ನು ಅವಮಾನಿಸಲಾಗಿದೆ ಎಂದು ಪ್ರತಿಪಕ್ಷಗಳು ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಿವೆ. ಇದರ ನಡುವೆಯೂ ಐತಿಹಾಸಿಕ ನೂತನ ಸಂಸತ್ ಭವನ ಲೋಕಾರ್ಪಣೆಗೊಂಡಿದೆ.
ಇದನ್ನೂ ಓದಿ: ನೂತನ ಸಂಸತ್ ಭವನ ಉದ್ಘಾಟನೆ; ಫೋಟೋ ಝಲಕ್ ಇಲ್ಲಿದೆ…
ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಸಂಸತ್ತು ಜನರ ಧ್ವನಿ! ಸಂಸತ್ ಭವನದ ಉದ್ಘಾಟನೆಯನ್ನು ಪ್ರಧಾನಿ ಪಟ್ಟಾಭಿಷೇಕ ಎಂದು ಪರಿಗಣಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಷ್ಟ್ರಪತಿಗೆ ಆಹ್ವಾನ ನೀಡದಿರುವುದು ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ
ದೇಶದ ರಾಷ್ಟ್ರಪತಿ ಅವರನ್ನು ನೂತನ ಸಂಸತ್ ಭವನದ ಉದ್ಘಾಟನೆಗೆ ಆಹ್ವಾನಿಸದಿರುವುದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಈ ಹಿಂದೆ ಕಿಡಿಕಾರಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್, ಸಂಸತ್ತು ಅಹಂಕಾರದ ಇಟ್ಟಿಗೆಗಳಿಂದ ಕಟ್ಟಿಲ್ಲ. ಸಾಂವಿಧಾನಿಕ ಮೌಲ್ಯಗಳಿಂದ ಸಂಸತ್ ಕೂಡಿದೆ ಎಂದು ಹೇಳಿಕೊಂಡಿದ್ದರು.
ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್ಜೆಡಿ
ಈಗಾಗಲೇ ವಿವಾದದ ಸುಳಿಯಲ್ಲಿರುವ ಸಿಲುಕಿರುವ ನೂತನ ಸಂಸತ್ ಭವನವನ್ನು ರಾಷ್ಟ್ರೀಯ ಜನತಾ ದಳ (ಆರ್ಜೆಡಿ)ವು ಶವಪೆಟ್ಟಿಗೆ ಹೋಲಿಸುವ ಮೂಲಕ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ. ಆರ್ಜೆಡಿ ಹೇಳಿಕೆ ದೇಶದ್ರೋಹದ ಹೇಳಿಕೆ ಎಂದು ಬಿಜೆಪಿ ಹೇಳಿದೆ.
ಇಂದು ನೂತನ ಸಂಸತ್ ಉದ್ಘಾಟನೆ ನಡುವೆ ಆರ್ಜೆಡಿ ಟ್ವೀಟ್ ಮಾಡಿದೆ. ಒಂದು ಕಡೆ ಶವಪೆಟ್ಟಿಗೆಯ ಫೋಟೋ ಮತ್ತು ಇನ್ನೊಂದು ಕಡೆ ಹೊಸ ಸಂಸತ್ ಫೋಟೋ ಹಾಕಿ ಟ್ವೀಟ್ ಮಾಡಿರುವ ಆರ್ಜೆಡಿ ಏನಿದು? ಎಂದು ಅಡಿಬರಹ ನೀಡಿದೆ. ಈ ಮೂಲಕ ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆ (ಕಾಫಿನ್)ಗೆ ಹೋಲಿಸಿದೆ.
ಈ ಬಗ್ಗೆ ಆರ್ಜೆಡಿ ನಾಯಕ ಶಕ್ತಿ ಸಿಂಗ್ ಯಾದವ್ ಅವರು ಪ್ರತಿಕ್ರಿಯಿಸಿ, ನಮ್ಮ ಟ್ವೀಟ್ನಲ್ಲಿರುವ ಶವಪೆಟ್ಟಿಗೆಯು ಪ್ರಜಾಪ್ರಭುತ್ವವನ್ನು ಸಮಾಧಿ ಮಾಡುವುದನ್ನು ಪ್ರತಿನಿಧಿಸುತ್ತದೆ. ಇದನ್ನು ದೇಶ ಒಪ್ಪಿಕೊಳ್ಳುವುದಿಲ್ಲ. ಸಂಸತ್ತು ಪ್ರಜಾಪ್ರಭುತ್ವದ ದೇಗುಲವಾಗಿದೆ ಮತ್ತು ಇದು ಚರ್ಚೆಗಳ ಸ್ಥಳವಾಗಿದೆ ಎಂದಿದ್ದಾರೆ.