ವಿಜಯನಗರ: ಆಧುನಿಕ ಜೀವನದ ಭರಾಟೆಯಲ್ಲಿ ಮಾನವೀಯತೆಯು ಅಳಿವಿನಂಚಿಗೆ ಬಂದು ನಿಂತಿರುವುದು ಮಾತ್ರ ಸುಳ್ಳಲ್ಲ. ಇಂದು ಮಾನವೀಯತೆ ಮರೀಚಿಕೆ ಆಗಿರುವುದು ವಿಪರ್ಯಾಸದ ಸಂಗತಿ. ಡಿಜಿಟಲ್ ದುನಿಯಾ ಒಳಗೆ ಜೀವಿಸುತ್ತಿರುವ ಜನರು ಮಾನವೀಯತೆ ಸಂಪೂರ್ಣ ಮರೆತಿದ್ದಾರೆ ಎನ್ನುವುದಕ್ಕೆ ಈ ಒಂದು ಘಟನೆ ತಾಜಾ ಸಾಕ್ಷಿಯಾಗಿದೆ.
ಒಬ್ಬ ವ್ಯಕ್ತಿ ಸಾವಿಗೆ ಶರಣಾಗುತ್ತಿದ್ದಾನೆ ಅಂತಾ ಗೊತ್ತಾದಾಗ ಮನುಷ್ಯನಾಗಿ ಮೊದಲು ಮಾಡಬೇಕಾದ ಕರ್ತವ್ಯ ಏನೆಂದರೆ ಪ್ರಾಣ ಉಳಿಸಲು ಯತ್ನಿಸುವುದು, ಬುದ್ಧಿ ಮಾತು ಹೇಳುವುದು ಹಾಗೂ ಧೈರ್ಯ ತುಂಬುವುದು. ಆದರೆ, ಇಲ್ಲಿ ನಡೆದಿರುವುದು ಇಡೀ ಮನುಕುಲವೇ ತಲೆತಗ್ಗಿಸುವಂತಹ ಘಟನೆ. ನೇಣು ಹಾಕಿಕೊಳ್ಳದಂತೆ ತಡೆಯುವುದನ್ನು ಬಿಟ್ಟು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಅಮಾನವೀಯ ಘಟನೆ ಹೊಸಪೇಟೆ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.
ವಿವರಣೆಗೆ ಬರುವುದಾದರೆ, ಹನುಮನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಫ್ಲೈಓವರ್ ಮೇಲಿರುವ ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ಮಂಜುನಾಥ್ (25) ಎಂದು ಗುರುತಿಸಲಾಗಿದೆ. ನೇಣು ಹಾಕಿಕೊಳ್ಳುವುದನ್ನು ವಿಡಿಯೋ ಮಾಡುತ್ತಿರುವ ಕೆಲವರು ಮಂಜುನಾಥ್ನನ್ನು ಕಾಪಾಡುವ ಕನಿಷ್ಟ ಪ್ರಯತ್ನವನ್ನೂ ಮಾಡದೇ, ಕುಡಿದು ಹೀಗೆ ಮಾಡಿಕೊಳ್ಳುತ್ತಿದ್ದಾನೆ ಎಂದು ವಿಡಿಯೋದಲ್ಲಿ ಮಾತನಾಡಿಕೊಂಡಿದ್ದಾರೆ.
ಈ ವಿಡಿಯೋ ಮರೆಯಾದ ಮಾನವೀಯತೆಗೆ ಕನ್ನಡಿ ಹಿಡಿದಂತಿದೆ. ಪ್ರಯತ್ನಿಸಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಬಹುದಾಗಿತ್ತು. ಜೀವನದಲ್ಲಿ ಜಿಗುಪ್ಸೆಗೊಂಡು ಮಂಜುನಾಥ್ ನೇಣಿಗೆ ಶರಣಾಗಿದ್ದಾರೆ. ತಾನೇ ಉಟ್ಟಿದ್ದ ಲುಂಗಿಯಿಂದ ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಮಂಜುನಾಥ್ ಸಾವಿಗೆ ಶರಣಾಗಿದ್ದು, ಆತನ ಸಾವು ಮಾನವೀಯತೆಯ ಸಾವಿಗೆ ಉದಾಹರಣಯಂತಿದೆ. ಇನ್ನಾದರೂ ಮನುಷ್ಯ ಬದಲಾಗಬೇಕಿದೆ. (ದಿಗ್ವಿಜಯ ನ್ಯೂಸ್)
ಹಾವು ಕಚ್ಚಿ ಮಹಿಳೆ ಸಾವು: ಸರಿಯಾದ ಸಮಯಕ್ಕೆ ವೈದ್ಯರು ಸಿಗದೇ ಮಹಿಳೆಯ ದುರಂತ ಅಂತ್ಯ
ಈ ಒಂದು ಕಾರಣಕ್ಕೆ ಮದ್ವೆಯಾಗಲು ತುಂಬಾ ಭಯವಂತೆ! ಸಂದರ್ಶನದಲ್ಲಿ ಮನದ ಮಾತು ಬಿಚ್ಚಿಟ್ಟ ನಟ ಸಿಂಬು
ಕ್ರಿಮಿನಲ್ ಕೇಸ್ ಎಚ್ಚರಿಕೆ ನಂತರವೂ ನಿಲ್ಲದ ಲೂಟಿ!; 2020ರಲ್ಲೇ ಇಂಜಿನಿಯರ್ಗಳ ಗೋಲ್ಮಾಲ್ ಬಯಲು